ಅನರ್ಹರನ್ನ ಮುಂಬೈನಲ್ಲಿಟ್ಟಿದ್ದು ಶಾ – ಕಾಂಗ್ರೆಸ್‍ಗೆ ಸಿಕ್ತು ಯಡಿಯೂರಪ್ಪ ಆಡಿಯೋ ಅಸ್ತ್ರ

Public TV
3 Min Read

– ‘ಶಾ’ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
– ರಾಜ್ಯಪಾಲರಿಗೆ ದೂರು ನೀಡಿದ ಕಾಂಗ್ರೆಸ್

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಸಿಎಂ ಯಡಿಯೂರಪ್ಪನವರು ಮಾತನಾಡಿದ ವಿಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ಗೆ ಅನರ್ಹ ಶಾಸಕರ ವಿರುದ್ಧ ದೊಡ್ಡ ಅಸ್ತ್ರವೇ ಸಿಕ್ಕಿದಂತಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಮುಂದೆ ನಿಂತು ಶಾಸಕರನ್ನು ಮುಂಬೈನ ಹೋಟೆಲಿನಲ್ಲಿ ಇರಿಸಿದ್ದರು ಎಂದು ಯಡಿಯೂರಪ್ಪ ಆಡಿಯೋದಲ್ಲಿ ಹೇಳುತ್ತಾರೆ. ಇದೇ ಆಡಿಯೋವನ್ನು ಸಾಕ್ಷ್ಯವಾಗಿಟ್ಟುಕೊಂಡು ಕಾಂಗ್ರೆಸ್ ರಾಜ್ಯಪಾಲರಿಗೆ ದೂರು ನೀಡಿದೆ.

ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಆಡಿಯೋ ಬಗ್ಗೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ಸಾಲು ಸಾಲು ಟ್ವೀಟ್ ಗಳ ಮೂಲಕ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಅದ್ಭುತ ವಿಡಿಯೋ ಮೂಲಕ ಯಡಿಯೂರಪ್ಪನವರು ತಮ್ಮ ಸರ್ಕಾರದ ನೂರು ದಿನದ ಸಂಭ್ರಮ ಆಚರಿಸಿದ್ದಾರೆ ಎಂದು ಸಿದ್ದರಾಮಯ್ಯನವರು ವ್ಯಂಗ್ಯವಾಗಿ ಟೀಕಿಸಿದ್ದಾರೆ.

ಟ್ವೀಟ್ 1: ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಸರ್ಕಾರದ ನೂರು ದಿನಗಳನ್ನು ಒಂದು ಅದ್ಭುತ ವಿಡಿಯೋ ಪ್ರಸಾರದ ಮೂಲಕ ಆಚರಿಸಿದ್ದಾರೆ. ಈ ಮೂಲಕ ತಾವು ನಡೆಸಿದ್ದ ಆಪರೇಷನ್ ಕಮಲಕ್ಕೆ ಸಾಕ್ಷ್ಯ ಒದಗಿಸಿದ್ದಾರೆ. ರಾಜ್ಯದ ಜನ ಅವರಿಗೆ ಕೃತಜ್ಞತೆ ಸಲ್ಲಿಸಬೇಕು. ಶಾಸಕರ ರಾಜೀನಾಮೆಗೂ ಬಿಜೆಪಿಗೂ ಸಂಬಂಧ ಇಲ್ಲ ಎನ್ನುತ್ತಿದ್ದ ಬಿಜೆಪಿ ಈಗ ಆಪರೇಷನ್ ಕಮಲ ಅಮಿತ್ ಶಾ ನಿರ್ದೇಶನದಲ್ಲಿಯೇ ನಡೆದಿತ್ತು ಎಂಬ ಸತ್ಯವನ್ನು ವೀಡಿಯೋದಲ್ಲಿ ಹೇಳಿದ್ದಾರೆ. ಇಂತಹ ಗೃಹಸಚಿವರಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇದೆಯೇ?

ಟ್ವೀಟ್ 2: ನಮ್ಮ ಪಕ್ಷದ ಶಾಸಕರಿಗೆ ಆಮಿಷಗಳನ್ನು ಒಡ್ಡಿ ಮುಂಬೈನ ಹೊಟೇಲ್‍ನಲ್ಲಿಟ್ಟು ಸರ್ಕಾರದ ಪತನಕ್ಕೆ ನೇರ ಕಾರಣರಾಗಿರುವ ಅಮಿತ್ ಶಾ ಆಪರೇಷನ್ ಕಮಲ ಎಂಬ ಅಸಂವಿಧಾನಿಕ ಕಾರ್ಯಾಚರಣೆಯ ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು.

