ಭಾರತದಲ್ಲಿ ಬಡತನ ಇನ್ನೂ ಇರಲು ಕಾಂಗ್ರೆಸ್ ಕಾರಣ : ರಕ್ಷಣಾ ಸಚಿವೆ ಕಿಡಿ

Public TV
2 Min Read

– ಗರೀಬಿ ಹಠಾವೋ ಆರಂಭಿಸಿದ್ದು ಇಂದಿರಾ ಗಾಂಧಿ
– ಈಗಲೂ ಕಾಂಗ್ರೆಸ್ಸಿನ ಜನಪ್ರಿಯ ಕಾರ್ಯಕ್ರಮ

ಉಡುಪಿ: ಗರೀಬಿ ಹಠಾವೋ ಕಾಂಗ್ರೆಸ್ಸಿನ ಜನಪ್ರಿಯ ಕಾರ್ಯಕ್ರಮವಾಗಿದ್ದು ಇಂದಿರಾ ಗಾಂಧಿ 1971ರಲ್ಲಿ ಅಭಿಯಾನವನ್ನು ಆರಂಭಿಸಿದರು. ಇನ್ನೂ ಅದೇ ಘೋಷಣೆಯನ್ನು ರಾಹುಲ್ ಹೇಳುತ್ತಿದ್ದು, ಬಡತನ ಭಾರತದಲ್ಲಿ ಇನ್ನೂ ಇರಲು ಯಾರು ಕಾರಣ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನೆ ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಪ್ರಚಾರಕ್ಕೆ ತುಂಬಾ ಕೆಲಸ ಮಾಡುತ್ತೇವೆ. ಪ್ರಿಯಾಂಕಾ ಗಾಂಧಿ ಏನೇ ಆರೋಪ ಮಾಡಲಿ. ಬಿಜೆಪಿ ಟಿ ಶರ್ಟ್, ಆಪ್ ಮೂಲಕ ಮಾರಾಟವಾಗುತ್ತದೆ. ಇದರಲ್ಲಿ ತಪ್ಪೇನಿದೆ? ಇಂತಹದ್ದು ಇನ್ನೂ ಸಾಕಷ್ಟು ಮಾಡುತ್ತೇವೆ ಎಂದು ಪ್ರಿಯಾಂಕ ಗಾಂಧಿಗೆ ಟಾಂಗ್ ಕೊಟ್ಟರು. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಜಯ ಪಡೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಕಡು ಬಡವರ ಕುಟುಂಬಕ್ಕೆ ವಾರ್ಷಿಕ 72 ಸಾವಿರ ರೂ. ಆದಾಯ ನೀಡಲಾಗುತ್ತದೆ ಎಂದ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವೆ, ಗರೀಬಿ ಹಠಾವೋ ಆರಂಭಿಸಿದ್ದು ಇಂದಿರಾ ಗಾಂಧಿ, ಅದನ್ನ ರಾಹುಲ್ ಕೂಡ ಹೇಳಿಕೊಂಡು ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನು ಓದಿ:ದೇಶದ 20% ರಷ್ಟು ಬಡವರಿಗೆ ವಾರ್ಷಿಕ 72 ಸಾವಿರ ರೂ.: ರಾಹುಲ್ ಗಾಂಧಿ

ನಾವು ಐದು ವರ್ಷ ಭ್ರಷ್ಟಾಚಾರ ರಹಿತ ಕೆಲಸ ಮಾಡಿದ್ದೇವೆ. ಮೋದಿ ವಿರುದ್ಧ ಮಹಾಘಟಬಂಧನ್ ಸ್ಥಾಪನೆಯಾಗಿದೆ. ಎನ್‍ಡಿಎ ಜೊತೆ ಘಟಬಂಧನ್ ಹೋಲಿಕೆ ಮಾಡಬೇಡಿ. ನಮ್ಮ ಪ್ರಧಾನಿ ಮೋದಿಗೆ ಸರಿಸಾಟಿ ಯಾರಿದ್ದಾರೆ? ಚೋರ್ ಚೋರ್ ಕರೆಯಲು ನಿಮ್ಮಲ್ಲಿ ಏನಿದೆ ಸಾಕ್ಷಿ? ಜಾಮೀನಿನ ಮೇಲೆ ಹೊರಗಿರುವ ರಾಹುಲ್ ಗಾಂಧಿಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಆಕ್ರೋಶ ಹೊರಹಾಕಿದರು.

ರಾಹುಲ್‍ಗೆ ಸ್ಮೃತಿ ಭಯ ಶುರುವಾಗಿದೆ, ಅಮೇಥಿ ಕ್ಷೇತ್ರ ಹಿಂದೆಂದು ಕಾಣದ ಅಭಿವೃದ್ಧಿ ಕಂಡಿದೆ. 2014 ರಲ್ಲಿ ಸ್ಮೃತಿ ಇರಾನಿ ಸೋತರೂ ಅಮೇಥಿ ಜೊತೆ ನಿಂತಿದ್ದರು. ಇರಾನಿ ಅಮೇಥಿಯಲ್ಲಿ ಜನರ ನಿರಂತರ ಸಂಪರ್ಕದಲ್ಲಿದ್ದಾರೆ. ರಾಹುಲ್ ಗಾಂಧಿಗೆ ಈ ಬಗ್ಗೆ ಭಯ ಆವರಿಸಿದೆ. ರಾಹುಲ್ ಗೆ ಸೋಲಿನ ಭೀತಿ ಎದುರಾಗಿದೆ. ರಾಹುಲ್ ಗಾಂಧಿ ಬೇರೆ ಕ್ಷೇತ್ರಕ್ಕೆ ಪಲಾಯನ ಮಾಡುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಕುಟುಕಿದರು.

ಶೋಭಾ ಕರಂದ್ಲಾಜೆಯನ್ನು ಗೆಲ್ಲಿಸಲು ವಿಜಯ ಸಂಕಲ್ಪಯಾತ್ರೆಗೆ ಬಂದಿದ್ದೇನೆ. ಮೋದಿ ಸರ್ಕಾರದ ಯೋಜನೆಗಳನ್ನು ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ತಂದಿದ್ದಾರೆ. ಹೀಗಾಗಿ ಅವರ ಪುನರ್ ಆಯ್ಕೆಗೆ ಸಾಕಷ್ಟು ಕಾರಣಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿಗಳು, ಸಖಿ ಸೆಂಟರ್, ಕೌಶಲ್ಯಾಭಿವೃದ್ಧಿ ಕೇಂದ್ರ ಉಡುಪಿಯಲ್ಲಿ ಸ್ಥಾಪನೆಯಾಗಿದೆ. ಏಳು ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಭೆಗಳಾಗಿದೆ. ಪ್ರಕರಣ ಕಡೆಗಣಿಸುವ ಮಾತೇ ಇಲ್ಲ. ನೌಕಾಪಡೆ, ಏರ್ ಫೋರ್ಸ್ ಜೊತೆ ಚರ್ಚೆ ಮಾಡಿದ್ದೇನೆ. ಬೆಂಗಳೂರು ಏರ್ ಶೋ ಪ್ರಕರಣ ಕೂಡ ಚರ್ಚೆಯಾಗಿದೆ. ನಾವು ನಮ್ಮ ಕರ್ತವ್ಯದಲ್ಲಿ ಲೋಪ ಎಸಗಿಲ್ಲ. ಚುನಾವಣಾ ಸಂದರ್ಭದಲ್ಲಿ ನಾನು ನೀತಿಸಂಹಿತೆ ಉಲ್ಲಂಘಿಸಲ್ಲ, ಏನೇನು ಮಾಡಿದ್ದೇವೆ ಎಲ್ಲವೂ ಹೇಳಲ್ಲ ಎಂದು ಹೇಳಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಶೋಭಾ ಕರಂದ್ಲಾಜೆ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಕುಮಾರಸ್ವಾಮಿ, ಲಾಲಾಜಿ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *