ಕಾಂಗ್ರೆಸ್ ಪಕ್ಷದ ಸದಸ್ಯರಾಗುವುದೇ ಒಂದು ಅದೃಷ್ಟ, ತ್ರಿವರ್ಣ ಧ್ವಜವನ್ನು ಧರಿಸುವ ಭಾಗ್ಯ ನಿಮ್ಮದಾಗಿದೆ: ಡಿಕೆಶಿ

Public TV
3 Min Read

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸದಸ್ಯರಾಗುವುದೇ ಒಂದು ಅದೃಷ್ಟ. ಈ ತ್ರಿವರ್ಣ ಧ್ವಜವನ್ನು ಧರಿಸುವ ಭಾಗ್ಯ ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಸಿಗುತ್ತದೆಯೇ? ಇಲ್ಲ. ಹೀಗಾಗಿ ಈಗ ಸುವರ್ಣ ಅವಕಾಶ ನಿಮಗೆ ಸಿಕ್ಕಿದೆ ಇದನ್ನು ಬಳಸಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.

ಸರ್ವಜ್ಞ ನಗರದ ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಇಂದು ಇಲ್ಲಿಗೆ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ನೋಂದಾಣಿದಾರರಾಗಿ ಆಯ್ಕೆಯಾಗಿರುವವರಿಗೆ ತರಬೇತಿ ನೀಡಲು ಬಂದಿದ್ದೇನೆ. ನನ್ನ ಮಾಹಿತಿ ಪ್ರಕಾರ 330 ಮಂದಿ ಮುಖ್ಯ ನೋಂದಣಿದಾರರು ಇದ್ದಾರೆ. ಅಲ್ಲಿಗೆ 660 ಮಂದಿ ಬೂತ್ ಮಟ್ಟದ ನೋಂದಣಿದಾರರು ನೇಮಕ ಆಗಿರಬೇಕು. ನಾನು ಕಳೆದ ವಾರ ತುಮಕೂರಿಗೆ ಹೋಗಿದ್ದಾಗ ಒಂದೊಂದು ಕ್ಷೇತ್ರದಲ್ಲಿ 65 ರಿಂದ 75 ಸಾವಿರ ಸದಸ್ಯತ್ವ ಮಾಡುವುದಾಗಿ ಮಾತು ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ಮುಸ್ಲಿಂ ಎಂಬ ಕಾರಣಕ್ಕೆ ಈ ಸರ್ಕಾರ ಒಂದು ನಯಾ ಪೈಸೆ ಕೊಟ್ಟಿಲ್ಲ: ಸಿಎಂ ಇಬ್ರಾಹಿಂ

