ಇಂದು ಸಿದ್ದರಾಮಯ್ಯ ಸರ್ಕಾರದ 5ನೇ ಬಜೆಟ್ ಮಂಡನೆ

Public TV
2 Min Read

– ಸಹಕಾರಿ ಸಂಘಗಳ ಸಾಲ ಮನ್ನಾ ನಿರೀಕ್ಷೆ 
– ಅಹಿಂದಗಳಿಗೆ ಭರಪೂರ ಘೋಷಣೆ ಸಾಧ್ಯತೆ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಅಳಿವು ಉಳಿವಿನ ಪ್ರಶ್ನೆ. ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಎರಡು ಕ್ಷೇತ್ರ್ರಗಳ ಉಪಚುನಾವಣೆ ಇದೆ. ನೋಟ್‍ಬ್ಯಾನಿಂದ ತೆರಿಗೆ ಸಂಗ್ರಹ ಕುಸಿದಿದೆ. ಈ ನಡುವೆ ಪಂಚರಾಜ್ಯ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅರ್ಭಟ ಕೈ ಪಡೆಯನ್ನ ನಡುಗಿಸಿದೆ. ಬಿಜೆಪಿ ಪಾಳಯದ ಮುಂದಿನ ಟಾರ್ಗೆಟ್ ಕರ್ನಾಟಕವಾಗಿದ್ದು, ಕೈ ಪಡೆಗೆ ಮೋದಿ ಫೋಬಿಯಾ ಕಾಡಲು ಶುರುವಾಗಿದೆ. ಇವೆಲ್ಲದರ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರ ಇಂದಿನ ಬಜೆಟ್ ಕುತೂಹಲ ಮೂಡಿಸಿದೆ.

ಇಂದು ಬೆಳಗ್ಗೆ 11.30ಕ್ಕೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ 12ನೇ ಬಜೆಟ್ ಮಂಡಿಸಲಿದ್ದಾರೆ. ಸಿಎಂ ಆಗಿ ಐದನೇ ಬಜೆಟ್ ಮಂಡಿಸಲಿದ್ದಾರೆ. ಕಳೆದ ಬಾರಿ ಬಜೆಟ್ ಗಾತ್ರ 1,63,419 ಕೋಟಿ ರೂಪಾಯಿ ಇತ್ತು. ಆದ್ರೆ ಈ ಬಾರಿ ಬಜೆಟ್ ಗಾತ್ರ 1.85 ಲಕ್ಷ ಕೋಟಿ ರೂಪಾಯಿ ತಲುಪುವ ಸಾಧ್ಯತೆಯಿದೆ. ಯೋಜನಾ ಗಾತ್ರ 85 ಸಾವಿರ ಕೋಟಿ ರೂಪಾಯಿ ಇತ್ತು. ಈ ಬಾರಿ ಯೋಜನಾ ಗಾತ್ರ 1 ಲಕ್ಷ ಕೋಟಿ ರೂಪಾಯಿ ತಲುಪುವ ಸಾಧ್ಯತೆ ಇದೆ.

ಕಳೆದ ಬಾರಿ ಬಜೆಟ್‍ನ ತೆರಿಗೆ ಸಂಗ್ರಹ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ನೋಟು ನಿಷೇಧದ ಬಳಿಕ 3 ಸಾವಿರ ಕೋಟಿ ರೂಪಾಯಿಯಷ್ಟು ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಈ ಮಧ್ಯೆ ಸಾಲ ಮನ್ನಾ ಮಾಡುವಂತೆ ಕೂಗು ಕೇಳಿಬಂದಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. 14 ಲಕ್ಷದ 72 ಸಾವಿರ ರೈತರಿಗೆ ಅನುಕೂಲವಾಗುವಂತೆ 10 ಸಾವಿರ ಕೋಟಿ ಸಾಲ ಮನ್ನಾ ಮಾಡುವ ನಿರೀಕ್ಷೆ ಇದೆ. ಅಹಿಂದ ಸಮುದಾಯವನ್ನು ಓಲೈಸಲು ಕೆಲ ಜನಪ್ರಿಯ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ. ಮುಂದಿನ ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಜನಪ್ರಿಯ ಬಜೆಟ್ ಮಂಡಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.

