ಪುಲ್ವಾಮಾ ದುರಂತದಲ್ಲಿಯೂ ರಾಜಕೀಯ ಮಾಡಲು ಹೊರಟ್ರಾ ಮಾಜಿ ಸಂಸದೆ ರಮ್ಯಾ?

Public TV
3 Min Read

ಬೆಂಗಳೂರು: ಪುಲ್ವಾಮಾ ಭಯೋತ್ಪಾದಕರ ದಾಳಿಯಲ್ಲಿ 40 ವೀರ ಸೈನಿಕರನ್ನು ಕಳೆದುಕೊಂಡು ದೇಶದ ಜನ ಶೋಕದಲ್ಲಿರುವ ವೇಳೆ ಮಾಜಿ ಸಂಸದೆ ರಮ್ಯಾ ಅವರು ಮಾತ್ರ ತಮ್ಮ ರಾಜಕೀಯವನ್ನು ಮುಂದುವರಿಸಿದ್ದಾರೆ.

ಪುಲ್ವಾಮಾ ದಾಳಿ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ಯೋಜನೆಗಳು ನಿಲ್ಲದಂತೆ ‘ವಂದೇ ಭಾರತ್’ ರೈಲಿಗೆ ಚಾಲನೆ ನೀಡಿ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನೆಯಾಗುವಂತೆ ಮಾಡಿದ್ದರು. ಆದರೆ ರೈಲು ಉದ್ಘಾಟನೆಯಾದ ದಿನದಂದೇ ಕೆಲ ಸಮಯ ತಾಂತ್ರಿಕ ಕಾರಣಗಳಿಂದ ನಿಂತು ಹೋಗಿತ್ತು. ಇದನ್ನೇ ಟಾರ್ಗೆಟ್ ಮಾಡಿರುವ ರಮ್ಯಾ ಅವರು ಪುಲ್ವಾಮಾ ದಾಳಿಗೆ ಭಾರತ ನೀಡುತ್ತಿರುವ ಉತ್ತರ ಇದೇನಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಗೋಯೆಲ್ ಪ್ರಕಾರ ಪಾಕಿಸ್ತಾನಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಉತ್ತರ ಎಂದು ಲೇವಡಿ ಮಾಡಿದ್ದಾರೆ.

ವಂದೇ ಭಾರತ್ ರೈಲು ಉದ್ಘಾಟನೆ ಬಳಿಕ ಮಾತನಾಡಿದ್ದ ಗೋಯೆಲ್ ಅವರು, ಕಾಶ್ಮೀರದ ದಾಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ತಿಳಿಸಿದ್ದರು. ಅಂದ ಹಾಗೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ವಾಣಿಜ್ಯ ದೃಷ್ಟಿಯಿಂದ ಸಂಚಾರವನ್ನು ಇಂದಿನಿಂದ (ಫೆ.17) ಆರಂಭಿಸಲಿದೆ. ಮೇಕ್ ಇನ್ ಇಂಡಿಯಾ ಯೋಜನೆಯ ಅಡಿ ಚೆನ್ನೈನಲ್ಲಿ ರೈಲಿನ ಕೋಚ್ ತಯಾರಿಸಲಾಗಿದೆ.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ದಾಳಿಯನ್ನು ಪ್ರಸ್ತಾಪಿಸಿ ಸರ್ಕಾರದ ಹುಳುಕುಗಳನ್ನು ಕಂಡುಕೊಳ್ಳಲು ಮುಂದಾಗಿದ್ದಾರೆ. ಅಲ್ಲದೇ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ಪಾಕಿಸ್ತಾನದ ವಿರುದ್ಧ ಒಂದು ಟ್ವೀಟ್ ಮಾಡದ ರಮ್ಯಾ ಅವರು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಸೇನೆಯ ವಿರುದ್ಧ ಮಾಡಿದ್ದ ನಕಾರಾತ್ಮಕ ಟ್ವೀಟನ್ನು ರೀ ಟ್ವೀಟ್ ಮಾಡಿದ್ದಾರೆ. ರಮ್ಯಾ ಈ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಶಾಂತ್ ಭೂಷಣ್ ಟ್ವೀಟ್ಟ್ ನಲ್ಲೇನಿದೆ?
ಪುಲ್ವಾಮಾ ದಾಳಿಯಲ್ಲಿ ಸೇನೆಯ 40 ಯೋಧರನ್ನು ವಿರುದ್ಧ ಆತ್ಮಾಹುತಿ ದಾಳಿ ನಡೆಸಿದ್ದ ಕಾಶ್ಮೀರಿ ಉಗ್ರ ತಂದೆಯ ಹೇಳಿಕೆಯನ್ನು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದರು. ತಮ್ಮ ಪುತ್ರ ಭಯೋತ್ಪಾದನೆ ಸಂಘಟನೆ ಸೇರಲು ಸೇನೆಯ ನಡೆಯೇ ಕಾರಣ ಎಂಬಂತೆ ಉಗ್ರ ಆದಿಲ್ ಅಹ್ಮದ್ ತಂದೆ ಹೇಳಿಕೆ ನೀಡಿದ್ದರು. ಮಗನನ್ನು ಸೇನೆಯ ಯೋಧರು ಅವಮಾನ ಮಾಡಿದ್ದರು ಎಂದು ಕೂಡ ಆರೋಪಿಸಿ ಹೇಳಿಕೆ ನೀಡಿದ್ದರು.

ಇಂತಹ ಹೇಳಿಕೆಯನ್ನ ಪ್ರಶಾಂತ್ ಭೂಷಣ್ ಅವರು ಟ್ವೀಟ್ ಮಾಡಿ ಭಾರತ ಸೇನಾ ಪಡೆಯ ವಿರುದ್ಧ ನಕರಾತ್ಮಕವಾಗಿ ಟ್ವೀಟ್ ಮಾಡಿದ್ದರು. ಕಾಶ್ಮೀರದ ಯುವಕರು ಏಕೆ ಸಾಯಲು ಸಿದ್ಧರಾಗುತ್ತಿದ್ದಾರೆ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು. ದೊಡ್ಡ ಪ್ರಮಾಣದ ಆತ್ಮಾಹುತಿ ದಾಳಿ ನಡೆದ ಬಳಿಕ ಅಫ್ಘಾನಿಸ್ತಾನ ಹಾಗೂ ಇರಾಕ್ ನಲ್ಲಿ ಅಮೆರಿಕ ಪಡೆಗಳು ಉಳಿಯಲು ಸಾಧ್ಯವಾಗಿಲ್ಲ. ಇಂತಹ ದಾಳಿ ಹೆಚ್ಚಾದರೆ ಕಾಶ್ಮೀರದಲ್ಲೂ ಭಾರತದ ಸೇನಾ ಪಡೆಗಳು ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದರು.

ಕಾಶ್ಮೀರದಲ್ಲಿ ಭಾರತ ಸರ್ಕಾರವು ನಿಯಂತ್ರಣ ಸಾಧಿಸುವುದು ಸಾಧ್ಯವಿಲ್ಲ. ಇಂತಹ ದಾಳಿಗಳು ಹೆಚ್ಚಾದರೆ ಭಾರತದ ಸೇನಾ ಪಡೆಗಳೂ ಅಲ್ಲಿಂದ ಹೊರನಡೆಯಬೇಕಾಗುತ್ತದೆ ಎಂಬ ಅರ್ಥದಲ್ಲಿ ಬರೆಯುವ ಮೂಲಕ ಪರೋಕ್ಷವಾಗಿ ಪ್ರಶಾಂತ್ ಭೂಷಣ್ ಕಾಶ್ಮೀರದ ಪ್ರತ್ಯೇಕತೆಗೆ ಬೆಂಬಲ ನೀಡಿದ್ದರು ಎಂಬುದು ಅವರ ಟ್ವೀಟ್ ನಲ್ಲಿ ಸ್ಪಷ್ಟವಾಗಿದೆ. ಇಂತಹ ಟ್ವೀಟನ್ನು ರಮ್ಯಾ ರೀ ಟ್ವೀಟ್ ಮಾಡಿ ಸದ್ಯ ದೇಶದ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಅಲ್ಲದೇ `ವಂದೇ ಭಾರತ್’ ರೈಲು ಸಮಸ್ಯೆಯಿಂದ ಕೆಲವು ಗಂಟೆ ನಿಂತು ಹೋದ ಘಟನೆಗೂ ಪುಲ್ವಾಮಾ ದಾಳಿಯ ಉತ್ತರಕ್ಕೂ ಸಂಬಂಧ ಕಲ್ಪಿಸಿ ಲೇವಡಿ ಮಾಡಿದ್ದು ಸರಿಯೇ ಎಂದು ಟ್ವಿಟ್ಟಿಗರು ರಮ್ಯಾರನ್ನು ಪ್ರಶ್ನೆ ಮಾಡಿದ್ದಾರೆ.

ಇತ್ತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾತ್ರ ದೇಶದ ಯೋಧರ ಸಾವಿನ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಲ್ಲ. ಸರ್ಕಾರ ಯಾವುದೇ ಕ್ರಮಕೈಗೊಂಡರು ಕೂಡ ನಮ್ಮ ಬೆಂಬಲವಿದೆ ಎಂದು ತಿಳಿಸಿದ್ದರು. ಪಕ್ಷದ ಅಧ್ಯಕ್ಷರ ಈ ಹೇಳಿಕೆಯ ವಿಡಯೋವನ್ನು ರೀ ಟ್ವೀಟ್ ಮಾಡಿರುವ ರಮ್ಯಾ ಅವರು ಯೋಧರ ಸಾವಿನ ವಿಚಾರದಲ್ಲೂ ಮಾನವೀಯತೆ ಮರೆತು ರಾಜಕೀಯ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *