ನಾಳೆ ಬೆಳಗ್ಗೆ ಒಳಗಡೆ ಅಭ್ಯರ್ಥಿಗಳ ಹೆಸರು ಹೊರಬೀಳುತ್ತೆ: ಡಿಕೆಶಿ ಸುಳಿವು

Public TV
2 Min Read

ನವದೆಹಲಿ: ಇಂದು ಅಥವಾ ನಾಳೆ ಬೆಳಗ್ಗೆ ಒಳಗಡೆ ಅಭ್ಯರ್ಥಿಗಳ ಹೆಸರು ಹೊರ ಬೀಳಲಿದೆ. ಒಟ್ಟು 17 ಅಭ್ಯರ್ಥಿಗಳನ್ನ ಅಂತಿಮಗೊಳಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸುಳಿವು ನೀಡಿದರು.

ದೆಹಲಿಯಲ್ಲಿ ಮಾತನಾಡಿದ ಡಿಕೆಶಿ, ಇನ್ನು ನಾಲ್ಕು ಕ್ಷೇತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಬೆಂಗಳೂರಿಗೆ ಹೋಗಿ ವೀಡಿಯೋ ಕಾನ್ಫರೆನ್ಸ್ ಮೂಲಕ ನಾಲ್ಕು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರದಲ್ಲಿ ಕುಕ್ಕರ್ ಹಂಚಿಕೆ ವಿಚಾರವಾಗಿ ಮಾತನಾಡಿ, ಅವೆಲ್ಲವೂ ಹಳೇ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿದ್ದಾರೆ. ಹಿಂದಿನಿಂದಲೂ ನಾವು ನಮ್ಮ ಕ್ಷೇತ್ರದ ಜನರಿಗೆ ಹಬ್ಬ ಹರಿ ದಿನದ ಸಂದರ್ಭದಲ್ಲಿ ಉಡುಗೊರೆ ನೀಡುತ್ತೇವೆ. ನನ್ನ ಮಗಳ ಮದುವೆಯ ಸಂದರ್ಭದಲ್ಲಿ ಎಲ್ಲರಿಗೂ ಸೀರೆಯನ್ನ ಕೊಟ್ಟಿದ್ದೇವೆ. ಕನಕೋತ್ಸವದ ಸಂದರ್ಭದಲ್ಲಿ ಮನೆಗಳಿಗೆ ಉಡುಗೊರೆ ನೀಡಿದ್ದೇವೆ. ಜೊತೆಗೆ ರಂಜಾನ್ ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಉಡುಗೊರೆಯನ್ನು ನೀಡಿದ್ದೇವೆ. ನಮ್ಮ ಲೋಕಲ್ ಶಾಸಕರು ನೀಡಿದ್ದಾರೆ. ಅವರಿಗೆ ನೀತಿ ಸಂಹಿತೆ ಬಗ್ಗೆ ಗೊತ್ತಾಗಿಲ್ಲ. ಬಿಜೆಪಿ-ಜೆಡಿಎಸ್ ನಡುವೆ ಅಸಮಾಧಾನ ಇತ್ತು. ಅದನ್ನು ಶಮನಗೊಳಿಸಿದ ನಂತರ ಏನಾದರೂ ಮಾತನಾಡಬೇಕಲ್ಲ. ಅದಕ್ಕೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಹಾಗಾಗಿ ಈ ವಿಚಾರವನ್ನು ಮಾತನಾಡಿದ್ದಾರೆ. ಬಿಜೆಪಿಯವರಿಗೆ ಖುಷಿಪಡಿಸಬೇಕಲ್ಲ. ಹಾಗಾಗಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಯವರಿಗೆ ಖುಷಿಪಡಿಸಲು ನನ್ನನ್ನ ಬೈತಾರೆ ಅನ್ನೋದಾದ್ರೆ ಒಳ್ಳೆಯದಾಗಲಿ. ಅವರಿಗೆ ಒಳ್ಳೆಯ ಆರೋಗ್ಯ ಕೊಡಲಿ. ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು 5 ಹೆಣ್ಣುಮಕ್ಕಳಿಗೆ ಟಿಕೆಟ್ ನೀಡಿದ್ದೇವೆ. ಜೊತೆಗೆ ಶೇ.50 ರಷ್ಟು ಹೆಚ್ಚು ಟಿಕೆಟ್‌ಗಳನ್ನು ಯುವಕರಿಗೆ ನೀಡಿದ್ದೇವೆ ಎಂದು ಹೇಳಿದರು.

ಕುಟುಂಬ ರಾಜಕಾರಣ ಮುಂದುವರೆದಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಯಡಿಯೂರಪ್ಪನವರ ಮನೆಯಲ್ಲಿ ಕುಟುಂಬ ರಾಜಕಾರಣ ಇಲ್ವಾ? ಜೊತೆಗೆ ರಾಜಕೀಯವಾಗಿ ಸದೃಢ ಇರುವ ನಾಯಕರಿಗೆ ಟಿಕೆಟ್ ನೀಡಿದ್ದೇವೆ ಎಂದು ಬಿಜೆಪಿಗೆ ಟಾಂಗ್‌ ಕೊಟ್ಟರು.

ಕೋಲಾರ ಲೋಕಸಭೆಯಲ್ಲಿ ಗೊಂದಲದ ಬಗ್ಗೆ ಮಾತನಾಡಿ, ಎರಡು ಕಡೆಯ ಬೆಂಬಲಿಗರು ಬಂದು ಭೇಟಿಯನ್ನ ಮಾಡಿದ್ದಾರೆ. ಅಂತಿಮವಾಗಿ ನಾವು ನಿರ್ಧಾರವನ್ನ ಕೈಗೊಳ್ಳುತ್ತೇವೆ ಎಂದರಲ್ಲದೇ, ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ವೀಣಾ ಕಾಶಪ್ಪನವರ ಹೆಸರು ಸ್ಕ್ರೀನಿಂಗ್ ಕಮಿಟಿಯಲ್ಲಿ ಇತ್ತು. ಅದು ಅವರಿಗೆ ಗೊತ್ತಿಲ್ಲ ಎಂದರು.

ಡಿ.ಕೆ.ಶಿವಕುಮಾರ್ ನನಗೆ ವಿಷ ಇಟ್ಟಿದ್ದಾರೆ ಎಂಬ ಹೆಚ್‌ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿ, ನಾನೇನಾದ್ರೂ ಸರ್ಕಾರ ಬೀಳಿಸಿದ್ರೆ, ಆತರ ಏನಾದರೂ ನಾನು ಮಾಡಿದ್ದರೆ ನಾನು ನಂಬುವ ದೇವರು ನನಗೆ ಶಿಕ್ಷೆ ಕೊಡಲಿ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್‌ನಿಂದ ಬಿಜೆಪಿ ನಾಯಕರಿಗೆ ಗಾಳ ವಿಚಾರಕ್ಕೆ ಬಹಿರಂಗವಾಗಿ ಮಾತನಾಡಲು ನಿರಾಕರಿಸಿದರು. ಬೇರೆ ಪಕ್ಷದ ನಾಯಕರು ಕಾಂಗ್ರೆಸ್‌ಗೆ ಬರುವ ಬಗ್ಗೆ ಬಹಿರಂಗವಾಗಿ ಮಾತನಾಡಲ್ಲ. ಕೆಲವು ಸಂಸದರು ಕಾಂಗ್ರೆಸ್ ಸೇರ್ಪಡೆ ವಿಚಾರ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

Share This Article