ಉಡುಪಿ: ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಉಡುಪಿಯ (Udupi) ಶ್ರೀ ಕೃಷ್ಣ ಮಠ (Sri Krishna Math) ಆಹ್ವಾನ ನೀಡಿದೆ. ಸುಮಾರು ಎರಡು ದಶಕಗಳಿಂದ ಮಠದ ಜೊತೆ ಸಿಎಂ ಅಂತರ ಕಾಯ್ದುಕೊಂಡಿದ್ದರು. ಇದೀಗ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಪುತ್ತಿಗೆ ಮಠದ ವತಿಯಿಂದ ಆಹ್ವಾನ ನೀಡಲಾಗಿದೆ.
48 ದಿನಗಳ ಮಂಡಲ ಉತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಮುಖ್ಯಪ್ರಾಣರ ಪ್ರಸಾದ ನೀಡಿ ಮಠದ ಸಿಬ್ಬಂದಿ ಆಹ್ವಾನಿಸಿದ್ದಾರೆ. ಬೆಂಗಳೂರು ಶಾಖಾ ಮಠದ ಎ.ಬಿ ಕುಂಜಾರ್, ಶ್ರೀಗಳ ಕಾರ್ಯದರ್ಶಿ ರತೀಶ್ ತಂತ್ರಿ ಆಹ್ವಾನ ನೀಡಿದ್ದಾರೆ. ಆಗಸ್ಟ್ನಲ್ಲಿ ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಡೆಯಲಿದೆ. ಆಗಸ್ಟ್ 1 ರಿಂದ 48 ದಿನಗಳ ಕಾರ್ಯಕ್ರಮ ಸೆಪ್ಟೆಂಬರ್ 15ರವರೆಗೆ ನಡೆಯಲಿದೆ. ಇದನ್ನೂ ಓದಿ: ಧರ್ಮಸಂಕಟದಲ್ಲಿ ಸಿಎಂ ಸಿದ್ದರಾಮಯ್ಯ: ಕೃಷ್ಣ ಮಠಕ್ಕೆ ಹೋಗಲು ಹಿಂದೇಟು, 3 ಸಚಿವರಿಗೆ ರಾಷ್ಟ್ರಪತಿ ಕಾರ್ಯಕ್ರಮದ ಜವಾಬ್ದಾರಿ
ಕನಕಗೋಪುರ ವಿವಾದ ಬಳಿಕ ಸಿಎಂ ಮಠದಿಂದ ಅಂತರ ಕಾಯ್ದುಕೊಂಡಿದ್ದರು. ಇದಾದ ಬಳಿಕ ಉಡುಪಿಗೆ ಬಂದರೂ ಸಹ ಸಿದ್ದಾರಾಮಯ್ಯ ಮಠಕ್ಕೆ ಭೇಟಿ ನೀಡಿರಲಿಲ್ಲ.
ಶ್ರೀ ಕೃಷ್ಣ ದೇವಾಲಯದ ಹೊರ ಆವರಣದಲ್ಲಿರುವ ಕನಕನ ಕಿಂಡಿ ಎದುರಿನ ಗೋಪುರ ಶಿಥಿಲಗೊಂಡಿದ್ದರಿಂದ ಕೆಡವಲಾಗಿತ್ತು. ಇದು ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಮಾತುಕತೆಯ ಮೂಲಕ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲಾಗಿತ್ತು.
ಇಷ್ಟಕ್ಕೂ ಸಿಎಂ ಸಿದ್ದರಾಮಯ್ಯ ಕೃಷ್ಣಮಠದಿಂದ ಅಂತರ ಕಾಯ್ದುಕೊಂಡಿದ್ದು ಯಾಕೆ?
ಕಾರಣ 1: ಉಡುಪಿಯ ಕೃಷ್ಣಮಠದಲ್ಲಿ ಎರಡು ದಶಕದ ಹಿಂದೆ ನಡೆದ ಕನಕಗೋಪುರ ವಿವಾದ. ಕನಕನ ಕಿಂಡಿಯ ಮೇಲಿನ ಗೋಪುರ ಕೆಡವಿದಾಗ ಸಿದ್ದರಾಮಯ್ಯ ವಿರೋಧಿಸಿದ್ದರು. ಕುರುಬ ಸಮುದಾಯದ ಪ್ರತಿನಿಧಿಯಾಗಿ ಹೋರಾಟ ಮಾಡಿದ್ದರು. ಸಿಎಂ ಮತ್ತು ಕೃಷ್ಣಮಠದ ಸಂಬಂಧ ಅಲ್ಲಿಂದ ಹಳಸುತ್ತಲೇ ಬಂದಿತ್ತು.
ಕಾರಣ 2: ಕೃಷ್ಣಮಠದ ಸರ್ಕಾರಿಕರಣವಾಗಬೇಕು ಎಂದು ಪ್ರತಿಪಾದಿಸಿದವರಲ್ಲಿ ಸಿಎಂ ಪ್ರಮುಖರು. ಹೋರಾಡುತ್ತಾ ಬಂದ ಸಿದ್ದರಾಮಯ್ಯ ಸಿಎಂ ಆದ ಬಳಿಕ ಯಾಕೋ ತಣ್ಣಗಾಗಿದ್ದರು.
ಕಾರಣ 3: ಇನ್ನೊಂದು ಕಾರಣ ಬಹಳ ಕುತೂಹಲಕಾರಿ. ಬಾಲ್ಯದಲ್ಲಿ ಸಿದ್ದರಾಮಯ್ಯನವರು ತಂದೆಯ ಜೊತೆಗೆ ಮಠಕ್ಕೆ ಬಂದಾಗ ಆಗಿನ ಸ್ವಾಮಿಗಳು ಪ್ರಸಾದವನ್ನು ಎತ್ತರದಿಂದ ಕೈಗೆ ಹಾಕಿದ್ದರಂತೆ. ಹೀಗೆ ಪ್ರಸಾದ ಕೊಟ್ಟು ಅವಮಾನ ಮಾಡಿದ್ದಂತೆ. ಈ ಕಾರಣಕ್ಕೆ ಸಿದ್ದರಾಮಯ್ಯ ಕೃಷ್ಣಮಠಕ್ಕೆ ಕಾಲಿಟ್ಟಿಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ: Mysuru Dasara | ಸೆ.22ರಿಂದ 11 ದಿನಗಳ ಕಾಲ ವಿಜೃಂಭಣೆಯ ದಸರಾ