ಜೋಶಿ ರಾಜೀನಾಮೆ ಕೇಳಿ ಕಾಂಗ್ರೆಸ್ಸಿಗರು ವಿಘ್ನ ಸಂತೋಷಪಡಲು ಮುಂದಾಗಿದ್ದಾರೆ – ವಿಜಯೇಂದ್ರ

Public TV
2 Min Read

ಬೆಂಗಳೂರು: ಪ್ರಹ್ಲಾದ್ ಜೋಶಿ (Prahlad Joshi) ರಾಜೀನಾಮೆ ಕೇಳಿ ಕಾಂಗ್ರೆಸ್ಸಿಗರು ವಿಘ್ನ ಸಂತೋಷಪಡಲು ಮುಂದಾಗಿದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ ಜೋಶಿಯಿಂದ ಟಿಕೆಟ್ ಕೊಡಿಸುವುದಾಗಿ ಹಣ ಪಡೆದಿದ್ದಾರೆ ಎಂಬ ಆರೋಪದ ಮೇಲೆ ಪ್ರಹ್ಲಾದ್ ಜೋಶಿಯವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿದೆ ಎನ್ನುವ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಜೋಶಿ ಪರ ಬ್ಯಾಟಿಂಗ್ ಮಾಡಿದ್ದಾರೆ. ರಾಜೀನಾಮೆ ಕೇಳಿದ್ದ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ವಿರುದ್ಧ ಕಿಡಿಕಾರಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ?
ಕೇಂದ್ರ ಸಚಿವರಾದ ಮಾನ್ಯ ಪ್ರಹ್ಲಾದ್ ಜೋಶಿ ಅವರ ಹೆಸರನ್ನು ಸಂಬಂಧಪಡದ ಪ್ರಕರಣವೊಂದರಲ್ಲಿ ಎಳೆದು ತರುವ ಮೂಲಕ ಕಾಂಗ್ರೆಸ್ಸಿಗರು ವಿಘ್ನ ಸಂತೋಷಪಡಲು ಹೊರಟಿದ್ದಾರೆ. ಸಚಿವ ದಿನೇಶ್ ಗೂಂಡುರಾವ್ ಅವರು ಅಸಂಬದ್ಧವಾಗಿ ಜೋಶಿಯವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಆರೋಪಿತ ಗೋಪಾಲ ಜೋಷಿ ಅವರೊಂದಿಗೆ ಕಳೆದ 32 ವರ್ಷಗಳಿಂದಲೂ ಸಂಪರ್ಕ ಕಡಿದುಕೊಂಡು ಯಾರೊಂದಿಗೂ ತಮ್ಮ ಸಂಬಂಧ ಬೆರೆಸದಂತೆ ಮಾನ್ಯ ಪ್ರಹ್ಲಾದ್ ಜೋಶಿ ಅವರು ನ್ಯಾಯಾಲಯದಲ್ಲಿ 2013ರಲ್ಲೇ ತಡೆಯಾಜ್ಞೆ ತಂದಿದ್ದಾರೆ. ಅಲ್ಲದೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಅದರ ವಿವರವಿರುವುದಾಗಿಯೂ ಸ್ಪಷ್ಟಪಡಿಸಿದ್ದಾರೆ.

ಇಷ್ಟಾಗಿಯೂ ಮುಡಾ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದ ಹಗರಣದಂತೆ ಹತ್ತು-ಹಲವು ಹಗರಣಗಳಲ್ಲಿ ಸಿಲುಕಿ ತನಿಖೆ ಎದುರಿಸುತ್ತಿರುವ ಮುಖ್ಯಮಂತ್ರಿ ಹಾಗೂ ಇತರ ಮಂತ್ರಿಗಳು ನೈತಿಕತೆ ಗಾಳಿಗೆ ತೂರಿ ತಮ್ಮ ಸ್ಥಾನಗಳಿಗೆ ಭಂಡತನದಿಂದ ಅಂಟಿ ಕುಳಿತಿದ್ದಾರೆ. ಹತಾಶೆಯ ಅಂಚಿಗೆ ತಲುಪಿರುವ ಕಾಂಗ್ರೆಸ್ಸಿಗರು ಜೋಷಿಯವರ ವಿಚಾರದಲ್ಲಿ ಮೊಸರಿನಲ್ಲಿ ಕಲ್ಲು ಹುಡುಕಲು ಹೊರಟಿದ್ದಾರೆ.

ಪ್ರಹ್ಲಾದ್ ಜೋಶಿ ಅವರು ತಮ್ಮ ಇಡೀ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಮಸಿ ಅಂಟಿಸಿಕೊಂಡವರಲ್ಲ. ಅವರ ಸಾಮರ್ಥ್ಯ ಹಾಗೂ ಅನುಭವವನ್ನು ಪರಿಗಣಿಸಿ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಪುಟದಲ್ಲಿ ಮಹತ್ವದ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ಇದನ್ನು ಸಹಿಸದ ಕೆಲವು ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಜೋಶಿ ಅವರಿಗೆ ಕಳಂಕ ಅಂಟಿಸುವ ವಿಫಲ ಯತ್ನ ನಡೆಸಿದ್ದಾರೆ. ಆಧಾರ ರಹಿತ ಆರೋಪಗಳಿಂದ ಭಾರತೀಯ ಜನತಾ ಪಾರ್ಟಿಯ ವರ್ಚಸ್ಸಿಗೆ ಧಕ್ಕೆ ತರಬಹುದು ಎಂದು ಕಾಂಗ್ರೆಸ್ಸಿಗರು ಅಂದುಕೊಂಡಿದ್ದರೆ ಅದು ಕೇವಲ ಅವರ ಭ್ರಮೆ ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.

Share This Article