ಮದ್ವೆ ನೆಪದಲ್ಲಿ 3 ದಿನ ಮೈಸೂರಲ್ಲೇ ಸಿಎಂ ಬಿಡಾರ- ಇಲ್ಲಿದೆ ಪಾಲಿಟಿಕ್ಸ್ ಗೇಮ್‍ನ ಇನ್‍ಸೈಡ್ ಸ್ಟೋರಿ

Public TV
1 Min Read

ಮೈಸೂರು: ಚುನಾವಣೆ ದಿನಾಂಕಕ್ಕೂ ಮುನ್ನ ಪ್ರತಿಷ್ಠೆಯ ಕಣವಾಗಿರುವ ಮೈಸೂರಿನ ಚಾಮುಂಡೇಶ್ವರಿ ಹಾಗೂ ವರುಣ ವಿಧಾನಸಭಾ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ತಮ್ಮನ ಮದುವೆ ನೆಪದಲ್ಲಿ ಮೂರು ದಿನಗಳ ಕಾಲ ತವರಿಗೆ ಆಗಮಿಸಿರುವ ಸಿಎಂ, ಪಕ್ಷದ ಬಲವರ್ಧನೆಗೆ ಪ್ಲಾನ್ ಮಾಡುತ್ತಿದ್ದಾರೆ.

ಇಂದು ಹಾಗೂ ನಾಳೆ ಚಾಮುಂಡೇಶ್ವರಿ ಹಾಗೂ ವರುಣ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರ ಜೊತೆ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸದ್ಯ ಎರಡು ಕ್ಷೇತ್ರಗಳಲ್ಲಿ ಜನರಿಂದ ಕಾಂಗ್ರೆಸ್ ಗೆ ಇರುವ ಅಭಿಪ್ರಾಯ ಹಾಗೂ ಒಲವಿನ ಬಗ್ಗೆ ತಿಳಿಯುವ ಕೆಲಸವನ್ನು ಸಿಎಂ ಮಾಡಲಿದ್ದಾರೆ. ಜನರನ್ನು ಕಾಂಗ್ರೆಸ್ ನತ್ತ ಸೆಳೆಯಲು ಯಾವ ಗೇಮ್ ಪ್ಲಾನ್ ಮಾಡಬೇಕೆಂದು ಚರ್ಚೆ ನಡೆಸಲಿದ್ದಾರೆ.

ತಮ್ಮನ ಮದುವೆ ನೆಪದಲ್ಲಿ ಬಂದು ಪಕ್ಷದ ಬಲವರ್ಧನೆಗೆ ತೊಡಿರುವ ಸಿಎಂ ಈ ಎರಡು ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಗೆಲ್ಲಬೇಕೆಂದು ತಂತ್ರ ಪ್ರತಿತಂತ್ರಗಳನ್ನು ರೂಪಿಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ 20 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಲಿದೆ ಎಂಬ ವರದಿಗಳು ಊಹಾಪೂಹದಿಂದ ಕೂಡಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಟಿಕೆಟ್ ಹಂಚಿಕೆ ಮಾಡುವಾಗ ಪಕ್ಷದ ಎಲ್ಲಾ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತದೆ. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವಾಗಲಿದೆ. ಟಿಕೆಟ್ ನೀಡುವ ಮುನ್ನ ಆಯಾ ವಿಧಾನಸಭಾ ಕ್ಷೇತ್ರಗಳ ಸ್ಥಳೀಯ ನಾಯಕರ ಕಾರ್ಯಕರ್ತರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ರು

ದೇಶದಲ್ಲಿ ಮೋದಿ ಹವಾ ದಿನೇ ದಿನೇ ಕಡಿಮೆಯಾಗುತ್ತಿದೆ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಈ ಕುರಿತು ಇತ್ತೀಚಿನ ಚುನಾವಣಾ ಸಮೀಕ್ಷೆಗಳಿಂದಲೂ ತಿಳಿದುಬಂದಿದೆ ಅಂತ ಹೇಳಿದ್ರು.

ಮಾಜಿ ಸಂಸದ ಸಿ.ಎಚ್ ವಿಜಯಶಂಕರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಪ್ರತಿಕ್ರಿಯಿಸಿ, ವಿಜಯಶಂಕರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರೆ ಸಂತೋಷದಿಂದ ಸ್ವಾಗತಿಸುತ್ತೇನೆ. ನಾನು ಈ ಬಗ್ಗೆ ಅವರ ಜೊತೆ ಮಾತನಾಡಿಲ್ಲ ಅಂದ್ರು.

 

Share This Article
Leave a Comment

Leave a Reply

Your email address will not be published. Required fields are marked *