ನಾವು ಎಂದಿಗೂ ಅಂಬೇಡ್ಕರ್‌ರನ್ನ ಅವಮಾನಿಸುವುದಿಲ್ಲ.. ನನ್ನ ಹೇಳಿಕೆ ತಿರುಚಲಾಗಿದೆ: ಅಮಿತ್ ಶಾ

Public TV
2 Min Read

– ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ, ಸಂವಿಧಾನ-ಮೀಸಲಾತಿ ವಿರೋಧಿ ಎಂದು ವಾಗ್ದಾಳಿ

ನವದೆಹಲಿ: ನಾವು ಎಂದಿಗೂ ಅಂಬೇಡ್ಕರ್ ಅವರನ್ನು ಅವಮಾನಿಸುವುದಿಲ್ಲ. ನನ್ನ ಹೇಳಿಕೆಯನ್ನು ಸಾರ್ವಜನಿಕ ವಲಯದಲ್ಲಿ ತಿರುಚುವ ಕೆಲಸ ಮಾಡಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೇಸರ ವ್ಯಕ್ತಪಡಿಸಿದ್ದಾರೆ.

ಡಾ. ಬಿ.ಆರ್.ಅಂಬೇಡ್ಕರ್‌ಗೆ ಅವಮಾನ ಆರೋಪ ಹೊರಿಸಿ ಅಮಿತ್ ಶಾ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ಮುಂದಾಗಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಮಿತ್ ಶಾ, ನನ್ನ ಹೇಳಿಕೆಯನ್ನು ಸಾರ್ವಜನಿಕ ವಲಯದಲ್ಲಿ ತಿರುಚುವ ಕೆಲಸ ನಡೆಯುತ್ತಿದೆ. ಈ ಹಿಂದೆ ಮೋದಿ ಅವರ ಹೇಳಿಕೆಯನ್ನು ಎಡಿಟ್ ಮಾಡಲಾಗಿತ್ತು. ಈಗ ನನ್ನ ಹೇಳಿಕೆಯನ್ನು ತಿರುವುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿಗೆ ಅವಮಾನ ಮಾಡದ ಪಕ್ಷದಿಂದ ನಾನು ಬರುತ್ತೇನೆ. ನಾವು ಎಂದಿಗೂ ಅಂಬೇಡ್ಕರ್ ಅವರನ್ನು ಅವಮಾನಿಸುವುದಿಲ್ಲ. ಅವರ ತತ್ವ ಸಿದ್ಧಾಂತಗಳನ್ನು ನಾವು ಪಾಲಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಂವಿಧಾನದ ಬಗ್ಗೆ ಎರಡು ಸದನಗಳಲ್ಲಿ ಚರ್ಚೆಯಾಗಿದೆ. ಗೌರವಯುತ ಚರ್ಚೆ ಆಯೋಜಿಸುವ ಕೆಲಸ ಮಾಡಿದೆ. ಪ್ರತಿ ಚರ್ಚೆಯಲ್ಲಿ ಆಡಳಿತ ಪಕ್ಷ ವಿರೋಧ ಪಕ್ಷದ ದೃಷ್ಟಿಕೋನ ಬದಲಿರುತ್ತದೆ. ಆದರೆ ಆಡುವ ಮಾತುಗಳು ಸತ್ಯವಾಗಿರಬೇಕು. ಬಿಜೆಪಿ ಸಂಸದರು ಕಾಂಗ್ರೆಸ್ ಹೇಗೆ ಸಂವಿಧಾನದ ಜೊತೆಗೆ ನಡೆದುಕೊಂಡಿದೆ ಎಂದು ಉದಾಹರಣೆಯೊಂದಿಗೆ ಜನರ ಮುಂದಿಟ್ಟಿದೆ. ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ, ಮೀಸಲಾತಿ ವಿರೋಧಿ, ಸಂವಿಧಾನಿ ವಿರೋಧಿ, ತುರ್ತು ಪರಿಸ್ಥಿತಿ ಹೇರಿದೆ. ಮಹಿಳೆಯರು, ಹುತಾತ್ಮರನ್ನು ಅಗೌರವಿಸಿದೆ. ಎಲ್ಲ ಸತ್ಯಗಳು ಬಹಿರಂಗವಾದ ಬೆನ್ನಲೆ ಸತ್ಯವನ್ನು ತಿರುಚುವ ಕೆಲಸ ಮಾಡುತ್ತಿದೆ. ಅಸತ್ಯಕ್ಕೆ ಸತ್ಯದ ಬಟ್ಟೆ ಹಾಕುವ ಕೆಲಸ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಅಂಬೇಡ್ಕರ್ ಸೋಲಿಸಲು ಕಾಂಗ್ರೆಸ್ ಯಾವ ಅವಕಾಶವನ್ನು ಬಿಡಲಿಲ್ಲ. ಭಾರತ ರತ್ನ ನೀಡಲು ನಿರಾಕರಿಸಲಾಯಿತು. ಕಾಂಗ್ರೆಸ್ ನಾಯಕರು ತಮಗೆ ತಾವೇ ಭಾರತ ರತ್ನ ತೆಗೆದುಕೊಂಡರು. ಕಾಂಗ್ರೆಸ್ ಕಡೆ ತನಕ ಭಾರತ ರತ್ನ ನೀಡಲಿಲ್ಲ. ಅಂಬೇಡ್ಕರ್ ಜಯಂತಿ ಮಾಡಲು ನಿರಾಕರಿಸಿತು. ನೆಹರೂ ಅವರು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಮಂತ್ರಿಗಿರಿಗೆ ರಾಜೀನಾಮೆ ನೀಡುವುದರಿಂದ ಯಾವುದೇ ವ್ಯತಾಸ ಆಗುವುದಿಲ್ಲ ಎಂದು ಹೇಳಿದ್ದರು. ಜನ್ಮಸ್ಥಳ ನಿರ್ಮಾಣಕ್ಕೆ ಅವಕಾಶ ನಿರಾಕರಿಸಿದರು. ಕಾಂಗ್ರೆಸ್ ನಾಯಕರು ತಮ್ಮ ನಾಯಕರ ಹೆಸರಿನಲ್ಲಿ ದೇಶದ್ಯಾಂತ ಸ್ಮಾರಕ ಮಾಡಿಕೊಂಡರು ಎಂದು ಟೀಕಿಸಿದ್ದಾರೆ.

