Mumbai Attack | ಆರ್‌ಎಸ್‌ಎಸ್‌ಗೆ ಹತ್ತಿರ ಇರೋ ಪೊಲೀಸರಿಂದ ಹೇಮಂತ್‌ ಕರ್ಕರೆ ಹತ್ಯೆ: ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕ

Public TV
1 Min Read

ಮುಂಬೈ: 2008ರ ಮುಂಬೈ ದಾಳಿಯ (Mumbai Attack) ಸಂದರ್ಭದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ (ATS) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ (Hemant Karkare) ಅವರನ್ನು ಪಾಕಿಸ್ತಾನಿ ಭಯೋತ್ಪಾದಕರು ಹತ್ಯೆ ಮಾಡಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷದ ನಾಯಕ ವಿಜಯ್ ವಾಡೆತ್ತಿವಾರ್ (Vijay Wadettiwar) ಹೊಸ ಬಾಂಬ್ ಸಿಡಿಸಿದ್ದಾರೆ.

ಆರ್‌ಎಸ್‌ಎಸ್‌ಗೆ ಹತ್ತಿರ ಇರುವ ಪೊಲೀಸ್ ಅಧಿಕಾರಿಯೊಬ್ಬರು ಹಾರಿಸಿದ ಗುಂಡಿಗೆ ಕರ್ಕರೆ ಬಲಿಯಾಗಿದ್ದಾರೆ. ಪ್ರಸ್ತುತ ಮುಂಬೈ ಉತ್ತರ ಕೇಂದ್ರ ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿರುವ ವಕೀಲ ಉಜ್ವಲ್ ನಿಕಮ್ ಅವರು ಆರೋಪಿಗಳನ್ನು ರಕ್ಷಿಸಲು ಸಾಕ್ಷ್ಯವನ್ನು ಮುಚ್ಚಿಟ್ಟಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ನಿಕಮ್ ಒರ್ವ ವಕೀಲನಲ್ಲ ಆತ ದೇಶದ್ರೋಹಿ. ಕರ್ಕರೆಯವರು ಅಜ್ಮಲ್ ಕಸಬ್‌ನಂತಹ  ಉಗ್ರರ  ಗುಂಡುಗಳಿಂದ ಮೃತಪಟ್ಟಿಲ್ಲ. ಆದರೆ ಸಂಘಕ್ಕೆ ಹತ್ತಿರವಿರುವ ಪೊಲೀಸರ ಬುಲೆಟ್‌ನಿಂದ ಸಾವನ್ನಪ್ಪಿದ್ದಾರೆ ಎಂದರು. ಇದನ್ನೂ ಓದಿ: ಉಗ್ರ ಕಸಬ್‌ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಉಜ್ವಲ್‌ ನಿಕಮ್‌ಗೆ ಬಿಜೆಪಿ ಟಿಕೆಟ್‌

26/11 ದಾಳಿಯಲ್ಲಿ ಮಡಿದ ಐಪಿಎಸ್‌ ಅಧಿಕಾರಿ ಹೇಮಂತ್ ಕರ್ಕರೆ ಅವರಿಗೆ ಮರಣೋತ್ತರವಾಗಿ 2009 ರಲ್ಲಿ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ನೀಡಲಾಯಿತು.

ಬಿಜೆಪಿ ಟೀಕೆ:
ಇದು ಆಘಾತಕಾರಿ. ಕೇವಲ ಒಂದು ಸಮುದಾಯವನ್ನು ಓಲೈಸಲು, ಮತಕ್ಕಾಗಿ ಭಾರತದ ಮೇಲೆ ಅತ್ಯಂತ ಭೀಕರವಾದ ಭಯೋತ್ಪಾದಕ ದಾಳಿ ಮಾಡಿದವರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ಅರ್ಪಿಸಿದವರಿಗೆ ಮಾಡುವ ಅವಮಾನ. ಈ ವಾದವನ್ನೇ ಪಾಕಿಸ್ತಾನ ಮುಂದಿಡಲಿದೆ ಎಂದು ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಆಕ್ರೋಶ ಹೊರಹಾಕಿದ್ದಾರೆ.

 

Share This Article