ಬೆಂಗಳೂರು: ಒಂದು ವಾರಕ್ಕೂ ಹೆಚ್ಚು ಕಾಲ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನಡೆದ ಖಾತೆ ಹಂಚಿಕೆ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಮ್ಮಿಶ್ರ ಸರ್ಕಾರದ ಸುಗಮ ಮೈತ್ರಿ ಸರ್ಕಾರಕ್ಕೆ 6 ಸೂತ್ರ ರಚನೆ ಮಾಡಿ ಎರಡು ಪಕ್ಷಗಳ ಕಾರ್ಯದರ್ಶಿಗಳು ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
ಇಂದು ಅಶೋಕ ಹೋಟೆಲ್ನಲ್ಲಿ ಸಭೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್- ಜೆಡಿಎಸ್ ಮುಖಂಡರು ಖಾತೆ ಹಂಚಿಕೆ ಬಗ್ಗೆ ಮಾಹಿತಿ ನೀಡಿದರು. ಆದರೆ ಇದಕ್ಕೂ ಮುನ್ನವೇ ಕಾಂಗ್ರೆಸ್ ನಾಯಕರು ಹಾಗೂ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ಡಿ ದೇವೇಗೌಡ ಅವರ ಮುಂದೇ ಒಪ್ಪಂದ ಪತ್ರಕ್ಕೆ ಸಹಿ ಮಾಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ನೋಡುವುದಾದರೆ ಸಮ್ಮಿಶ್ರ ಸರ್ಕಾರದ ಖಾತೆ ಹಂಚಿಕೆ ಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದರೆ ಸಮನ್ವಯ ಸಮಿತಿ ಮುಖ್ಯಸ್ಥರ ಆಯ್ಕೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿಯಲ್ಲಿ ಆ `ಒಪ್ಪಂದ’ವೇ ಫೈನಲ್ ಆಗಿದ್ದು, ಎರಡು ಪಕ್ಷಗಳ ಪ್ರಧಾನ ಕಾರ್ಯದರ್ಶಿಗಳಿಂದ ಸಹಿ ಮಾಡಿದ್ದಾರೆ. ಅಲ್ಲದೇ ಸರ್ಕಾರದ ಪ್ರತಿ ತೀರ್ಮಾನಕ್ಕೂ ಮೊದಲು ಒಪ್ಪಂದದ ನಿಯಮ ಪಾಲಿಸಬೇಕಿದೆ ಎನ್ನಲಾಗಿದೆ. ಇದರಂತೆ ದೇವೇಗೌಡರ ಮುಂದೆ ಬರೋಬ್ಬರಿ 18 ಪುಟಗಳ ಒಪ್ಪಂದ ನಡೆದಿರುವ ಕುರಿತು ಮೂಲಗಳು ಮಾಹಿತಿ ನೀಡಿದೆ.
18 ಪುಟಗಳ ಒಪ್ಪಂದದಲ್ಲಿ ಏನಿದೆ:
ಕ್ಯಾಬಿನೆಟ್, ನಿಗಮ ಮಂಡಳಿ ಸೇರಿದಂತೆ ಪ್ರತಿ ಹಂತದಲ್ಲೂ ತಗೆದುಕೊಳ್ಳಬೇಕಾದ ಪ್ರಮುಖ ನಿರ್ಧಾರಗಳ ಉಲ್ಲೇಖವು ಇದರಲ್ಲಿದೆ. ಐದು ವರ್ಷಗಳ ಕಾಲ ಸುಭದ್ರ ಸರ್ಕಾರ ನಡೆಸುವ ಹಿನ್ನೆಲೆಯಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.
ಸುಗಮ ಮೈತ್ರಿ ಸರ್ಕಾರಕ್ಕೆ 6 ಸೂತ್ರ:
1. ಎರಡೂ ಪಕ್ಷಗಳ ಪ್ರಣಾಳಿಕೆಯನ್ನು ಒಳಗೊಂಡ ಸಾಮಾನ್ಯ ಕಾರ್ಯಸೂಚಿ ಜಾರಿ.
2. ಸಿದ್ದರಾಮಯ್ಯ ನೇತೃತ್ವದಲ್ಲಿ 5 ಸದಸ್ಯರ ಸಮನ್ವಯ ಸಮಿತಿ: ಸಮಿತಿಯಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಕೆ.ಸಿ.ವೇಣುಗೋಪಾಲ್ ಹಾಗೂ ಡ್ಯಾನಿಷ್ ಅಲಿ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಮನ್ವಯ ಸಮಿತಿ ಸಭೆ ಪ್ರತಿ ತಿಂಗಳಿಗೊಮ್ಮೆ ಸಭೆ ಸೇರಿ ಚರ್ಚೆ ನಡೆಸಲಾಗುತ್ತದೆ.
3. ಸರ್ಕಾರದ ಕಾರ್ಯಸೂಚಿ ಮಾಹಿತಿ ನೀಡಲು ಎರಡೂ ಪಕ್ಷಗಳ ತಲಾ ಒಬ್ಬರು ವಕ್ತಾರರು.
4. ಸಮನ್ವಯ ಸಮಿತಿ ನೀಡುವ ಮಾರ್ಗಸೂಚಿಯಂತೆ ನಿಗಮ-ಮಂಡಳಿಗಳಿಗೆ ನೇಮಕ.
5. ಲೋಕಸಭೆ ಚುನಾವಣೆಗೂ ಮೈತ್ರಿ ಮುಂದುವರೆಯುತ್ತದೆ.
6. ಕುಮಾರಸ್ವಾಮಿ 5 ವರ್ಷ ಸಿಎಂ ಆಗಿರಲು ಸಂಪೂರ್ಣ ಬೆಂಬಲ ನೀಡಲಾಗಿದೆ. ಅಲ್ಲದೇ ಸಂಪುಟ ವಿಸ್ತರಣೆಯಲ್ಲಿ 2/3 ಪಾಲು ಕಾಂಗ್ರೆಸ್ಗೆ, 1/3 ಪಾಲು ಜೆಡಿಎಸ್ಗೆ ಹಂಚಿಕೆ ಮಾಡಲಾಗಿದೆ.