ಇವತ್ತಿನ ಬಜೆಟ್ ಮೇಲೆ ರಾಜ್ಯದ ಜನತೆ ಅದರಲ್ಲೂ ಅಹಿಂದ ವರ್ಗವಂತೂ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದ್ದು ನಗರವನ್ನೂ ಬ್ಯಾಲೆನ್ಸ್ ಮಾಡಲಿದ್ದಾರೆ.

ಬಜೆಟ್ ನಿರೀಕ್ಷೆಗಳು ಏನು..?

* ರೈತರ ಸಹಕಾರಿ ಕ್ಷೇತ್ರದ ಸಾಲದಲ್ಲಿ ಅರ್ಧ ಸಾಲ ಮನ್ನಾ ಸಾಧ್ಯತೆ.
* ಉಚಿತವಾಗಿ ಬಿತ್ತನೆ ಬೀಜ ಪೂರೈಕೆ ಘೋಷಣೆ ಸಾಧ್ಯತೆ.
* ಅನ್ನಭಾಗ್ಯದಲ್ಲಿ ಅಕ್ಕಿ ವಿತರಣೆ ಪ್ರಮಾಣದಲ್ಲಿ ಹೆಚ್ಚಳ ಸಾಧ್ಯತೆ.
* ನಮ್ಮ ಕ್ಯಾಂಟೀನ್, ರಿಯಾಯಿತಿ ದರದಲ್ಲಿ ತಿಂಡಿ, ಊಟ ಯೋಜನೆ ಜಾರಿ ಸಾಧ್ಯತೆ.
* ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತ ತಿಂಡಿ, ಊಟ ಭಾಗ್ಯ ಸಾಧ್ಯತೆ.
* ಹನಿ ನೀರಾವರಿ ಸಬ್ಸಿಡಿ ಹೆಚ್ಚಳ ಸಾಧ್ಯತೆ.
* ನೀರಾವರಿಗೆ ಹೆಚ್ಚಿನ ಮೊತ್ತದ ಹಣ ಮೀಸಲು ಸಾಧ್ಯತೆ.
* ನಗರ ಪ್ರದೇಶಗಳಿಗೆ ಬಂಪರ್ ಪ್ಯಾಕೇಜ್ ಘೋಷಣೆ ಸಾಧ್ಯತೆ.
* ಬೆಂಗಳೂರಿಗೆ ವಿಶೇಷ ಯೋಜನೆಗಳು, ಪ್ಯಾಕೇಜ್ ಘೋಷಣೆ ಸಾಧ್ಯತೆ.
* ಅಹಿಂದ ವರ್ಗಗಳಿಗೆ ಹೊಸ ಯೋಜನೆ ಘೋಷಣೆ ಸಾಧ್ಯತೆ.
* ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಇಲಾಖೆ, ಅಹಿಂದ ವರ್ಗಕ್ಕೆ ದುಪ್ಪಟ್ಟು ಅನುದಾನ ಸಾಧ್ಯತೆ.
* 7 ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ಸಮಿತಿ ರಚನೆ ಸಾಧ್ಯತೆ.
* ಅನ್ನಭಾಗ್ಯ, ಕೃಷಿ ಭಾಗ್ಯ ಕ್ಷೀರಭಾಗ್ಯ, ಮೈತ್ರಿ ಮನಸ್ವಿನಿ ಯೋಜನೆಗಳ ಅನುದಾನ ಹೆಚ್ಚಳ ಸಾಧ್ಯತೆ.

Share This Article
Leave a Comment

Leave a Reply

Your email address will not be published. Required fields are marked *