ಕೊರೊನಾ ಪತ್ತೆ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ: ಸಿಎಂ ಯಡಿಯೂರಪ್ಪ

Public TV
3 Min Read

– ಕಂಪನಿಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ
– ಅಕ್ರಮ ಕಟ್ಟಡ ಸಕ್ರಮ ಮಾಡಲು ತೀರ್ಮಾನ
– ಐಸಿಎಂಆರ್ ಅನುಮತಿ ನೀಡಿದ್ರೆ ಪ್ಲಾಸ್ಮಾ ಥೆರಪಿ

ಬೆಂಗಳೂರು: ಲಾಕ್‍ಡೌನ್ ಸಡಿಲಗೊಳಿಸಿದ ಬಳಿಕ ಕಂಪನಿಗಳು ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಮಾಡಬೇಕು. ಕೊರೊನಾ ಪತ್ತೆ ಪರೀಕ್ಷೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಕೊರೊನಾ ಸೋಂಕಿತರ ಸಂಖ್ಯೆ ದಿನೆ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ತಜ್ಞರ ಜೊತೆ ಸಭೆ ನಡೆಸಿದ್ದಾರೆ. ಸಭೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದಿಗೋಷ್ಠಿ ನಡೆಸಿ, ಕಳೆದ ಮೂರು ದಿನಗಳಲ್ಲಿ ಹೆಚ್ಚಿನ ಕೊರೊನಾ ಸೋಂಕಿತರ ಸಂಖ್ಯೆ ವರದಿಯಾಗುತ್ತಿದೆ. ಸಚಿವರು, ತಜ್ಞರ ಜೊತೆ ಸಮಾಲೋಚನೆ ಮಾಡಿದ್ದೇವೆ. ಇವತ್ತು ಬೆಳಗ್ಗೆ ತನಕ 38 ಪ್ರಕರಣ ವರದಿಯಾಗಿದೆ. ರೋಗಿಗಳು ರೋಗ ಲಕ್ಷಣ ಕಂಡುಬಂದ ನಾಲ್ಕು ದಿನದ ಬಳಿಕ ಬರುತ್ತಿದ್ದಾರೆ. ದಯಮಾಡಿ ರೋಗಲಕ್ಷಣ ಕಂಡುಬಂದ ತಕ್ಷಣ ತಪಾಸಣೆಗೆ ಬನ್ನಿ ಎಂದು ಮನವಿ ಮಾಡಿಕೊಂಡರು.

ಐಸಿಯುನಲ್ಲಿರುವ ವ್ಯಕ್ತಿಗಳ ಚಿಕಿತ್ಸೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಹಾಗೂ ಅವರಿಗೆ ಕೆಲವು ವಿಶೇಷ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಜೊತೆಗೆ ಕೋವಿಡ್ 19 ಚಿಕಿತ್ಸೆಗೆ ಸೂಕ್ತ ಮಾರ್ಗಸೂಚಿಯನ್ನು ಅನುಸರಿಸಲು ಸಹ ತೀರ್ಮಾನಿಸಲಾಗಿದೆ. ಪ್ಲಾಸ್ಮಾ ಚಿಕಿತ್ಸೆಗೆ ಐಸಿಎಂಆರ್ ಅನುಮತಿಗೆ ಕಾಯಲಾಗುತ್ತಿದೆ. ಜ್ವರ, ಶೀತ, ಉಸಿರಾಟದ ತೊಂದರೆ ಇರುವವರು ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು. ಇದಕ್ಕಾಗಿ ಪ್ರತ್ಯೇಕ ಆಪ್ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ಯಾವುದೇ ಪ್ರಕರಣ ವರದಿಯಾಗದೆ ಇರುವ ಜಿಲ್ಲೆಗಳಲ್ಲಿಯೂ ರೋಗ ಲಕ್ಷಣಗಳಿರುವ ವ್ಯಕ್ತಿಗಳ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಕೊರೊನಾ ಅನುಮಾನ ಬಂದರೆ ತಕ್ಷಣ ತಪಾಸಣೆ ಮಾಡಿಸಿಕೊಳ್ಳಿ. ಕರ್ನಾಟಕದ 11 ಜಿಲ್ಲೆಗಳಲ್ಲಿಯೂ ತಪಾಸಣೆ ಮಾಡುತ್ತೇವೆ. ಇದಕ್ಕಾಗಿ ಏಪ್ರಿಲ್ ಅಂತ್ಯದೊಳಗೆ 10 ಪ್ರಯೋಗಾಲಯಗಳನ್ನು ಸ್ಥಾಪನೆ ಮಾಡಲಾಗುತ್ತಿದೆ.

ಕೊರೊನಾ ಪತ್ತೆ ಪರೀಕ್ಷೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಸರಾಸರಿ 43.56ಕ್ಕೆ ಟೆಸ್ಟ್ ಮಾಡಿದಾಗ ಒಂದು ಪಾಸಿಟಿವ್ ಬರುತ್ತದೆ. ಇದುವರೆಗೂ 17,168 ಟೆಸ್ಟ್‍ಗಳನ್ನು ಮಾಡಿದ್ದೇವೆ ಎಂಬ ಮಾಹಿತಿ ತಿಳಿಸಿದರು. ವಿವಿಧ ಕಂಪೆನಿಗಳಲ್ಲಿ ಲಾಕ್‍ಡೌನ್ ಸಡಿಲಗೊಳಿಸುವ ಸಂದರ್ಭದಲ್ಲಿ ಥರ್ಮಲ್ ಸ್ಕಾನರ್ ಮತ್ತಿತರ ಸರಳ ಪರೀಕ್ಷಾ ಪರಿಕರಗಳನ್ನು ಅಳವಡಿಸಬೇಕು. ಈ ಮೂಲಕ ತಮ್ಮ ಸಿಬ್ಬಂದಿಯಲ್ಲಿ ರೋಗ ಲಕ್ಷಣವಿದೆಯೇ ಎಂದು ಪ್ರತಿ ದಿನ ಪರೀಕ್ಷೆ ಮಾಡುವ ಅಗತ್ಯವಿದೆ. ಆರೋಗ್ಯ ಸೇತು ಆಪ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಡೌನ್‍ಲೋಡ್ ಮಾಡಿಕೊಳ್ಳಲು ಮನವಿ ಮಾಡಿಕೊಂಡರು.

ಲಾಕ್‍ಡೌನ್ ಸಡಿಲಿಕೆ ಕುರಿತು 20 ರಂದು ಸಭೆ ನಡೆಯಲಿದೆ. ಮತ್ತೆ ಸಭೆ ಸೇರಿ ಕೆಲ ವಿನಾಯಿತಿಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ವಿನಾಯಿತಿಗೆ ನಿರ್ಧಾರ ಕೈಗೊಳ್ಳುತ್ತೇವೆ. ಹೀಗಾಗಿ ಪರಿಸ್ಥಿತಿ ನೋಡಿಕೊಂಡು ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ನಿರ್ಧಾರ ಮಾಡುತ್ತೇವೆ. ಮುಂದಿನ ಮೂರು ದಿನಗಳ ಬೆಳವಣಿಗೆ ನೋಡಿಕೊಂಡು ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಸದ್ಯಕ್ಕೆ ಕೆಲ ವಿನಾಯಿತಿ ಬಗ್ಗೆ ಚಿಂತನೆ ನಡೆಯುತ್ತಿದೆ. ಯಾವ, ಯಾವುದಕ್ಕೆ ವಿನಾಯಿತಿ ಎಂಬುದು 20ರ ನಂತರ ತೀರ್ಮಾನ ಮಾಡುತ್ತೇವೆ. ಅಂದು ಸಭೆ ಸೇರಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಸಣ್ಣ ಕೈಗಾರಿಕೆ ಮತ್ತು ಕಟ್ಟಡ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ಚಿಂತನೆ ಇದೆ. ಆದರೆ ಒಂದು ಷರತ್ತು ಹಾಕಿ ಕೆಲಸಕ್ಕೆ ಅನುವು ಮಾಡಿಕೊಡುವ ಚಿಂತನೆ ಇದೆ. ಅಲ್ಲಿ ಕೆಲಸ ಮಾಡಿವ ಕಾರ್ಮಿಕರಿಗೆ ಅಲ್ಲೇ ವಾಸ್ತವ್ಯ ಮಾಡಿಕೊಡಲು ಅನುವು ಮಾಡಿಕೊಡಲು ಚಿಂತನೆ ಮಾಡಲಾಗಿದೆ ಎಂದರು.

ಅಕ್ರಮ ಕಟ್ಟಡ ಸಕ್ರಮ ಮಾಡಲು ತೀರ್ಮಾನ ಮಾಡಲಾಗಿದೆ. ಮಾರುಕಟ್ಟೆ ಮೌಲ್ಯದ ಶೇ 25ರಷ್ಟು ದಂಡ ಹಾಕಲು ಅವಕಾಶ ಇದೆ. ನಗರಾಭಿವೃದ್ಧಿ ಇಲಾಖೆ ಒಂದು ವಾರದ ಒಳಗೆ ಮಾರ್ಗಸೂಚಿ ಹೊರಡಿಸುತ್ತೆ. ಅಕ್ರಮ ಸಕ್ರಮದ ಬಗ್ಗೆ ಸಭೆ ನಡೆಸಲಾಯಿತು. ಅನಧಿಕೃತ ಕಟ್ಟಡಗಳು, ಬಡಾವಣೆಗಳಿಗೆ ಲೈಟ್, ನೀರು ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ಸರ್ಕಾರ ನೀಡಿದೆ. ಆದರೆ ಇದರಿಂದ ಸರ್ಕಾರಕ್ಕೆ ಮಾತ್ರ ಯಾವುದೇ ತೆರಿಗೆ ಬರುತ್ತಿಲ್ಲ. ಹೀಗಾಗಿ ಅನಧಿಕೃತ ಕಟ್ಟಡಗಳನ್ನ ಸಕ್ರಮ ಮಾಡುವುದರ ಜೊತೆಗೆ ರಾಜಸ್ವ ಸಂಗ್ರಹದ ಗುರಿ ಇದೆ ಎಂದು ತಿಳಿಸಿದರು.

ಹಳೇ ಸಮೀಕ್ಷೆ ಪ್ರಕಾರ ಬೆಂಗಳೂರಿನ 2.93 ಲಕ್ಷ ಅನಧಿಕೃತ ಕಟ್ಟಡಗಳಿವೆ. ರಾಜ್ಯದಲ್ಲಿ 35 ಲಕ್ಷ ಅನಧಿಕೃತ ಕಟ್ಟಡಗಳಿದ್ದು, ಈಗ ಡಬಲ್ ಆಗಿರಬಹದು. ನಿರ್ಮಾಣ ನಿಯಮ ಉಲ್ಲಂಘನೆ ಅಡಿಯಲ್ಲಿ ಶೇ.25ರಷ್ಟು ದಂಡ ವಿಧಿಸಲು ಅವಕಾಶ ಇದೆ. ಬೇರೆ ರಾಜ್ಯಗಳ ಕ್ರಮಗಳನ್ನ ಅಧ್ಯಯನ ನಡೆಸಿ, ಸಕ್ರಮಕ್ಕೆ ಮಾರ್ಗಸೂಚಿಗಳನ್ನ ಪುನಃರಚಿಸಲು ಸೂಚಿಸಲಾಗಿದೆ. ನಗರಾಭಿವೃದ್ಧಿ ಇಲಾಖೆ ಒಂದು ವಾರದೊಳಗೆ ಹೊಸ ಮಾರ್ಗಸೂಚಿ ಹೊರಡಿಸುತ್ತೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *