ಖರ್ಗೆಯನ್ನು ಸಿಎಂ ಮಾಡಲು ಒಪ್ಪದ್ದಕ್ಕೆ ಮಗನಿಗೆ ಸಿಎಂ ಪಟ್ಟ ಸಿಕ್ತು – ಎಚ್‍ಡಿಡಿ

Public TV
2 Min Read

– ಮೈತ್ರಿ ವೇಳೆ ಸಿಎಂ ಹುದ್ದೆಯ ಮಾತುಕತೆ ಈಗ ಬಹಿರಂಗ
– ಕೈ ನಾಯಕರ ವಿರುದ್ಧವೇ ಎಚ್‍ಡಿಡಿ ಆರೋಪ

ಕಲಬುರಗಿ: ಮಲ್ಲಿಕಾರ್ಜುನ ಖರ್ಗೆಯವರಿಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರೇ ಸಿಎಂ ಪಟ್ಟ ತಪ್ಪಿಸಿದರು ಎನ್ನುವ ಸ್ಫೋಟಕ ವಿಚಾರವನ್ನು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಬಹಿರಂಗ ಪಡಿಸಿದ್ದಾರೆ.

ನಾನು ಖರ್ಗೆಯವರನ್ನು ಸಿಎಂ ಮಾಡಲು ಹೇಳಿದೆ. ಆದರೆ ಸೋನಿಯಾ ಗಾಂಧಿ ಖರ್ಗೆ ಬೇಡ ಎಂದು ಹೇಳಿದರು. ಹೀಗಾಗಿ ಕುಮಾರಸ್ವಾಮಿ ಸಿಎಂ ಆಗಿ ಆಯ್ಕೆಯಾದರು ಎಂದು ಸಿಎಂ ಆಯ್ಕೆ ಗುಟ್ಟನ್ನು ಮಾಜಿ ಪ್ರಧಾನಿ ಎಚ್‍ಡಿಡಿ ಬಿಚ್ಚಿಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿ ರಾಹುಲ್ ಗಾಂಧಿಯವರನ್ನು ಕಳುಹಿಸಿ ನಿಮ್ಮ ಮಗ ಮತ ತೆಗೆದುಕೊಳ್ಳಬೇಕು ಎಂದು ನಾವು ಹೇಳಿದ್ದೆವು. ಅಲ್ಲದೆ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಿ ಎಂದು ಸಹ ಹೇಳಿದ್ದೆವು. ಆದರೆ ಕಾಂಗ್ರೆಸ್ ಹೈಕಮಾಂಡ್ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಹೇಳಿತು. ಹೈಕಮಾಂಡ್ ಒಪ್ಪಿದರೆ ಸಿಎಂ ಆಗುತ್ತೇನೆ ಎಂದು ಖರ್ಗೆ ಹೇಳಿದ್ದರು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಟಿಕೆಟ್ ಹಂಚುವ ವಿಚಾರದಲ್ಲಿ ಕಾಂಗ್ರೆಸ್ ಅವರಲ್ಲೇ ಗೊಂದಲ ಇದೆ. ನನಗೆ ಈಗಲೂ ನಂಬಿಕೆ ಇದೆ ಬಿಜೆಪಿ ಸರ್ಕಾರಕ್ಕೆ ಅಪಾಯ ಇಲ್ಲ. ಏಕೆಂದರೆ ಕಾಂಗ್ರೆಸ್ ಜೆಡಿಎಸ್ ಒಂದಾಗುವುದಿಲ್ಲ. ಹೀಗಾಗಿ ಬಿಜೆಪಿ ಸರ್ಕಾರಕ್ಕೆ ಅಪಾಯವಿಲ್ಲ ಎಂದರು.

