ಕೊಪ್ಪಳದಲ್ಲಿ ಸಿಎಂ ಯಡವಟ್ಟು – ಬಾಯಿತಪ್ಪಿ ರಾಹುಲ್ ಗಾಂಧಿ ಹತ್ಯೆ ಅಂದ್ರು

Public TV
2 Min Read

ಕೊಪ್ಪಳ: ಕುಷ್ಟಗಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಯಡವಟ್ಟು ಮಾಡ್ಕೊಂಡಿದ್ದಾರೆ. ಭಾಷಣ ಮಾಡೋ ಭರದಲ್ಲಿ ಬಾಯಿತಪ್ಪಿ ಮಾತನಾಡಿದ ಸಿದ್ದರಾಮಯ್ಯ, ರಾಹುಲ್ ಗಾಂಧಿ ಹತ್ಯೆ ಅಂದುಬಿಟ್ರು.

ರಾಜೀವ್ ಗಾಂಧಿ ಹತ್ಯೆ ಎನ್ನಲು ಹೋಗಿ ರಾಹುಲ್ ಗಾಂಧಿ ಹತ್ಯೆ ಅಂತಾ ಹೇಳಿದ್ದಾರೆ. ಕೂಡಲೇ ಸಾವರಿಸಿಕೊಂಡ ಸಿಎಂ, ನಾನು ರಾಜೀವ್ ಗಾಂಧಿ ಅಂತಿದ್ದೆ. ಆದ್ರೆ ನೀವೇ ಮಧ್ಯೆ ಬಾಯಿ ಹಾಕಿ ರಾಹುಲ್ ಹೆಸರು ಬರುವಂತೆ ಮಾಡಿದ್ರಿ ಅಂತಾ ಹೇಳಿದ್ರು. ರಾಜೀವ್ ಗಾಂಧಿ ಹತ್ಯೆಯಾಗದಿದ್ರೆ ನಾನು ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಗೆಲ್ಲುತ್ತಿದ್ದೆ. ಅಕಸ್ಮಾತ್ ಗೆದ್ದಿದ್ರೆ ಇವತ್ತು ನಾನು ಸಿಎಂ ಆಗ್ತಿರಲಿಲ್ಲ ಅಂದ್ರು.

ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿಯವರು ಲಂಚದ ಚೆಕ್ ತೆಗೆದುಕೊಂಡು ಹೋದಂತೆ ಇಂದಿರಾಗಾಂಧಿ ಅವರು ಜೈಲಿಗೆ ಹೋಗಲಿಲ್ಲ. ಇಂದಿರಾಗಾಂಧಿ ಅವರು ತುರ್ತು ಪರಸ್ಥಿತಿ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿದ್ದರು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಟಾಂಗ್ ಕೊಟ್ರು. ಈಗಾಗಲೇ ಯಡಿಯೂರಪ್ಪ ಮೇಲೆ 42 ಪ್ರಕರಣಗಳು ಇವೆ. ಮೊದಲು ಅವುಗಳಿಂದ ಹೊರಬರಲಿ ಎಂದರು.

ಅಧಿವೇಶನದ ಸಂದರ್ಭದಲ್ಲಿ ಅದನ್ನು ಬಿಡ್ತೀನಿ, ಇದನ್ನು ಬಿಡ್ತೀನಿ ಎಂದು ಯಡಿಯೂರಪ್ಪ ಹೇಳಿದ್ದರು. ಅವರು ಏನೂ ಬಿಡಲಿಲ್ಲ. ಹಾವು ಬಿಡುವ ಮಾತನಾಡಿದ ಯಡಿಯೂರಪ್ಪನ ಬುಟ್ಟಿಯಲ್ಲಿ ಹಾವೇ ಇಲ್ಲ ಎಂದು ವ್ಯಂಗ್ಯವಾಡಿದರು.

ಹೊನ್ನಾವರದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪರೇಶ್ ಮೇಸ್ತಾ ಕುಟುಂಬಸ್ಥರು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯ ಮಾಡಿದ್ದರು. ಅದರಂತೆ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಿದೆ. ಬಿಜೆಪಿಯವರು ಈ ಹಿಂದೆ ಸಿಬಿಐಗೆ ಪ್ರಕರಣವನ್ನು ವಹಿಸಿಲ್ಲ. ಆದರೆ ಕೇಂದ್ರದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎನ್ನುತ್ತಾರೆ ಎಂದು ದೂರಿದರು. ಕೋಮು ಗಲಭೆ ಸೃಷ್ಟಿಸುವುದೇ ಬಿಜೆಪಿಯವರ ಕೆಲಸ. ರಾಜಕೀಯ ಲಾಭಕ್ಕಾಗಿ ಅವರು ಈ ರೀತಿ ಮಾಡುತ್ತಾರೆ. ಓಟಿನ ಧೃವೀಕರಣಕ್ಕಾಗಿ ಬಿಜೆಪಿ ಈ ರೀತಿ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಬಲವಾಗಿ ಆರೋಪಿಸಿದರು.

ನಾವು ಯಾವುದೇ ಧರ್ಮವನ್ನು ಒಡೆಯುವ ಕೆಲಸ ಮಾಡಿಲ್ಲ. ವೀರಶೈವರು, ಲಿಂಗಾಯತರು ಬೇರೆ ಬೇರೆ ಪಿಟಿಷನ್ ಕೊಟ್ಟಿದ್ದಾರೆ. ಅದನ್ನು ಮೈನಾರಿಟಿ ಕಮಿಷನ್‍ಗೆ ಕಳಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದರು.

https://www.youtube.com/watch?v=eY0ztB1TXbg&feature=youtu.be

 

 

Share This Article
Leave a Comment

Leave a Reply

Your email address will not be published. Required fields are marked *