ಅಪ್ರಾಪ್ತ ವಿದ್ಯಾರ್ಥಿಗಳ ರೌಡಿಸಂ – ಕಾಲೇಜಿನಲ್ಲಿ ಸ್ಟೂಡೆಂಟ್ ಮರ್ಡರ್ ಜಸ್ಟ್ ಮಿಸ್

Public TV
2 Min Read

ಚಿಕ್ಕಬಳ್ಳಾಪುರ: ಸರ್ಕಾರಿ ಪಿಯು ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಯನ್ನು ಮತ್ತೋರ್ವ ವಿದ್ಯಾರ್ಥಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.

17 ವರ್ಷದ ಅಪ್ರಾಪ್ತ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊರ್ವ ತನ್ನದೇ ತರಗತಿಯ 17 ವರ್ಷದ ಮತ್ತೋರ್ವ ಅಪ್ರಾಪ್ತ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ವಿದ್ಯಾರ್ಥಿಯ ಹೊಟ್ಟೆಗೆ ಚಾಕು ಇರಿಯಲು ಮುಂದಾದಾಗ ತಪ್ಪಿಸಿಕೊಂಡ ಪರಿಣಾಮ ಚಾಕು ಕೈಗೆ ತಗುಲಿದ್ದು ಕೈಗೆ ಗಂಭೀರ ಗಾಯವಾಗಿದೆ. ಸದ್ಯ ಗಾಯಾಳು ವಿದ್ಯಾರ್ಥಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಎಂಜಿನಿಯರ್ಸ್ ಭೇಟಿ, ಪರಿಶೀಲನೆ

ಕಳೆದ ವಾರವೂ ಗಾಯಾಳು ವಿದ್ಯಾರ್ಥಿ ಮೇಲೆ ಹಲ್ಲೆ: ಅಂದಹಾಗೆ ಕೊಲೆ ಮಾಡಲು ಯತ್ನಿಸಿದ ವಿದ್ಯಾರ್ಥಿ ಮದ್ಯ ಕುಡಿದು ಕಾಲೇಜಿಗೆ ಬರ್ತಾನೆ ಎಂಬ ಆರೋಪವಿದ್ದು, ಕಾಲೇಜು ಹಾಗೂ ಕ್ಲಾಸ್ ರೂಂನಲ್ಲಿ ಇತರೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡೋದು, ಡಸ್ಟರ್ ಎಸೆಯೋದು ಮಾಡುತ್ತಿದ್ದ. ಈ ವಿಚಾರದಲ್ಲಿ ಗಾಯಾಳು ವಿದ್ಯಾರ್ಥಿ ಹಾಗೂ ಕೊಲೆ ಮಾಡಲು ಮುಂದಾದ ವಿದ್ಯಾರ್ಥಿ ನಡುವೆ ಕಳೆದ ವಾರ ಕ್ಲಾಸ್ ರೂಂ ನಲ್ಲಿ ಗಲಾಟೆ ಆಗಿತ್ತು. ಅಂದು ಕ್ಲಾಸ್ ರೂಂ ನಿಂದ ಹೊರಬಂದ ನಂತರ ಗಾಯಾಳು ವಿದ್ಯಾರ್ಥಿಯನ್ನು ಕಾಲೇಜು ಹಿಂಭಾಗದ ಕ್ರೀಡಾಂಗಣಕ್ಕೆ ಕರೆದೊಯ್ದು ತನ್ನ ಇನ್ನಿಬ್ಬರ ಸಹಚರರೊಂದಿಗೆ ಸೇರಿ ಹಲ್ಲೆ ಮಾಡಿದ್ದ. ಈ ವೇಳೆಯೂ ತಲೆಗೆ ಗಾಯವಾಗಿ 4 ಹೊಲಿಗೆ ಬಿದ್ದಿತ್ತು. ಅಂದು ಗಾಯಗೊಂಡಿದ್ದಾಗ ರಜೆ ಇದ್ದ ಕಾರಣ ಕಾಲೇಜಿಗೆ ಬರದೆ ವಿದ್ಯಾರ್ಥಿ ಮನೆಯಲ್ಲಿಯೇ ಇದ್ದ, ಮನೆಯವರಿಗೂ ಗಲಾಟೆ ವಿಷಯ, ಗಾಯದ ವಿಷಯ ಹೇಳಿರಲಿಲ್ಲ. ಆದರೆ ಇಂದು ಎಂದಿನಂತೆ ಮತ್ತೆ ಕಾಲೇಜಿಗೆ ಬಂದ ವಿದ್ಯಾರ್ಥಿ ಮೇಲೆ ಈ ಹಿಂದೆ ಹಲ್ಲೆ ಮಾಡಿದ್ದ ಅದೇ ವಿದ್ಯಾರ್ಥಿ ಇಂದು ಏಕಾಏಕಿ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ.

ಆರೋಪಿಗಳ ಬಂಧನಕ್ಕೆ ಪೊಲೀಸರ ಹುಡುಕಾಟ: ವಾರದ ಹಿಂದೆ ಹಲ್ಲೆ ನಡೆದಾಗಲೂ ಗಾಯಾಳು ಪೊಲೀಸ್ ಠಾಣೆಗೆ ದೂರು ನೀಡಿದ್ದ ಆದರೆ ಕಾಲೇಜು ವಿದ್ಯಾರ್ಥಿಗಳ ಭವಿಷ್ಯ ಹಾಳಾಗಾಬಾರದು ಅಂತ ಪೊಲೀಸರು ಕರೆದು ಬುದ್ದಿವಾದ ಹೇಳಿ ಕಳುಹಿಸಿದ್ದರು ಈಗ ಅದೇ ಯುವಕ ದೂರು ನೀಡಿದವನ ಮೇಲೆ ಹಗೆ ಸಾಧಿಸಿ ಇಂದು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಠಾಣಾ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿ ಬಳಿ ದೂರು ಪಡೆದುಕೊಂಡು, ಚಾಕುವಿನಿಂದ ಇರಿದ ವಿದ್ಯಾರ್ಥಿಗಾಗಿ ಹುಡುಕಾಟ ನಡೆಸಿದ್ದಾರೆ.

ರೌಡಿಗಳಾದ ಮೀಸೆ ಮೂಡದ ವಿದ್ಯಾರ್ಥಿಗಳು: ಇನ್ನೂ 16-17 ವರ್ಷ ಮೀಸೆ ಮೂಡೋ ವಯಸ್ಸು, ಅಪ್ರಾಪ್ತರು. ಅಪ್ಪ ಅಮ್ಮ ಮಕ್ಕಳು ಓದಲಿ ಅಂತ ಕಾಲೇಜಿಗೆ ಕಳುಹಿಸಿದ್ರೇ ಹದಿಹರೆಯದ ವಯಸ್ಸಲ್ಲಿ ಈ ವಿದ್ಯಾರ್ಥಿಗಳು ಕಾಲೇಜಲ್ಲಿ ರೌಡಿಸಂ ಮಾಡ್ತಾ, ಕೊಲೆ ಮಾಡೋ ಲೆವಲ್ ಗೆ ಇಳಿದಿದ್ದಾರೆ. ಹದಿಹರೆಯದ ಯುವ ವಿದ್ಯಾರ್ಥಿಗಳನ್ನು ಹದ್ದು ಬಸ್ತಿನಲ್ಲಿ ಇಡಬೇಕಾದ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಅದೇನು ಪಾಠ ಮಾಡ್ತಿದ್ದಾರೋ ಏನೋ ಅಂತ ಪ್ರಜ್ಞಾವಂತ ನಾಗರೀಕರು ಪ್ರಶ್ನೆ ಮಾಡುವಂತಾಗಿದೆ. ಮತ್ತೊಂದೆಡೆ ಕಾಲೇಜು ಆವರಣದಲ್ಲಿ ಇದೇ ರೀತಿಯ ಘಟನೆಗಳು ಪದೇ ಪದೇ ಘಟಿಸುತ್ತಲೇ ಇರುತ್ತವೆ. ಪೊಲೀಸ್ ಇಲಾಖೆ ಕೂಡ ವಿದ್ಯಾರ್ಥಿಗಳ ಈ ಪುಡಿ ರೌಡಿಸಂ ಬಗ್ಗೆ ಸ್ವಲ್ಪ ನಿಗಾ ಇಟ್ಟು ಕಡಿವಾಣ ಹಾಕಬೇಕಿದೆ. ಇದನ್ನೂ ಓದಿ: T20 ಕ್ರಿಕೆಟ್‍ನಲ್ಲಿ ಭಾರತ vs ಪಾಕಿಸ್ತಾನ ನಡುವೆ ಯಾರು ಬೆಸ್ಟ್?

Share This Article
Leave a Comment

Leave a Reply

Your email address will not be published. Required fields are marked *