ನಾವು ಪಾದಯಾತ್ರೆ ಮುಗಿಸಿ ಬಂದಿದ್ದೇವೆ. ನಿಮ್ಮ ಕ್ಷೇತ್ರಕ್ಕೂ ಪಾದಯಾತ್ರೆ ಬರಬೇಕು ಎಂದು ಭಾವಿಸಿದ್ದೆವು. ಆದರೆ ಅದು ಆಗಲಿಲ್ಲ. ಆದರೂ ನೀವೆಲ್ಲ ಬಂದು ಹೆಜ್ಜೆ ಹಾಕಿ, ಐತಿಹಾಸಿಕ ಹೋರಾಟದಲ್ಲಿ ಭಾಗವಹಿಸಿದ್ದೀರಿ. ಬೆಂಗಳೂರಿಗೆ ಕುಡಿಯುವ ನೀರು ತರಲು ನಡೆದ ಕಾಂಗ್ರೆಸ್ ನೇತೃತ್ವದ ಹೋರಾಟಕ್ಕೆ ಶಕ್ತಿ ತುಂಬಿದ್ದೀರಿ. ಕಾಂಗ್ರೆಸ್ ಪಕ್ಷ ಪ್ರಸ್ತುತ ರಾಜ್ಯಕ್ಕೆ ಅನಿವಾರ್ಯವಾಗಿದೆ. ನೀವು ಸತತವಾಗಿ ಜಾರ್ಜ್ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದೀರಿ. ಅವರು ನನಗಿಂತ ಹಿರಿಯರಾಗಿ ಶಾಸಕರಾದವರು. ನಿಮ್ಮ ಬ್ಲಾಕ್, ಜಿಲ್ಲಾಧ್ಯಕ್ಷರು, ಶಾಸಕರುಗಳ ಶಿಫಾರಸ್ಸು ಮೇರೆಗೆ ನಿಮ್ಮನ್ನು ಮುಖ್ಯ ನೋಂದಾಣಿದಾರರನ್ನಾಗಿ ಮಾಡಲಾಗಿದೆ. ನಿಮ್ಮ ಪಾತ್ರ ಏನೆಂದರೆ, ಪ್ರತಿ ಬೂತ್ ಮಟ್ಟದಲ್ಲಿ ಒಬ್ಬರು ಗಂಡು ಹಾಗೂ ಒಬ್ಬರು ಮಹಿಳೆಯನ್ನು ನೋಂದಾಣಿದಾರರನ್ನಾಗಿ ನೇಮಕ ಮಾಡಬೇಕು. ನೀವು ಸದಸ್ಯತ್ವ ನೋಂದಣಿಗೆ ಮನೆ, ಮನೆಗೆ ಹೋದಾಗ ಅಲ್ಲಿನ ಹೆಣ್ಣು ಮಕ್ಕಳು ಅವರ ಮಾಹಿತಿ ನೀಡಲು ಹಿಂಜರಿಯುತ್ತಾರೆ. ಹೀಗಾಗಿ ಅವರಿಗೆ ಅನುಕೂಲವಾಗಲು ಮಹಿಳಾ ನೋಂದಾಣಿದಾರರು ಅವಶ್ಯಕ ಎಂದು ಅಭಿಪ್ರಾಯಪಟ್ಟರು.

ನೀವು ಮತದಾರರ ಪಟ್ಟಿ ಪಡೆಯಬೇಕು. ಆ ಮತಪಟ್ಟಿ ಹಿಡಿದುಕೊಂಡು ಮನೆ, ಮನೆಗೆ ಹೋಗಬೇಕು. ಇಲ್ಲಿರುವ ಒಬ್ಬೊಬ್ಬರು 200 ಸದಸ್ಯತ್ವ ಮಾಡಿದರೂ 70 ಸಾವಿರ ಸದಸ್ಯತ್ವ ಆಗುತ್ತದೆ. ಯಾರು ಸದಸ್ಯರಾಗುತ್ತಾರೆ, ಯಾರು ಸದಸ್ಯರಾಗುವುದಿಲ್ಲವೋ ಅದರಿಂದ ಯಾರು ಕಾಂಗ್ರೆಸ್ ಪರ ಇದ್ದಾರೆ ಹಾಗೂ ಯಾರು ಇಲ್ಲ ಎಂಬುದು ಅರಿಯುತ್ತದೆ. ನಂತರ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪರ ಇಲ್ಲದವರ ಮನವೊಲಿಸಲು ಪ್ರಯತ್ನ ಮಾಡಬಹುದು. ಮುಖ್ಯ ನೋಂದಾಣಿದಾರರ ಆಗಿರುವವರು ನೋಂದಾಣಿದಾರರು ಕಲೆ ಹಾಕಿರುವ ಸದಸ್ಯತ್ವ ಶುಲ್ಕ 5 ರೂ. ಅನ್ನು ಸಂಗ್ರಹಿಸಬೇಕು. ಅನಂತರ ಆ ಹಣವನ್ನು ಜಿಲ್ಲಾಧ್ಯಕ್ಷರಿಗೆ ನೀಡಬೇಕು. ಡಿಜಿಟಲ್ ಕಾರ್ಡ್ ಬೇಕಾಗಿರುವವರು 10 ರೂ. ಪಾವತಿಸಬೇಕು. ಅವರಿಗೆ ಜಿಲ್ಲಾ ಕಾಂಗ್ರೆಸ್ ನಿಂದ ಕಾರ್ಡ್ ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಶೌಚಾಲಯ ಸ್ವಚ್ಛಗೊಳಿಸುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಆದೇಶಿಸಲಾಗಿದೆ: ರಾಹುಲ್ ಗಾಂಧಿ