ದತ್ತಾತ್ರೇಯ ದೇವಸ್ಥಾನಕ್ಕೆ ಹೋಗಬೇಕು ಎಂದು ಕಲಬುರಗಿಗೆ ಬಂದಿದ್ದೇನೆ. ಇಲ್ಲಿ ಒಂದು ಕಾಲದಲ್ಲಿ ನಮ್ಮ ಶಕ್ತಿ ಬಹಳ ಇತ್ತು. ದುರಂತ ಅಂದರೆ ಈಗ ನಮ್ಮ ಶಕ್ತಿ ಕುಂದಿದೆ. ಹೀಗಾಗಿ ಜನ ಶಕ್ತಿ ಕೊಟ್ಟರೆ ಮತ್ತೆ ಪಕ್ಷ ಕಟ್ಟುತ್ತೇನೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನಮ್ಮ ಪಕ್ಷ ಅಸ್ತಿತ್ವ ಉಳಿಸಿಕೊಂಡಿದೆ. ನಾನು ಈಗ ಸೋತಿದ್ದೇನೆ, 13ನೇ ಪಾರ್ಲಿಮೆಂಟ್‍ಗೆ ನಿಲುವುದಿಲ್ಲ ಎಂದು ಹೇಳಿ ಹೊರಗಡೆ ಬಂದಿದ್ದೆ. ಆದರೆ ವಿಧಿ ಎಳೆದುಕೊಂಡು ತುಮಕೂರಿಗೆ ಹೋಗಿ ಚುನಾವಣೆಗೆ ಸ್ಪರ್ಧಿಸುವಂತಾಯಿತು. ಈ ಮೂಲಕ ಮೂರನೇ ಸೋಲು ಕಂಡೆ, ಸೋತರೂ ಈ ವಯಸ್ಸಿನಲ್ಲಿ ಹೋರಾಟ ಮಾಡುತ್ತಿದ್ದೇನೆ ಎಂದು ಹೇಳಿ ಭಾವುಕರಾದರು.

ಹೋರಾಟದಿಂದ ಈ ಪಕ್ಷ ಉಳಿದಿದೆ ಮತ್ತು ಬೆಳೆದಿದೆ. ಹೀಗಾಗಿ ಹೋರಾಡಲು ಇನ್ನಷ್ಟು ಶಕ್ತಿ ಕೊಡು ಎಂದು ದತ್ತಾತ್ರೆಯನ ಪಾದದ ಮೊರೆ ಹೋಗಿದ್ದೇನೆ. ಉಪಚುನಾವಣೆಯಲ್ಲಿ ಎಲ್ಲ ಸ್ಥಾನಗಳಿಗೂ ಅಭ್ಯರ್ಥಿ ಹಾಕುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಎಲ್ಲ ಕಡೆ ನಮಗೆ ಪ್ರಬಲ ಅಭ್ಯರ್ಥಿಗಳಿಲ್ಲ. ನಾಲ್ಕು-ಐದು ಕಡೆಗಳಲ್ಲಿ ನಮ್ಮ ಪಕ್ಷ ಹೋರಾಟ ಮಾಡಲಿದೆ. ಉಳಿದ ಕ್ಷೇತ್ರಗಳಲ್ಲಿ ಸಹ ನಮ್ಮ ಅಭ್ಯರ್ಥಿಗಳನ್ನು ಹಾಕುತ್ತೆವೆ. ಗೆಲುವು ಸೋಲು ನಮ್ಮ ಕೈಯಲ್ಲಿ ಇಲ್ಲ ಮತದಾರರು ಅದನ್ನು ನಿರ್ಧರಿಸುತ್ತಾರೆ. ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿದೆ. ಹೀಗಾಗಿ ಎಲ್ಲ ಕಡೆ ಸಂಚರಿಸಿ ಇಲ್ಲಿಗೆ ಬಂದಿದ್ದೇನೆ. ಕಾಂಗ್ರೆಸ್, ಬಿಜೆಪಿ ಎರಡೂ ಸ್ಥಳೀಯ ಚುನಾವಣೆಯಲ್ಲಿ ನಮಗಿಂತ ಮುಂದಿದ್ದಾರೆ ಎಂದರು.

ಮೈತ್ರಿ ಸರ್ಕಾರ ಹೋಗಲು ಕಾರಣ ಏನು ಎಂದು ವಿಶ್ಲೇಷಣೆ ಮಾಡುವುದಿಲ್ಲ. ಬಿಜೆಪಿ ಸಹ ಈಗ ವಾಮಮಾರ್ಗದಿಂದ ಅಧಿಕಾರ ಹಿಡಿದಿದೆ. 5-6 ತಿಂಗಳು ಅಧಿಕಾರಕ್ಕಾಗಿ ಇವರು ಬಂದಿದ್ದಾರೆ. ಸದ್ಯ ಬಿಜೆಪಿಯ 106 ಶಾಸಕರಿದ್ದಾರೆ. ನಾನು ಯಡಿಯೂರಪ್ಪ ಮನೆ ಬಾಗಿಲಿಗೂ ಹೋಗುವುದಿಲ್ಲ. ಸಿದ್ದರಾಮಯ್ಯ ಮನೆ ಬಾಗಿಲಿಗೂ ಹೋಗಲ್ಲ. ಈಗಲೇ ಚುನಾವಣೆ ನಡೆದರೆ ನಾವು ಅಧಿಕಾರಕ್ಕೆ ಬರುವುದಿಲ್ಲ. ಚುನಾವಣೆ ನಡೆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯಗೆ ಆ ವರ್ಚಸ್ಸು ಇದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *