ಇನ್ಫೋಸಿಸ್‌ನವ್ರು ಏನ್ ಬಹಳ ಬೃಹಸ್ಪತಿಗಳಾ?: ಜಾತಿಗಣತಿಯಲ್ಲಿ ಭಾಗವಹಿಸದ್ದಕ್ಕೆ ಸಿಎಂ ಟಾಂಗ್

Public TV
2 Min Read

ಮೈಸೂರು: ಇನ್ಫೋಸಿಸ್‌ನವರು (Infosys) ಏನು ಬಹಳ ಬೃಹಸ್ಪತಿಗಳಾ ಎಂದು ಜಾತಿಗಣತಿ ಸಮೀಕ್ಷೆಗೆ ಒಪ್ಪದ ನಾರಾಯಣ ಮೂರ್ತಿ ದಂಪತಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಟಾಂಗ್ ಕೊಟ್ಟರು.

ನಗರದಲ್ಲಿ ಮಾತನಾಡಿದ ಸಿಎಂ, ಇದು ಹಿಂದುಳಿದ ವರ್ಗದ ಜಾತಿ ಸಮೀಕ್ಷೆ ಅಲ್ಲ. ಎಲ್ಲಾ ಜಾತಿಗಳ ಸಮೀಕ್ಷೆ. ಇದನ್ನ ಅರ್ಥ ಮಾಡಿಕೊಳ್ಳದಿದ್ದರೆ ನಾವು ಏನು ಮಾಡುವುದು? ಇದು ಅಜ್ಞಾನವೋ ಉದ್ದೇಶಪೂರ್ವಕವೊ ಅವರಿಗೆ ಗೊತ್ತು. ಮೇಲ್ಜಾತಿಯವರು ಗೃಹಜ್ಯೋತಿ ಪಡೆಯುತ್ತಿಲ್ವಾ? ಮೇಲ್ಜಾತಿ ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಓಡಾಡುತ್ತಿಲ್ವಾ? ಇದು ಕೂಡ ಅದೇ ರೀತಿ. ಎಲ್ಲಾ ಜಾತಿಯವರಿಗೆ ಮಾಡುತ್ತಿರುವ ಸಮೀಕ್ಷೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸರ್ಕಾರದ ವಿರುದ್ಧ ಗುತ್ತಿಗೆದಾರರಿಂದ ಕಮಿಷನ್ ಬಾಂಬ್ – ಡಿಸೆಂಬರ್‌ ಒಳಗಡೆ ಬಿಡುಗಡೆಗೆ ಆಗ್ರಹ

ಬಿಹಾರ ಚುನಾವಣೆ ಫಲಿತಾಂಶ ರಾಜ್ಯದ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. ಬಿಹಾರದಲ್ಲಿ ನಮ್ಮ ಮೈತ್ರಿ ಒಕ್ಕೂಟ ಗೆಲುವು ಪಡೆಯುವ ಸಾಧ್ಯತೆ ಇದೆ. ನನ್ನ ಪ್ರಚಾರದ ಅಗತ್ಯ ಇದ್ರೆ ನಾನು ಪ್ರಚಾರಕ್ಕೆ ಹೋಗುತ್ತೇನೆ. ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಇಲ್ಲ, ಬ್ರಾಂತಿಯೂ ಇಲ್ಲ. ಕ್ರಾಂತಿ ಕ್ರಾಂತಿ ಎಂದು ಹೇಳುವವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಸುಮ್ಮನೆ ಏನೇನೊ ಹೇಳುತ್ತಾರೆ. ಮಾಧ್ಯಮದವರು ಆ ಹೇಳಿಕೆಗಳಿಗೆ ಪ್ರಚಾರ ಕೊಡುವುದನ್ನ ನಿಲ್ಲಿಸಲಿ. ಆಗ ಅವರೇ ಸುಮ್ಮನಾಗುತ್ತಾರೆ ಎಂದು ತಿಳಿಸಿದರು.

ಐಟಿ ಕಂಪನಿಗಳು ಆಂಧ್ರ ಪಾಲಾದ ಬಗ್ಗೆ ಮಾತನಾಡಿ, ಆಯಾ ಕಂಪನಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ರಾಜ್ಯಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಕಂಪನಿ ಬೇರೆ ರಾಜ್ಯಕ್ಕೆ ಹೋದ ಕೂಡಲೇ ಇಲ್ಲಿನ ವ್ಯವಸ್ಥೆ ಸರಿ ಇಲ್ಲ ಎಂದು ಹೇಳುವುದು ತಪ್ಪು. ಹೂಡಿಕೆಗಳ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಹಾಗಾದರೆ ಅವರೆಲ್ಲ ಯಾಕೆ ನಮ್ಮಲ್ಲಿ ಉಳಿದುಕೊಂಡರು? ಆಂಧ್ರ ಐಟಿ ಸಚಿವರು ಟ್ವೀಟ್ ಮಾಡಿದ್ದು ನಮಗೆ ಗೊತ್ತಿಲ್ಲ. ಇದನ್ನ ಯಾರೋ ಸೃಷ್ಟಿ ಮಾಡುತ್ತಿರಬಹುದು ಎಂದರು. ಇದನ್ನೂ ಓದಿ: ಸರ್ಕಾರಿ ಜಾಗಗಳಲ್ಲಿ ನಮಾಜ್‌ ಮಾಡಲು ಅವಕಾಶ ಕೊಡಬೇಡಿ – ಸರ್ಕಾರಕ್ಕೆ ಯತ್ನಾಳ್‌ ಪತ್ರ

5 ವರ್ಷ ನಮ್ಮ ತಂದೆಯೇ ಸಿಎಂ ಆಗಿರುತ್ತಾರೆ ಎಂಬ ಪುತ್ರನ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅವನನ್ನೇ ಉಳಿದ ವಿಚಾರ ಕೇಳಿಕೊಳ್ಳಿ ಎಂದರು. ಗುತ್ತಿಗೆದಾರರ ಸಂಘದಿಂದ ಕಮಿಷನ್ ಆರೋಪ ಕುರಿತು ಮಾತನಾಡಿ, ಅದು ಸತ್ಯವಾಗಿದ್ರೆ ಅವರಿಗೆ ಕೋರ್ಟ್ಗೆ ಹೋಗುವುದಕ್ಕೆ ಹೇಳಿ. ಯಾರೋ ಇದನ್ನ ಅವರ ಬಳಿ ಹೇಳಿಸುತ್ತಿದ್ದಾರೆ ಎಂದರು.

ಸರ್ಕಾರಿ ಶಾಲೆ, ಕಚೇರಿ ಜಾಗಗಳಲ್ಲಿ ನಿರ್ಬಂಧ ಹಾಕುತ್ತಿರುವುದು ಕೇವಲ ಆರ್‌ಎಸ್‌ಎಸ್‌ಗೆ ಮಾತ್ರ ಅನ್ವಯ ಅಲ್ಲ. ಎಲ್ಲ ಖಾಸಗಿ ಸಂಘ-ಸಂಸ್ಥೆಗಳಿಗೂ ಅನ್ವಯ ಆಗುತ್ತದೆ. ಈ ಸುತ್ತೋಲೆ ಹೊರಡಿಸಿರೋದೆ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ. ಬಿಜೆಪಿಯವರೇ ಮಾಡಿ, ಈಗ ವಿರೋಧ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

Share This Article