ಕಾಂಗ್ರೆಸ್ ಗೊಂದಲದ, ಪಿತೂರಿಯ, ನಾಯಕನಿಲ್ಲದ ಪಕ್ಷ: ಅರುಣ್ ಸಿಂಗ್

Public TV
2 Min Read

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷ ಸದಾ ಗೊಂದಲದ ಪಕ್ಷ. ಆರ್ಟಿಕಲ್ 370, ರಾಮಮಂದಿರ ವಿವಾದ, ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ಎಲ್ಲಾ ಕಡೆ ದ್ವಂದ್ವ ನಿಲುವುಗಳ ಮೂಲಕ ಗೊಂದಲಗಳನ್ನು ಸೃಷ್ಟಿ ಮಾಡಿಕೊಂಡಿದೆ. ಚುನಾವಣೆ ಸಮಯದಲ್ಲೂ ಗೊಂದಲದಲ್ಲಿದೆ. ವ್ಯಾಕ್ಸಿನ್ ವಿಚಾರದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವ್ಯಾಕ್ಸಿನ್ ಪಡೆದುಕೊಂಡರೂ ಅದನ್ನು ಮೋದಿ ವ್ಯಾಕ್ಸಿನ್ ಎಂದು ಟೀಕೆ ಮಾಡಿದರು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಟಾಂಗ್ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ವಿಸ್ಡಮ್ ಶಾಲೆಯಲ್ಲಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅರುಣ್ ಸಿಂಗ್, ಕಾಂಗ್ರೆಸ್ ಪಕ್ಷ ಪಿತೂರಿ ಪಕ್ಷ. ಕರ್ನಾಟಕದ ಕಾಂಗ್ರೆಸ್ ಪಕ್ಷದ ನಾಯಕರು ಪಿತೂರಿ ಮಾಡಲು ಪ್ರಯತ್ನಿಸುತ್ತಾರೆ. ಅವರ ಬಳಿ ಅಭಿವೃದ್ಧಿ ಕೆಲಸ ಮಾಡಿರುವ ಆಧಾರಗಳಿಲ್ಲ. ಜನರ ಪರವಾಗಿ ಕೆಲಸ ಮಾಡದೇ ಪಿತೂರಿ ಮಾಡುವ ಪಕ್ಷ ಎಂದೂ ಸಫಲವಾಗಲ್ಲ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 23 ಮಂದಿ ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು ಎಂದರು. ಇದನ್ನೂ ಓದಿ: ಭಿನ್ನಾಭಿಪ್ರಾಯ ಹತ್ತಿಕ್ಕಿ ಸತ್ಯವನ್ನು ಬಂಧಿಸಲು ಸಾಧ್ಯವಿಲ್ಲ: ಮೋದಿಗೆ ರಾಹುಲ್‌ ತಿರುಗೇಟು

ನಾಯಕನಿಲ್ಲದ ಪಕ್ಷ ಕಾಂಗ್ರೆಸ್. ರಾಹುಲ್ ಗಾಂಧಿ ರಾಷ್ಟ್ರೀಯ ಪಕ್ಷದ ಅಧ್ಯಕ್ಷನಾಗಲು ಇಷ್ಟಪಡುತ್ತಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಧ್ಯಕ್ಷರಾಗಲು ಒತ್ತಾಯ ಮಾಡಿದ್ದಾರೆ. ಈ ತರ ಯಾವುದೇ ಪಕ್ಷದಲ್ಲಿ ಇಲ್ಲ. ಇದು ಮೊದಲ ಬಾರಿಗೆ ನಾನು ನೋಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾಪ್ರಭುತ್ವ ಇಲ್ಲ. ಅವರದ್ದು ಕುಟುಂಬ ರಾಜಕಾರಣದ ಪಕ್ಷ. ಇದರಿಂದ ಕಾಂಗ್ರೆಸ್ ಪಕ್ಷ ನಶಿಸಿ ಹೋಗುತ್ತಿದೆ. ಕರ್ನಾಟಕದ ಜನರಿಗೂ ಕಾಂಗ್ರೆಸ್ ಬಗ್ಗೆ ನಿರಾಶಾಭಾವವಿದೆ ಎಂದು ಹೇಳಿದರು.

ನಾವು ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳ ಬಗ್ಗೆ ವಿಭಾಗವಾರು ಕಾರ್ಯಕಾರಿಣಿ ಸಭೆ ನಡೆಸುತ್ತಿದ್ದೇವೆ. ಒಂದೊAದು ವಿಧಾನಸಭೆಯಲ್ಲಿ ಯಾವ ರೀತಿ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ರೂಪುರೇಷಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಮೂರು ತಂಡಗಳಾಗಿ ಪ್ರವಾಸ ಮಾಡಲಾಗುತ್ತಿದೆ. ಸದ್ಯದ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಮೊದಲಿಗಿಂತ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ ಎಂಬುದು ಗೊತ್ತಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಮಾಸ್ಟರ್ ಮೈಂಡ್ ನಾನಲ್ಲ, ಗಲಭೆಗೆ ನಾನು ಕಾರಣನಲ್ಲ – ಅಜ್ಞಾತ ಸ್ಥಳದಿಂದ ವೀಡಿಯೋ ಬಿಟ್ಟ ವಾಸಿಂ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಡವರು, ಪರಿಶಿಷ್ಟ ವರ್ಗ, ಪಂಗಡ, ರೈತರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಅದು ಕೂಡ ಜನತೆಯ ಬಳಿ ಹೋಗಿ ಮತ ಕೇಳಲು ಉಪಯೋಗವಾಗುತ್ತವೆ ಎಂದರು.

ಇತ್ತೀಚೆಗೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಐತಿಹಾಸಿಕ ವಿಜಯ ಸಾಧಿಸಿದೆ. ಇದರಿಂದ ಒಂದು ಟ್ರೆಂಡ್ ಸೆಟ್ ಆಗಿದೆ. ಅದೇ ಟ್ರೆಂಡ್ ಮೂಲಕ ಕರ್ನಾಟಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಈ ಬಾರಿಯೂ ಬಹುಮತ ಸಾಧಿಸಲಿದ್ದೇವೆ. ನಾವು 150 ಸ್ಥಾನಗಳ ಗುರಿ ಹೊಂದಿದ್ದೇವೆ. ಸದ್ಯ ನಾವು ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದು, ಮುಂದಿನ ಬಾರಿ ಸಹ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಆತ್ಮವಿಶ್ವಾಸದ ಮಾತುಗಳನ್ನು ಆಡಿದರು.

Share This Article
Leave a Comment

Leave a Reply

Your email address will not be published. Required fields are marked *