ಟ್ವೀಟ್ 3: ಆಪರೇಷನ್ ಕಮಲದ ಹೆಸರಿನಲ್ಲಿ ಸಂವಿಧಾನದ ಕಗ್ಗೊಲೆಯಾಗುತ್ತಿದೆ. ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ನೇರವಾಗಿ ಈ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ಪುರಾವೆ ಸಿಕ್ಕಿದೆ. ಆದ ಕಾರಣ ಇದನ್ನು ಇಲ್ಲಿಗೆ ಕೈಬಿಡುವ ಪ್ರಶ್ನೆಯೇ ಇಲ್ಲ. ಇದನ್ನು ಸುಪ್ರೀಂ ಕೋರ್ಟ್ ನ ಗಮನಕ್ಕೆ ತಂದು ನ್ಯಾಯ ಕೇಳ್ತೇವೆ.

ಟ್ವೀಟ್ 4: ನಮ್ಮ ಪಕ್ಷದ ವತಿಯಿಂದ ರಾಜ್ಯಪಾಲರನ್ನು ಭೇಟಿಮಾಡಿ, ಯಡಿಯೂರಪ್ಪನವರ ರಾಜೀನಾಮೆ ಪಡೆಯುವಂತೆ ಮನವಿ ಪತ್ರ ನೀಡಲಿದ್ದೇವೆ. ರಾಷ್ಟ್ರಪತಿಯವರನ್ನೂ ಭೇಟಿ ಮಾಡಿ, ಆಪರೇಷನ್ ಕಮಲದಲ್ಲಿ ಭಾಗಿಯಾದ ಕೇಂದ್ರ ಸರ್ಕಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇವೆ.

ಆಡಿಯೋದಲ್ಲಿ ಬಿಎಸ್‍ವೈ ಹೇಳಿದ್ದೇನು?
ಯಾಕೋ ಇವತ್ತು ನೀವು ಮಾತಾಡಿದಂತ ಧಾಟಿ ಸರ್ಕಾರ ಉಳಿಸೋಕೆ ಇದೆ ಅಂತ ಅನ್ನಿಸುತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷರೇ ಮುಂದೆ ನಿಂತು 17 ಜನರು 2-3 ತಿಂಗಳು ಮುಂಬೈಯಲ್ಲಿರಿಸಿದ್ದರು. ಅವರೆಲ್ಲರೂ ಕ್ಷೇತ್ರಕ್ಕೂ ಬರಲಿಲ್ಲ. ಹೆಂಡ್ತಿ ಮಕ್ಕಳ ಮುಖ ನೋಡಿರಲಿಲ್ಲ. 3-4 ವರ್ಷ ವಿಪಕ್ಷದಲ್ಲಿ ಇರಬೇಕಾದ ನಮ್ಮನ್ನ ಆಡಳಿತ ಪಕ್ಷಕ್ಕೆ ಬರುವಂತೆ ಮಾಡಿದರು. ನಿಮ್ಮ ಬಾಯಲ್ಲಿ ಅನರ್ಹ ಪರ ಗಟ್ಟಿಯಾಗಿ ನಿಂತುಕೊಳ್ತೇವೆ ಅನ್ನೋ ಮಾತು ಬರಲಿಲ್ಲ. ಇದನ್ನ ನಾನು ಖಂಡಿತಾ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ಐ ಆಮ್ ಸಾರಿ. ನನಗೇನು ಸಿಎಂಗಿರಿ ಬೇಕಾಗಿರಲಿಲ್ಲ. ಈಗಾಗಲೇ 3-4 ಬಾರಿ ಸಿಎಂ ಆಗಿದ್ದೇನೆ. ದೊಡ್ಡತನ ಧಾರಾಳತನ, ವಾಸ್ತವ್ಯ ಸ್ಥಿತಿಯನ್ನ ತಿಳಿಯದೇ ನೀವು ಮಾತಾಡಿದ್ದೀರಾ ಗೋಕಾಕ್ ಬಗ್ಗೆ ನೀವೇಕೆ ಮಾತಾಡಿಲ್ಲ? ಅದರಲ್ಲಿ ಅಂತಹ ವಿಶೇಷ ಏನಿದೆ..? ಅವರನ್ನೆಲ್ಲಾ ನಂಬಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತು ನಾನು ಅಪರಾಧ ಮಾಡಿದ್ದೇನೆ ಅಂತ ಈಗ ಅನ್ನಿಸುತ್ತಿದೆ.