ಖರ್ಗೆ ಅವರೇ ನೀವು ಅಂಬೇಡ್ಕರ್ ವರ್ಗದಿಂದ ಬರುತ್ತೀರಿ. ಕನಿಷ್ಠ ನೀವಾದ್ರು ಹೀಗೆ ಮಾಡಬಾರದಿತ್ತು. ಒತ್ತಡದಿಂದ ನೀವು ಇದರಲ್ಲಿ ಭಾಗಿಯಾಗಿದ್ದೀರಿ. ನಾವು ಕೇಳಿದ ಯಾವ ಪ್ರಶ್ನೆಗೂ ಉತ್ತರಿಸದ ಕಾಂಗ್ರೆಸ್. ಹೇಳಿಕೆಗಳನ್ನು ತಿರುಚುವ ಕೆಲಸ ಮಾಡುತ್ತಿದೆ. ಸಂಸತ್‌ನಲ್ಲಿ ಮಾತನಾಡಿರುವ ವಿಷಯ ಇದು. ಇದನ್ನು ಕಾನೂನು ಹೋರಾಟ ಹೇಗೆ ಮಾಡಬಹುದು ಎಂದು ಪರಿಶೀಲಿಸುತ್ತಿದ್ದೇವೆ. ಮುಂದೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಖರ್ಗೆ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಅವರಿಗೆ ಆನಂದ ಆಗುತ್ತೆ ಅನ್ನೋದಾದ್ರೆ ನೀಡಲೂಬಹುದು. ಆದರೂ 15 ವರ್ಷಗಳು ಖರ್ಗೆಯವರು ವಿರೋಧ ಪಕ್ಷದಲ್ಲೆ ಇರಬೇಕು ಎಂದು ಟಾಂಗ್ ಕೊಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಸಚಿವರಾದ ಕಿರಣ್ ರಿಜುಜು, ಪಿಯೂಷ್ ಗೊಯೇಲ್, ಅಶ್ವಿನಿ ವೈಷ್ಣವ್ ಭಾಗಿಯಾಗಿದ್ದರು.

Share This Article