ನಿಮಗೆ ಯಾವುದೇ ಅನುಮಾನ ಇದ್ದರೂ ನಮ್ಮ ತಂಡ ಇಲ್ಲಿ ಇರುತ್ತದೆ. ನೀವು ಅವರನ್ನು ಸಂಪರ್ಕ ಮಾಡಬಹುದು. ಇಡೀ ರಾಜ್ಯಕ್ಕೆ ಸರ್ವಜ್ಞನಗರ ಹೆಚ್ಚು ಸದಸ್ಯತ್ವ ಮಾಡಬೇಕು.ನೀವು ಸದಸ್ಯತ್ವ ಮಾಡಿದರೆ ನೀವು ನಾಯಕರಾಗಿ ಬೆಳೆಯಲು ಸಾಧ್ಯ. ನೀವು ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿ ಆಗಬೇಕಾದರೆ ನಿಮ್ಮ ಬೂತ್ ಪ್ರತಿನಿಧಿಸಬೇಕು. ನೀವು ಎಷ್ಟೇ ದೊಡ್ಡವರಾದರೂ ನಿಮ್ಮ ಬೂತ್ ಮಟ್ಟದ ಪ್ರತಿನಿಧಿ ಆಗಲೇಬೇಕು. ನೋಂದಾಣಿದಾರರಾಗಿ ಯಾರು ಕಾರ್ಯಪ್ರವೃತ್ತವಾಗಿರುವುದಿಲ್ಲವೋ ಅವರನ್ನು ಬದಲಾಯಿಸಿ, ಬೇರೆಯವರನ್ನು ನೇಮಿಸಿ. ಮುಖ್ಯ ನೋಂದಣಿದಾರರು ಪ್ರತಿ ಬೂತ್ ನಲ್ಲಿ ನೋಂದಣಿದಾರರು ಮೇಲುಸ್ತುವಾರಿ ಮಾಡಬೇಕು. ಒಂದು ಮೊಬೈಲ್ ಸಂಖ್ಯೆಯಲ್ಲಿ ಐದು ಸದಸ್ಯರನ್ನು ನೋಂದಣಿ ಮಾಡಿಕೊಳ್ಳಬೇಕು. ಸರ್ವಜ್ಞ ನಗರದಲ್ಲಿ ಮನೆ, ಮನೆಗೆ ಹೋಗಿ 75 ಸಾವಿರ ಸದಸ್ಯತ್ವ ಮಾಡಬೇಕು. ನಿಮ್ಮ ಜೈಕಾರ ಬೇಡ, ನೀವು ಮಾಡುವ ಸದಸ್ಯತ್ವವೇ ನಮಗೆ ಜೈಕಾರ, ನನ್ನ ಪಾಲಿಗೆ ಅದೇ ಹೂವಿನ ಹಾರ. ನಿಮ್ಮಲ್ಲಿ 100 ಸದಸ್ಯತ್ವ ನೋಂದಣಿ ಮಾಡುವ 300 ಜನರಿಗೆ ಜಾರ್ಜ್ ಅವರಿಂದ ಬಹುಮಾನ ಕೊಡಿಸುತ್ತೇನೆ ಎಂದು ಘೋಷಿಸಿದರು.

Share This Article
Leave a Comment

Leave a Reply

Your email address will not be published. Required fields are marked *