– ನಿಮ್ಮ ಪ್ರಚಾರದ ತೆವಲಿಗೆ ಅಮಾಯಕರ ಜೀವ ಹೋಗಿದೆ
ಬೆಂಗಳೂರು: ಕಾಲ್ತುಳಿತ ಪ್ರಕರಣಕ್ಕೆ (Chinnaswamy Stampede) ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇರ ಹೊಣೆ, ತಕ್ಷಣ ಇವರು ರಾಜೀನಾಮೆ ಕೊಡಬೇಕು ಎಂದು ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಮ್ಮ ತೆವಲಿಗಾಗಿ 11 ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಯಾರೇ ಸತ್ತರು ಹತ್ತು ಲಕ್ಷ ಬಿಸಾಕಿ ನಮಗೇನು ಗೊತ್ತಿಲ್ಲ ಅಂತಾ ಸುಮ್ಮನೆ ಇರೋದು. ಅದೇ ರೌಡಿ ಶೀಟರ್ ಗೆ ಆದರೆ 25 ಲಕ್ಷ ರೂ. ಪರಿಹಾರ, ನಮ್ಮ ಆನೇ ಹೋಗಿ ತುಳಿದಿದ್ದಕ್ಕೆ ಕೇರಳದವರಿಗೆ 25 ಲಕ್ಷ ರೂ. ಕೊಟ್ಟಿದ್ದಾರೆ ಎಂದು ಚಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರ ಹಾಕಿದರು.
ಸಿಎಂ, ಡಿಸಿಎಂ ಅವರಿಂದ ಇಡೀ ರಾಜ್ಯವೇ ಸೂತಕದಲ್ಲಿದೆ. ಜನರ ಉದ್ದಾರಕ್ಕಾಗಿ ಸರ್ಕಾರ ಬಂದಿಲ್ಲ, ಸರ್ವನಾಶಕ್ಕೆ ಬಂದಿದೆ ಎಂದು ಸಿಟ್ಟು ಹೊರಹಾಕಿದರು. ಇದನ್ನೂ ಓದಿ: Stampede Case | ಮೃತಪಟ್ಟ 11 ಸಂತ್ರಸ್ತರ ಕುಟುಂಬಳಿಗೆ RCB ಆಡಳಿತ ಮಂಡಳಿಯಿಂದ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ
ನಾಲ್ಕೈದು ಜನರು ಸತ್ತ ನಂತರ ಸಿದ್ದರಾಮಯ್ಯ ಎಲ್ಲಿ ಹೋಗಿದ್ರು? ಜನಾರ್ದನ ಹೋಟೆಲ್ ಗೆ ಬಾದಾಮಿ ಹಲ್ವಾ ಮತ್ತೆ ದೋಸೆ ತಿನ್ನೋಕೆ ಹೋಗಿದ್ದರು. ಒಂದು ಕ್ರಿಕೆಟ್ ತಂಡದಲ್ಲಿ 11 ಜನ ಇದ್ದಂತೆ, ಒಂದು ತಂಡದಷ್ಟು ಜನರನ್ನು ಬಲಿ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ವಿಧಾನಸೌಧವನ್ನು ಇವರು ಡಬ್ಬಾ ಅಂಗಡಿ ಮಾಡಿ ಇಟ್ಟುಕೊಂಡಿದ್ದಾರೆ. ಅನೇಕರ ತಿಥಿಗಳು, ಜನ್ಮದಿನಾಚರಣೆಗಳು ಇಲ್ಲಿ ಆಗುತ್ತಿವೆ. ನಿಮ್ಮ ಬೇಜವಾಬ್ದಾರಿಯಿಂದ ದುರಂತ ಸಂಭವಿಸಿದೆ ಎಂದು ದೂರಿದರು.