ರಾಜ್ಯದಲ್ಲಿ ಹಣ, ಹೆಂಡ ಹಂಚಿಕೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಪೈಪೋಟಿ ನೀಡಿದೆ: ಚರ್ಚೆಗೆ ಗ್ರಾಸವಾಯ್ತು ಬಿಕೆ ಹರಿಪ್ರಸಾದ್ ಮಾತು

Public TV
2 Min Read

ಮಂಗಳೂರು: ರಾಜ್ಯದ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿದೆ. ಇದಕ್ಕೆ ಕಾರಣವೇನು ಎಂಬುದನ್ನು ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಬಹಿರಂಗಪಡಿಸಿದ್ದಾರೆ.

ಕರ್ನಾಟಕದಲ್ಲಿ ಹಣ, ಹೆಂಡದ ಹಂಚಿಕೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಪೈಪೋಟಿ ನೀಡಿದೆ. ಬಿಜೆಪಿಯವರಿಗೆ ಸರಿಸಮನಾಗಿ ಕಾಂಗ್ರೆಸ್ ಕೂಡ ಖರ್ಚು ಮಾಡಿದೆ ಎಂದು ಹರಿಪ್ರಸಾದ್ ಹೇಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.

ಬೇರೆ ಬೇರೆ ರಾಜ್ಯದ ಚುನಾವಣಾ ಫಲಿತಾಂಶ ನೋಡಿದಾಗ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿ ಮಾಡಿದೆ. ಬಿಜೆಪಿ ಚುನಾವಣೆ ಮೊದಲು ಸುಳ್ಳು ವದಂತಿ ಹಬ್ಬಿಸಿದ್ರು. ಗ್ಯಾರಂಟಿ, ವಕ್ಫ್ ವಿಚಾರ ಮಾಡಿ ಅಪಪ್ರಚಾರ ನಡೆಸಿದ್ರು. ಚುನಾವಣೆಗಾಗಿ ಇ.ಡಿ ಬಳಸಿಕೊಂಡಿದ್ದರು. ಜಾರ್ಖಂಡ್‌ನಲ್ಲಿ ಉತ್ತಮ ಗೆಲುವು ಸಿಕ್ಕಿದೆ. ಬಿಜೆಪಿ ನುಸುಳುಕೋರರ ಬಗ್ಗೆ ಅಪಪ್ರಚಾರ ನಡೆಸಿದ್ರು. ನುಸುಳುಕೋರರು ಬಂದಿದ್ದಾರೆ ಅಂತ ಬಿಜೆಪಿ ಸುಳ್ಳು ಹೇಳಿ ಸೈನಿಕರಿಗೆ ಅವಮಾನ ಮಾಡಿದ್ರು ಎಂದು ವಾಗ್ದಾಳಿ ನಡೆಸಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಕಂಟೇನರ್‌ನಲ್ಲಿ ದುಡ್ಡು ಬಂದಿದೆ. ನೋಟ್ ಎಣಿಸೋ ಮಷಿನ್ ಬಿಟ್ಟು ತೂಕದ ಲೆಕ್ಕದಲ್ಲಿ ಹಣ ಖರ್ಚು ಮಾಡಿದ್ದಾರೆ. ಕರ್ನಾಟಕದಲ್ಲೂ ದುಡ್ಡು ಖರ್ಚು ಮಾಡಿದ್ರು, ಆದ್ರೆ ಜನ ಅದನ್ನು ತಿರಸ್ಕರಿಸಿದರು. ಕರ್ನಾಟಕದಲ್ಲಿ ಎಲ್ಲೂ ಸಹ ಕೋಮು ಸೌಹಾರ್ದ ಕದಡಲು ಅವಕಾಶ ನೀಡಿಲ್ಲ. ಕರ್ನಾಟಕದಲ್ಲಿ ಹಣ, ಹೆಂಡದಲ್ಲಿ ನಾವು ಕೂಡ ಬಿಜೆಪಿಗೆ ಪೈಪೋಟಿ ನೀಡಿದ್ದೇವೆ ಎಂದು ಚುನಾವಣೆಗಾಗಿ ಕರ್ನಾಟಕದಲ್ಲಿ ಹಣ-ಹೆಂಡ ನೀಡಿದ್ದಾಗಿ ಒಪ್ಪಿಕೊಂಡರು.

ನಾವು ಸನ್ಯಾಸಿ ಅಲ್ಲ, ನಾವು ಕೂಡ ಅವರಿಗೆ ಸರಿಯಾಗಿ ಖರ್ಚು ಮಾಡಿದ್ದೇವೆ. ಶಿಗ್ಗಾಂವಿಯಲ್ಲಿ ನಾವು ಕೊಟ್ಟಿರುವ ಕಾರ್ಯಕ್ರಮ ಗೆಲ್ಲಿಸಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಬಿಜೆಪಿ ಏನು ಹೇಳಿ ಆದ್ರೂ ನಂಬಿಸಲು ಪ್ರಯತ್ನ ಮಾಡುತ್ತಿದ್ರು. ಕಾಂಗ್ರೆಸ್‌ಗಿಂತ ಡಬಲ್ ಕುಟುಂಬ ರಾಜಕಾರಣ ಇರೋದು ಬಿಜೆಪಿಯಲ್ಲಿ. ಒಂದೊಂದು ಕುಟುಂಬದಲ್ಲಿ ಹತ್ತತ್ತು ಜನ ರಾಜಕಾರಣದಲ್ಲಿ ಇದ್ದಾರೆ. ಸುಮ್ಮನೆ ಗೂಬೆ ಕೂರಿಸೋದು ಕಾಂಗ್ರೆಸ್‌ಗೆ. ಅವರ ತಟ್ಟೆಯಲ್ಲಿ ಇರುವ ಹೆಗ್ಗಣ ನೋಡದೆ, ನಮ್ಮ ತಟ್ಟೆಯ ನೋಣ ನೋಡುತ್ತಿದ್ದಾರೆ. ನಾವು ಗೂಬೆ ಅಲ್ಲ ಅಂತ ಬಿಜೆಪಿಗೆ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟರು.

ಕರ್ನಾಟಕದಲ್ಲಿ ಇ.ಡಿ, ಐ.ಟಿ ಉಪಯೋಗಿಸಿ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನ ಮಾಡಿದೆ. ಮಾಧ್ಯಮದವರು ಎರಡೂವರೆ ವರ್ಷದಲ್ಲಿ ಸಿಎಂ ಬದಲಾಗುತ್ತಾರೆ ಅಂತ ಹೇಳುತ್ತಿದ್ದರು. ಸಿದ್ದರಾಮಯ್ಯ ಸಿಎಂ ಬದಲಾಗುತ್ತಾರೆ ಅಂತ ಕೆಲವರು ತಿರುಕನ ಕನಸು ಕಾಣುತ್ತಿದ್ದರು. ಅಪ್ಪನ ತೆಕ್ಕೆಯಲ್ಲಿ ಬೆಳೆದವರು ಹೇಳಿದ ಹಾಗೆ ಆಗುವುದಿಲ್ಲ. ಯಡಿಯೂರಪ್ಪನವರ ಸಹಿ ಮಾಡಿದ ಹಾಗೆ ಅಲ್ಲ ಸಿಎಂ ಬದಲಾವಣೆ. ಎಲೆಕ್ಷನ್ ಕಮಿಷನ್ ಬಿಜೆಪಿಯ ಅಂಗವಾಗಿ ಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

Share This Article