ಇಂತಹ ಎರಡೂ ಕ್ಷೇತ್ರದ ಬಗ್ಗೆ ಒನ್ ಸೈಡೆಡ್ ಮಾತಾಡಿದ್ರಲ್ಲ. ಐ ನೆವರ್ ಎಕ್ಸ್ ಪೆಕ್ಟೆಡ್ ದಿಸ್ ಸಾರಿ. 4 ಗೋಡೆ ಮಧ್ಯೆ ಇರುವಂತೆ ಮಾಡಿದ್ರೆ ದೊಡ್ಡ ಉಪಕಾರ ಮಾಡಿದಂತಾಗುತ್ತೆ. ನಾನು ಇಲ್ಲಿ ಬಂದು ಅಪರಾಧ ಮಾಡಿದಂತಾಗಿದೆ, ಈ ಸಭೆಗೆ ನಾನು ಬರಬಾರದಿತ್ತು. ಸೋಲು ಗೆಲುವು ಬೇರೆ ವಿಚಾರ. ಆದರೆ ಒಬ್ಬರ ಬಾಯಲ್ಲೂ ಆ ಎಂಎಲ್‍ಎಗಳು ತ್ಯಾಗ ಮಾಡಿದ್ದಾರೆಂಬ ಮಾತು ಬರಲಿಲ್ಲ. ನಮ್ಮನ್ನು ನಂಬಿ ಮೂರ್ಖರಾಗಿದ್ದಾರೆ, ಹುಚ್ಚರಾಗಿದ್ದಾರೆ. ಅವರು ರಾಜೀನಾಮೆ ಕೊಟ್ಟಿದ್ದು ನಮ್ಮನ್ನ ನಂಬಿ. ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡುವ ಅವಶ್ಯಕತೆ ಅವರಿಗಿತ್ತಾ? ರಾಜೀನಾಮೆ ನೀಡಿ ಅವರು ಅಷ್ಟು ದಿನ ಮುಂಬೈನಲ್ಲಿದ್ದರು. ಅದು ನಮಗಾಗಿ ಅಲ್ಲವೇ? ಅವರು ರಾಜೀನಾಮೆ ನೀಡಿ ನಮ್ಮ ಸರ್ಕಾರ ತರುವ ಅವಶ್ಯಕತೆ ಅವರಿಗೇನಿತ್ತು? ಅವರಿಂದ ತಾನೇ ನಮ್ಮ ಸರ್ಕಾರ ಬಂದಿರುವುದು.

ಈ ಬಗ್ಗೆ ನಾವು ಯಾವುದೇ ಚರ್ಚೆ ಮಾಡಿಲ್ಲ. ಕಾರಣ ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣ ಇತ್ತು. ಪ್ರಕರಣದ ತೀರ್ಪು 4ನೇ ತಾರೀಖಿನಂದು ಬರುತ್ತದೆ. ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಶೇ.99ರಷ್ಟು ಅವರು ಸ್ಪರ್ಧೆ ಮಾಡುವ ನಿರ್ಧಾರ ನಾವು ತಗೆದುಕೊಳ್ಳುತ್ತೇವೆಂದು ನಿರೀಕ್ಷೆ ಮಾಡುತ್ತೇವೆ. ಕೆಲವು ವಾಸ್ತವಿಕ ಸ್ಥಿತಿಯಿದೆ. ಗೆದ್ದು ಬರುವುದು ಕಷ್ಟವಿದೆ. ಅದರ ಇನ್ನೊಂದು ಮುಖ ಬೇರೆನೇ ಇದೆ. ಸ್ವಲ್ಪ ಯೋಚನೆ ಮಾಡಿ ನೋಡಿ ಯಡಿಯೂರಪ್ಪನವರೇ ಅಂದಿದ್ರೆ ನಾನು ಇಂದು ಮಾತನಾಡುತ್ತಿರಲಿಲ್ಲ. ಆದ್ರೆ ಪಕ್ಷದ ಹಿರಿಯರಿಂದ ಹಿಡಿದು ಕಿರಿಯರವರೆಗೂ ಯಾರೊಬ್ಬರು ಸಹ ನನ್ನ ಜೊತೆ ಚರ್ಚೆ ಮಾಡದಿರುವುದು ನನಗೆ ನೋವು ತಂದಿದೆ.

Share This Article
Leave a Comment

Leave a Reply

Your email address will not be published. Required fields are marked *