ಕೊರೊನಾ ಭೀತಿ- ಸ್ವತಃ ಆದೇಶ ಹೊರಡಿಸಿ ಅದ್ದೂರಿ ಮದ್ವೆಯಲ್ಲಿ ಸಿಎಂ ಭಾಗಿ

Public TV
1 Min Read

– ರಾಜ್ಯದಲ್ಲಿ ಕೊರೊನಾ ಭೀತಿ ಇದ್ದರೂ ಅದ್ದೂರಿ ಮದುವೆ
– ಎಂಎಲ್‍ಸಿ ಕವಟಗಿಮಠ ಮಗಳ ಮದುವೆಯಲ್ಲಿ ಗಣ್ಯಾತಿಗಣ್ಯರು ಭಾಗಿ

ಬೆಳಗಾವಿ: ರಾಜ್ಯಾದ್ಯಂತ ಅದ್ದೂರಿ ಮದುವೆಗೆ ಬ್ರೇಕ್ ಹಾಕಿದ್ದು ನೂರಕ್ಕೂ ಹೆಚ್ಚು ಜನ ಒಂದೆಡೆ ಸೇರಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದರು. ಆದರೆ ಇದೆಲ್ಲವನ್ನೂ ಗಾಳಿಗೆ ತೂರಿದ ಸರ್ಕಾರದ ಮುಖ್ಯ ಸಚೇತಕ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರು ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಈ ಮದುವೆಯಲ್ಲಿ ಸಚಿವರು, ಮಾಜಿ ಶಾಸಕರು ಗಣ್ಯಾತಿಗಣ್ಯರು ಸೇರಿದಂತೆ ಸಿಎಂ ಯಡಿಯೂರಪ್ಪ ಅವರು ಕೂಡ ಭಾಗವಹಿಸಿ ನವ ದಂಪತಿಗಳಿಗೆ ಆಶೀರ್ವಾದ ಮಾಡಿದ್ದಾರೆ. ಆದರೆ ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ. ಸರ್ಕಾರದ ಮುಖ್ಯ ಸಚೇತಕರೇ ಸಿಎಂ ಆದೇಶವನ್ನು ಗಾಳಿಗೆ ತೂರಿದ್ದಾರೆ. ಹಾಗಾದರೆ ಸಿಎಂ ಆದೇಶ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಮಗಳ ಮದುವೆಗೆ ಅನ್ವಯವಾಗುದಿಲ್ವಾ ಎಂಬ ಪ್ರಶ್ನೆ ಸಾರ್ವಜನಕರಿಂದ ಕೇಳಿ ಬರುತ್ತಿದೆ.

ಬೆಳಗಾವಿಯ ಉದ್ಯಮ್ ಬಾಗ್‍ನಲ್ಲಿರುವ ಶಗುನ್ ಗಾರ್ಡನ್‍ನಲ್ಲಿ ಮಹಾಂತೇಶ್ ಕವಟಗಿಮಠ ಮಗಳ ಮದುವೆ ನಡೆಯಿತು. ಈ ಮದುವೆಗೆ ಸುಮಾರು ಐದು ಸಾವಿರಕ್ಕೂ ಅಧಿಕ ಜನ ಮದುವೆಗೆ ಆಗಮಿಸಿದ್ದರು. ಅದ್ದೂರಿ ಮದುವೆ ತಡೆಯಲು ಅಧಿಕಾರಿಗಳ ಮಿನಾಮೇಷ ತೋರಿದರು. ಜೊತೆಗೆ ಜಿಲ್ಲಾಡಳಿತ ಹಾಗೂ ಪೊಲೀಸರು ಶ್ರೀರಕ್ಷೆ ಒದಗಿಸಿದ್ದರು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜನಪ್ರತಿನಿಧಿಗಳು:
ಅದ್ದೂರಿ ಮದುವೆ ನಡೆಸದಂತೆ ಆದೇಶ ಹೊರಡಿಸಿದ್ದ ಸಿಎಂ ಯಡಿಯೂರಪ್ಪ ಅವರ ಆದಿಯಾಗಿ ಜನಪ್ರತಿನಿಧಿಗಳಾದ ಕೇಂದ್ರ ಸಚಿವ ಸುರೇಶ್ ಅಂಗಡಿ, ಸಚಿವ ಶ್ರೀಮಂತ ಪಾಟೀಲ್, ಸಚಿವೆ ಶಶಿಕಲಾ ಜೊಲ್ಲೆ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಮದುವೆಗೆ ಆಗಮಿಸಿದ್ದರು. ಜೊತೆಗೆ ಕಾಶಿ ಜಗದ್ಗುರುಗಳಾದ ಚೆನ್ನಸಿದ್ದರಾಮ ಪಂಡಿತರಾದ್ಯೆ ಶಿವಾಚಾರ್ಯ ಸ್ವಾಮೀಜಿ, ಗದಗದ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *