ಕಂಡೀಷನ್‌ಗಳ ಮೂಲಕ ಗ್ಯಾರಂಟಿಗಳು ಜನರಿಗೆ ತಲುಪದಂತೆ ಕಾಂಗ್ರೆಸ್ ಷಡ್ಯಂತ್ರ ಮಾಡಿದೆ: ಪ್ರಹ್ಲಾದ್ ಜೋಶಿ

By
2 Min Read

ನವದೆಹಲಿ: ಕಂಡೀಷನ್‌ಗಳ (Conditions) ಬಗ್ಗೆ ಮೊದಲೇ ಹೇಳದ ಕಾಂಗ್ರೆಸ್ (Congress) ಈಗ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಗ್ಯಾರಂಟಿಗಳ (Guarantee) ವಿಚಾರದಲ್ಲಿ ಷರತ್ತುಗಳನ್ನು ವಿಧಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳಿಗೆ ಕಂಡೀಷನ್ ಹಾಕುವ ಮೂಲಕ ಯೋಜನೆಗಳು ಜನರಿಗೆ ತಲುಪದಂತೆ ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ. ಹಿಂದೆ ಎಲ್ಲರಿಗೂ ಫ್ರೀ ಅಂದವರು ಈಗ ಕಂಡೀಷನ್ ಹಾಕುತ್ತಿದ್ದಾರೆ. ಯುವನಿಧಿ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಸೇರಿದಂತೆ ಎಲ್ಲ ಗ್ಯಾರಂಟಿಗಳಿಗೆ ಕಂಡೀಷನ್ ಹಾಕಿದ್ದಾರೆ ಎಂದು ಕಿಡಿಕಾರಿದರು.

ಎಲ್ಲ ಯೋಜನೆಗಳಿಗೂ ಆನ್‌ಲೈನ್ ಅರ್ಜಿ ಹಾಕುವುದು ಕಡ್ಡಾಯವಾಗಿದೆ. ಈ ಮೂಲಕ ವೆರಿಫಿಕೇಷನ್ ಹೆಸರಿನಲ್ಲಿ ಯೋಜನೆಯನ್ನು ಜನರಿಗೆ ಮತ್ತಷ್ಟು ವಿಳಂಬ ಮಾಡುವ ಲೆಕ್ಕಾಚಾರ ಕಾಂಗ್ರೆಸ್ ಹಾಕಿದೆ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ಜನರು ಉತ್ತರ ನೀಡಲಿದ್ದಾರೆ ಎಂದರು. ಇದನ್ನೂ ಓದಿ: ಬಾಲಸೋರ್ ರೈಲು ಅಪಘಾತ – ತನಿಖೆ ಆರಂಭಿಸಿದ ಸಿಬಿಐ

ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಮತ್ತು ಆರ್‌ಎಸ್‌ಎಸ್ ನಿಷೇಧದ ಬಗ್ಗೆ ಮಾತನಾಡಿ, ಎಮ್ಮೆ ಹತ್ಯೆ ಮಾಡಿ ಎಂದು ನಾವು ಹೇಳಿಲ್ಲ. ಕೋಟ್ಯಂತರ ಜನರ ಮತ್ತು ಬಹುಸಂಖ್ಯಾತ ಜನರ ಭಾವನೆಗಳಿಗೆ ಧಕ್ಕೆಯಾಗಬಾರದು ಎನ್ನುವ ಕಾರಣಕ್ಕೆ ಗೋ ಹತ್ಯೆ ಬೇಡ ಎಂದು ಹೇಳಿದ್ದೇವೆ. ನಾವು ತಂದಿರುವ ಕಾನೂನು ಸೂಕ್ತವಾಗಿದೆ. ಅದನ್ನು ಅವರು ಮುಟ್ಟಬಾರದು ಎನ್ನುವುದು ನಮ್ಮ ಆಗ್ರಹ. ಆರ್‌ಎಸ್‌ಎಸ್ ಬ್ಯಾನ್ ಮಾಡುವ ಪ್ರಯತ್ನ ಅವರ ಮುತ್ತಾತ, ಅಜ್ಜಿ ಎಲ್ಲ ಮಾಡಿದ್ದಾರೆ ಅದಕ್ಕೆ ಪ್ರತಿಫಲ ಅನುಭವಿಸಿದ್ದಾರೆ. ಇವರು ಅನುಭವಿಸುತ್ತಾರೆ ಎಂದು ತಿರುಗೇಟು ನೀಡಿದರು.

2-3 ದಿನಗಳಲ್ಲಿ ವಿಪಕ್ಷ ನಾಯಕನ ಆಯ್ಕೆ:
ಇನ್ನು 2-3 ದಿನಗಳಲ್ಲಿ ವಿಪಕ್ಷ ನಾಯಕರು ಯಾರು ಎಂಬುದು ಗೊತ್ತಾಗಲಿದೆ. ನನ್ನ ಪ್ರಕಾರ ಇಷ್ಟೊತ್ತಿಗೆ ನಿರ್ಧಾರವಾಗಬೇಕಾಗಿತ್ತು. ಒಡಿಶಾದಲ್ಲಿ ರೈಲು ದುರ್ಘಟನೆ ಹಿನ್ನೆಲೆ ನಮ್ಮ ಕೇಂದ್ರ ನಾಯಕರು ಆ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಇನ್ನು 2-3 ದಿನದಲ್ಲಿ ವಿಪಕ್ಷ ನಾಯಕನ ಆಯ್ಕೆಯಾಗಲಿದೆ. ರಾಜ್ಯಾಧ್ಯಕ್ಷರ ಅವಧಿಯೂ ಈಗಾಗಲೇ ಮುಗಿದಿದೆ. ಪಕ್ಷ ಆ ವಿಚಾರದಲ್ಲೂ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಜೋಶಿ ಹೇಳಿದರು. ಇದನ್ನೂ ಓದಿ: IAS ವರ್ಸಸ್‌ IPS: ರೂಪಾ ಮೌದ್ಗಿಲ್‌ಗೆ ಜಾಮೀನು

Share This Article