ಸುಪ್ರೀಂ ಆದೇಶದ ಮೇಲೆ ನಿಂತಿದೆ ಪರಿಕ್ಕರ್ ಸಿಎಂ ಭವಿಷ್ಯ: ಮತ್ತೊಮ್ಮೆ ಜೇಟ್ಲಿಗೆ ‘ರಕ್ಷಣೆ’ಯ ಹೊಣೆ

Public TV
2 Min Read

ಪಣಜಿ: ಸುಪ್ರೀಂ ಕೋರ್ಟ್ ರಾಜ್ಯಪಾಲರ ನಿರ್ಧಾರದ ಪರವಾಗಿ ಮಂಗಳವಾರ ಆದೇಶ ನೀಡಿದರೆ, ಸಂಜೆ 5 ಗಂಟೆಗೆ ಮನೋಹರ್ ಪರಿಕ್ಕರ್ ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

13 ಶಾಸಕರಿರುವ ಬಿಜೆಪಿಯವರು, ಎಂಜಿಪಿಯ ಮೂವರು, ಜಿಎಫ್‍ಪಿಯ ಮೂವರು ಹಾಗೂ ಇಬ್ಬರು ಪಕ್ಷೇತರರನ್ನ ತನ್ನತ್ತ ಸೆಳೆದುಕೊಂಡಿದ್ದಾರೆ. ಪರಿಕ್ಕರ್ ಜೊತೆ 10 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸುಪ್ರೀಂ ನಲ್ಲಿ ಅರ್ಜಿ: ಸೋಮವಾರ ಸಂಜೆ ಹೊತ್ತಿಗೆ ಪರಿಕ್ಕರ್ ಸಿಎಂ ಆಗುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಅರ್ಜಿಯಲ್ಲಿ ರಾಜ್ಯಪಾಲರು ಸರ್ಕಾರ ರಚನೆಗೆ ಕಾನೂನು ಬಾಹಿರವಾಗಿ ಅನುಮತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕೋರ್ಟ್ ತುರ್ತು ಅರ್ಜಿಯನ್ನು ವಿಚಾರಣೆಗೆ ಮಾನ್ಯ ಮಾಡಿದ್ದು ಮಂಗಳವಾರ ಬೆಳಗ್ಗೆ ಅರ್ಜಿ ವಿಚಾರಣೆ ನಡೆಸಲಿದೆ.

ಬಿಜೆಪಿಯ ಹೈಜಾಕ್ ಕ್ರಮವನ್ನು ಕಂಡಿಸಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಜನಬಲದ ಎದುರು ಹಣ ಬಲ ಗೆದ್ದಿದೆ ಅಂದ್ರು. ಇನ್ನು ಮಣಿಪುರ ಹಾಗೂ ಗೋವಾದಲ್ಲಿ ಬಿಜೆಪಿ ಚುನಾವಣೆಯನ್ನ ಕದ್ದಿದ್ದಾರೆ ಅಂತ ಪಿ.ಚಿದಂಬರಂ ಆರೋಪಿಸಿದ್ದಾರೆ. ಗೋವಾ ರಾಜ್ಯಪಾಲರು ಬಿಜೆಪಿ ಏಜೆಂಟಂತೆ ವರ್ತಿಸಿದ್ದಾರೆ ಅಂತಾ ಮಾರ್ಗರೆಟ್ ಆಳ್ವಾ ಆರೋಪಿಸಿದ್ದಾರೆ.

ಈ ನಡುವೆ ಮಾತಾಡಿರುವ ಒಮರ್ ಅಬ್ದುಲ್ಲಾ, 2002ರಲ್ಲಿ ನ್ಯಾಷನಲ್ ಕಾಂಗ್ರೆಸ್ ದೊಡ್ಡ ಪಕ್ಷವಾಗಿತ್ತು. ಆದ್ರೆ ರಾಜ್ಯಪಾಲರು ಪಿಡಿಪಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಿದ್ದರು ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್‍ಗೆ ಟಾಂಗ್ ನೀಡಿದ್ದಾರೆ.

ಜೇಟ್ಲಿಗೆ ಮತ್ತೊಮ್ಮೆ ಖಾತೆ: ರಕ್ಷಣಾ ಖಾತೆಗೆ ಪರಿಕ್ಕರ್ ನೀಡಿದ ರಾಜೀನಾಮೆಯನ್ನ ರಾಷ್ಟ್ರಪತಿ ಅಂಗೀಕರಿಸಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿಗೆ ರಕ್ಷಣಾ ಖಾತೆಯನ್ನ ಹೆಚ್ಚುವರಿಯಾಗಿ ನೀಡಲಾಗಿದೆ. ಈ ಹಿಂದೆ ಅರುಣ್ ಜಟ್ಲಿ 2014ರ ಮೇ 26ರಿಂದ ನವೆಂಬರ್ 14ರ ವರೆಗೆ ರಕ್ಷಣಾ ಖಾತೆಯ ಸಚಿವರಾಗಿದ್ದರು.

ಬಹುಮತಕ್ಕೆ ಎಷ್ಟು ಬೇಕು?
40 ಸದಸ್ಯರ ಗೋವಾ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 21 ಶಾಸಕರ ಬೆಂಬಲ ಬೇಕು. ಚುನಾವಣೆಯಲ್ಲಿ ಕಾಂಗ್ರೆಸ್ 17ರಲ್ಲಿ ವಿಜಯಿ ಆಗಿದ್ದರೆ, ಬಿಜೆಪಿ 13 ಸ್ಥಾನವನ್ನು ಗೆದ್ದುಕೊಂಡಿದೆ. ಇತರೆ ಪಕ್ಷದವರು 10 ಸ್ಥಾನವನ್ನು ಗೆದ್ದುಕೊಂಡಿದ್ದು, ಸರಳ ಬಹುಮತಕ್ಕೆ ಸರ್ಕಾರಕ್ಕೆ 21 ಶಾಸಕರ ಬೆಂಬಲ ಅನಿವಾರ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *