ಕುಮಾರಸ್ವಾಮಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ: ರೇಣುಕಾಚಾರ್ಯ ವ್ಯಂಗ್ಯ

Public TV
2 Min Read

– ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಸವಾಲು

ಮೈಸೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನನಗೆ ಜೀವ ಬೆದರಿಕೆ ಇದೆ ಎನ್ನುತ್ತಾ ಜನರ ವಿಶ್ವಾಸ ಗಿಟ್ಟಿಸುವ ಗಿಮಿಕ್ ಮಾಡುತ್ತಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.

ಜಿಲ್ಲೆಯ ಕೆಆರ್ ನಗರ ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಯಾರಿಂದ ಬೆದರಿಕೆ ಇದೆ ಅಂತ ಗೊತ್ತಿಲ್ಲ. ಅವರ ಜನಾಂಗ ಕೂಡ ಅವರಿಂದ ದೂರ ಸರಿಯುತ್ತಿದೆ. ಹೀಗಾಗಿ ಅನುಕಂಪದ ಮೂಲಕ ಹತ್ತಿರವಾಗಲು ಹೊರಟಿದ್ದಾರೆ. ಇದಕ್ಕಾಗಿ ಅವರು ಪದೇ ಪದೇ ಕಣ್ಣೀರು ಹಾಕುವುದನ್ನು ನಾವು ನೋಡಿದ್ದೇವೆ. ನೀವು ಮಾಜಿ ಮುಖ್ಯಮಂತ್ರಿ, ನಿಜವಾಗಲೂ ನಿಮಗೆ ಬೆದರಿಕೆ ಇದ್ದರೆ ದೂರು ಕೊಡಿ. ಯಾರಿಂದ ಬೆದರಿಕೆ ಪತ್ರ ಬಂದಿದೆ, ಯಾವಾಗ ಬೆದರಿಕೆ ಕರೆ ಬಂದಿದೆ ಎಂಬ ಮಾಹಿತಿ ಕೊಡಿ. ಗೃಹ ಇಲಾಖೆ ಅಥವಾ ಮುಖ್ಯಮಂತ್ರಿಗಳಿಗೆ ದಾಖಲೆ ತಲುಪಿಸಿ. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ನನಗೆ ಬೆದರಿಕೆ ಇದೆ ಅಂದರೆ ಹೇಗೆ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಜಮೀರ್ ಅಹಮದ್ ವಿರುದ್ಧ ಆಕ್ರೋಶ್ ಹೊರಹಾಕಿದ್ದಾರೆ. ಜಮೀರ್ ಬೀದಿಯಲ್ಲಿ ನಿಂತಿದ್ದ, ಎಲ್ಲೆಲ್ಲೋ ಬಸ್ ಓಡಿಸಿಕೊಂಡಿದ್ದ. ಅವನನ್ನು ದೇವೇಗೌಡರ ಕುಟುಂಬದವರು ಕರೆದುಕೊಂಡು ಬಂದು ಎಂಎಲ್‍ಎ ಮಾಡಿದರು. ಆದರೆ ಅವರ ಕುಟುಂಬಕ್ಕೆ ಬೆನ್ನಿಗೆ ಚೂರಿ ಹಾಕಿದವನು ನನ್ನ ಬಗ್ಗೆ ಮಾತಾಡುತ್ತಾನೆ ಎಂದು ಗರಂ ಆದರು.

ಸಿಎಎ ವಿಚಾರದಲ್ಲಿ ನಾನು ಪ್ರಚೋದನಕಾರಿ ಭಾಷಣ ಮಾಡಿಲ್ಲ. ನನ್ನ ಅಭಿಪ್ರಾಯ ಹೇಳಿದ್ದೇನೆ. ನಾನು ಕ್ರಿಮಿನಲ್ ಕೇಸ್ ದಾಖಲಿಸುವ ತಪ್ಪು ಮಾಡಿಲ್ಲ. ಸಿಎಎ ಜಾರಿಯಾದರೆ ಬೆಂಕಿ ಹಚ್ಚುತ್ತೇವೆ ಎಂದಿದ್ದು ಯು.ಟಿ.ಖಾದರ್. ನಿಮಗೆ ತಾಕತ್ತಿದ್ದರೆ ಪ್ರಚೋದನಾಕಾರಿ ಮಾತನಾಡಿದ ನಾಯಕರ ವಿರುದ್ಧ ಕ್ರಮ ಕೈಗೊಳ್ಳಿ. ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಸವಾಲು ಹಾಕಿದರು.

ಇದೇ ಸಂದರ್ಭದಲ್ಲಿ ವಿಶ್ವನಾಥ್‍ಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿ, ವಿಶ್ವನಾಥ್ ಮುಖ್ಯಮಂತ್ರಿಗಳ ಮಾತು ಕೇಳಬೇಕಿತ್ತು. ನನಗೆ ಸ್ಪರ್ಧೆ ಮಾಡಬೇಡಿ ಅಂತಾ ಸಿಎಂ ಹೇಳಿದ್ದರು ಎಂದು ವಿಶ್ವನಾಥ್ ಅವರೇ ಮಾಧ್ಯಮದ ಮುಂದೆ ಹೇಳಿದ್ದಾರೆ. ಈಗ ಸೋತಿದ್ದಾರೆ, ಆ ನೋವಿನಲ್ಲಿ ಮಾತನಾಡಿದ್ದಾರೆ. ನೋವು ಹೇಳಿಕೊಳ್ಳುವುದು ತಪ್ಪೇ? ಅವರ ಮಾತಿಗೆ ಹೆಚ್ಚು ಒತ್ತುಕೊಡುವ ಅಗತ್ಯವಿಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *