ಕುಮಾರಸ್ವಾಮಿಗೆ ಯಡಿಯೂರಪ್ಪ ಧನ್ಯವಾದ

Public TV
1 Min Read

ಬೆಂಗಳೂರು: ಮಗನ ಮದುವೆಯನ್ನು ಸರಳವಾಗಿ ಮಾಡಿದ್ದಕ್ಕೆ ಎಚ್.ಡಿ.ಕುಮಾರಸ್ವಾಮಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧನ್ಯವಾದ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಕುಮಾರಸ್ವಾಮಿ ಪುತ್ರನ ಮದುವೆಗೆ ಅನುಮತಿ ಕೊಡಲಾಗಿತ್ತು. ಅವರು ಸರಳವಾಗಿ ಮದುವೆ ಮಾಡಿದ್ದಾರೆ. ಅವರ ಕುಟುಂಬ ದೊಡ್ಡದಿದ್ದರೂ ಹೆಚ್ಚು ಜನರನ್ನು ಸೇರಿಸದೆ ಮದುವೆ ಕಾರ್ಯ ಮುಗಿಸಿದ್ದಾರೆ. ಹೀಗಾಗಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಶುಕ್ರವಾರ ನಟ ನಿಖಿಲ್ ಮತ್ತು ರೇವತಿ ವಿವಾಹ ಕಲ್ಯಾಣೋತ್ಸವ ಅದ್ಧೂರಿ ಸೆಟ್‍ನಲ್ಲಿ ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿನ ಎಚ್‍ಡಿ ಕುಮಾರಸ್ವಾಮಿ ಫಾರ್ಮ್ ಹೌಸ್‍ನಲ್ಲಿ ನಡೆದಿದೆ. ಮದುವೆಗಾಗಿ ಕೇತಗಾನಹಳ್ಳಿಯಲ್ಲಿನ ಕುಮಾರಸ್ವಾಮಿ ಫಾರ್ಮ್ ಹೌಸ್‍ನಲ್ಲಿ ಸಪ್ತಪದಿ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿತ್ತು. ಬೆಳಗ್ಗೆ 9.30ರಿಂದ 10.20ರ ಶುಭಲಗ್ನದಲ್ಲಿ ವರ ನಿಖಿಲ್ ರೇವತಿಯ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದ್ದರು. ನವ ದಂಪತಿಗೆ ಮದುವೆಯಲ್ಲಿ ಭಾಗಿಯಾಗಿದ್ದ ಗಣ್ಯರು, ಹಿತೈಷಿಗಳು ಧಾರೆ ಎರೆಯುವ ಮೂಲಕ ಆಶೀರ್ವಾದ ಮಾಡಿದ್ದರು.

ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ದಂಪತಿ, ಎಚ್‍ಡಿ ಕುಮಾರಸ್ವಾಮಿ ದಂಪತಿ ಹಾಗೂ ಉದ್ಯಮಿ ಮಂಜುನಾಥ್ ದಂಪತಿ ಸಮ್ಮುಖದಲ್ಲಿ ನಿಖಿಲ್ ಮತ್ತು ರೇವತಿ ವಿವಾಹ ಕಾರ್ಯಕ್ರಮ ನೆರವೇರಿದೆ. ನಿಖಿಲ್ ಹಾಗೂ ರೇವತಿ ಮನೆಯವರು, ಆಪ್ತರಷ್ಟೆ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *