ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರು

Public TV
1 Min Read

ಮಂಡ್ಯ: ಹೈವೋಲ್ಟೇಜ್ ಮಂಡ್ಯ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಬೆಂಬಲಿಸುವ ವಿಷಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಮಂಗಳವಾರ ಮಂಡ್ಯದಲ್ಲಿ ಕೇಂದ್ರ ಮಾಜಿ ಸಚಿವ ರೆಹಮಾನ್ ಖಾನ್ ಮನೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ನಾಗಮಂಗಲ ಶಾಸಕ ಸುರೇಶ್ ಗೌಡ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡರನ್ನು ಕಾರ್ಯಕರ್ತರು ತರಾಟೆ ತಗೆದುಕೊಂಡರು.

ಮಂಡ್ಯ ಮನ್ ಮುಲ್‍ನಲ್ಲಿ ಕರೆಯಲಾಗಿದ್ದ ವಿವಿಧ ಹುದ್ದೆಗಳ ನೇಮಕಾತಿ ಮಾಡಲು ಸಚಿವರಾದ ತಮ್ಮಣ್ಣ, ಪುಟ್ಟರಾಜು ಒಪ್ಪಿಕೊಂಡಿದ್ದರು. ನೀವು ಮಧ್ಯಪ್ರವೇಶ ಮಾಡಿ ತಡೆದಿದ್ದೀರಿ ಎಂದು ಆರೋಪಿಸಿದರು. ಇದೇ ವೇಳೆ ಹಾಜರಿದ್ದ ಕೆಆರ್ ಪೇಟೆ ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಉಪ ಚುನಾವಣೆಯಲ್ಲಿ ಶಿವರಾಮೇಗೌಡರ ನೇಮಕಾತಿಗೆ ಅಡ್ಡಿಪಡಿಸಿದ್ದೇ ನೀವು ಎಂದು ಹೇಳಿದರು.

ಈ ವೇಳೆ ಮಧ್ಯ ಪ್ರವೇಶಿಸಿ ಕೆ.ಟಿ ಶ್ರೀಕಂಠೇಗೌಡ ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದಿದಕ್ಕೆ ಆಗ ಸುಮ್ನೆ ಇರು ಶ್ರೀಕಂಠೇಗೌಡ ಹಿಂದೊಂದು ಮುಂದೊಂದು ಮಾತನಾಡಬೇಡ. ನೀವೆಷ್ಟು ರಾಜಕೀಯ ಮಾಡುತ್ತೀರೋ ಹಾಗೆ ನಾವು ಮಾಡುತ್ತೇವೆ. ನೀವೆಲ್ಲೋ ಹತ್ತು ಸಾರಿ ನಾಲ್ಕೈದು ಸಾರಿ ರಾಜಕೀಯ ಮಾಡ್ತಿರಬಹುದು. ಕಾಂಗ್ರೆಸ್ ಪಕ್ಷದಲ್ಲಿ ಬಹಳಷ್ಟು ದಿನಗಳಿಂದ ರಾಜಕೀಯ ಮಾಡುತ್ತಿದ್ದೇವೆ. ಜಿಲ್ಲಾ ಕಾಂಗ್ರೆಸ್‍ನಲ್ಲಿ ಇರುವವರೆಲ್ಲಾ ಕಿತ್ತೋಗಿರೋರಾ ಎಂದು ತರಾಟೆಗೆ ತೆಗೆದುಕೊಂಡರು.

ಬಳಿಕ ರೆಹಮಾನ್ ಖಾನ್ ಮನವಿಗೆ ಮನ್ನಣೆ ನೀಡಿ ಹೈಕಮಾಂಡ್ ತೀರ್ಮಾನದಂತೆ ದೇಶದ ಹಿತದೃಷ್ಟಿಯಿಂದ ಕೋಮುವಾದಿ ಪಕ್ಷವನ್ನ ದೂರವಿಟ್ಟು ಮೈತ್ರಿ ಅಭ್ಯರ್ಥಿ ಬೆಂಬಲಿಸಲು ಎಲ್ಲಾ ಕಾರ್ಯಕರ್ತರು ಸಮ್ಮತಿ ಸೂಚಿಸಿದರು.

Share This Article
Leave a Comment

Leave a Reply

Your email address will not be published. Required fields are marked *