ನಾನು ದೇಶದ 6ನೇ ಶ್ರೀಮಂತ ಸಿಎಂ ಆಗಿದ್ದು ಹೇಗೆ: ಸಿದ್ದರಾಮಯ್ಯ ಹೇಳ್ತಾರೆ ಓದಿ

Public TV
2 Min Read

ಬೆಂಗಳೂರು: ದೇಶದ ಆರನೇ ಶ್ರೀಮಂತ ಮುಖ್ಯಮಂತ್ರಿ ಎನ್ನುವ ಸರ್ವೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಇದು ಅವಿಭಕ್ತ ಆಸ್ತಿಯ ಲೆಕ್ಕ ಅಷ್ಟೇ ಎಂದು ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ವೆಯಲ್ಲಿ ಹೇಳಿರುವುದು ಅವಿಭಕ್ತ ಕುಟುಂಬದ ಆಸ್ತಿಯ ಲೆಕ್ಕ. ಕಳೆದ ಚುನಾವಣೆಯಲ್ಲಿ ಅವಿಭಕ್ತ ಕುಟುಂಬದ ಒಟ್ಟು ಆಸ್ತಿಯನ್ನು ಘೋಷಿಸಿದ್ದೆ. ಅಣ್ಣ, ತಮ್ಮಂದಿರ ಎಲ್ಲಾ ಆಸ್ತಿಯನ್ನ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿತ್ತು. ನನ್ನ ಅಣ್ಣ ತೀರಿ ಹೋದ ಮೇಲೆ, ನಾನೇ ಮನೆಯ ಯಜನಮಾನನಾಗಿದ್ದೆ. ಈಗ ಕುಟುಂಬದ ಆಸ್ತಿಯನ್ನ ವಿಭಜಿಸಲಾಗಿದೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆಸ್ತಿ ಎಷ್ಟಿದೆ ಎಂಬುದನ್ನ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾಮ್ರ್ಸ್ ಸಂಸ್ಥೆ ಸೋಮವಾರದಂದು ಭಾರತದ 35 ಮುಖ್ಯಮಂತ್ರಿಗಳಲ್ಲಿ 25 ಜನ ಕೋಟ್ಯಾಧಿಪತಿಗಳಾಗಿದ್ದಾರೆ ಎಂಬ ವರದಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಸಿಎಂ ಸಿದ್ದರಾಮಯ್ಯ 13.61 ಕೋಟಿ ರೂ. ಆಸ್ತಿ ಹೊಂದಿದ್ದು, ದೇಶದ ಮುಖ್ಯಮಂತ್ರಿಗಳ ಶ್ರೀಮಂತಿಕೆಯಲ್ಲಿ 6ನೇ ಸ್ಥಾನದಲ್ಲಿದ್ದಾರೆ ಎಂಬ ಮಾಹಿತಿಯನ್ನು ಪ್ರಕಟಿಸಿತ್ತು. ಇದನ್ನೂ ಓದಿ : ಸಿದ್ದರಾಮಯ್ಯ ದೇಶದ 6ನೇ ಶ್ರೀಮಂತ ಸಿಎಂ: ದೇಶದ ಸಿಎಂಗಳ ಆಸ್ತಿ ಎಷ್ಟಿದೆ? ಇಲ್ಲಿದೆ ಮಾಹಿತಿ

ಇದೇ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಂಸ ಸೇವಿಸಿ ನರಸಿಂಹಸ್ವಾಮಿ ದರ್ಶನ ಪಡೆದಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿ ಮಾಂಸ ತಿಂದಿದ್ದಾರ ಅಥವಾ ಬಿಟ್ಟಿದ್ದಾರ ಎಂಬುವುದು ನನಗೆ ಗೊತ್ತಿಲ್ಲ. ಆದರೆ ಈ ವಿಚಾರ ರಾಹುಲ್ ಅವರಿಗೆ ಬಿಟ್ಟದ್ದು. ಆದರೆ ರಾಹುಲ್ ಅವರೇ ಮಾಂಸ ಸೇವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ಮುಗೀತು, ಇದು ವಿಷಯವೇ ಅಲ್ಲ ಎಂದು ಪ್ರತಿಕ್ರಿಯಿಸಿದರು.

ಇದೇ ವೇಳೆ ಪ್ರಧಾನಿ ಮೋದಿ ಅವರು ನೂರು ಬಾರಿ ಕರ್ನಾಟಕ್ಕೆ ಭೇಟಿ ನೀಡಲಿ ನಮಗೇನೂ ತೊಂದರೆ ಇಲ್ಲ. ರಾಹುಲ್ ಅವರ ಪ್ರವಾಸದಿಂದ ನಮ್ಮ ಪಕ್ಷ ಬಲಗೊಳ್ಳುತ್ತದೆ. ಇದರಿಂದ ಚುನಾವಣೆಯಲ್ಲೂ ಲಾಭ ಆಗುತ್ತದೆ. ಅವರು ಪಕ್ಷ ಅಧ್ಯಕ್ಷರಾದ ಮೇಲೆ ಗುಜರಾತ್ ಚುನಾವಣೆಯಲ್ಲಿ ನಮಗೆ ಬಲ ಬಂದಿದೆ ಎಂದರು.

ಎರಡನೇ ಸುತ್ತಿನ ಪ್ರವಾಸ: ರಾಹುಲ್ ಗಾಂಧಿ ಎರಡನೇ ಸುತ್ತಿನ ಪ್ರವಾಸ ರಾಜ್ಯದ ಎಲ್ಲ ವಿಭಾಗಗಳಲ್ಲೂ ಮುಂದುವರಿಯುತ್ತದೆ. ಮುಂಬೈ ಕರ್ನಾಟಕದಲ್ಲಿ ಫೆಬ್ರವರಿ 24, 25, 26 ರಂದು ರಾಹುಲ್ ಪ್ರವಾಸ ಕೈಗೊಳ್ಳುತ್ತಾರೆ ಎಂದರು.

ಬಿಜೆಪಿಗೆ ಸವಾಲು: ರಾಜ್ಯ ಕಾಂಗ್ರೆಸ್ ಸರ್ಕಾರ 10% ಕಮಿಷನ್ ಸರ್ಕಾರದ ಎಂಬ ಕುರಿತು ಪ್ರಧಾನಿ ಮೋದಿ ದಾಖಲೆ ಬಿಡುಗಡೆ ಮಾಡುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು. ರಾಜ್ಯ ಸರ್ಕಾರ ಲಂಚ ಸ್ವೀಕರಿಸಿದೆ ಎಂದಾದರೆ ಈ ಕುರಿತು ಯಾರಾದರು ದಾಖಲೆ ಹೊಂದಿದ್ದಾರೆ ಬಿಡುಗಡೆ ಮಾಡಬಹುದು. ಜಗತ್ತಿನಲ್ಲಿ ಲಂಚ ತಗೊಂಡಿರುವ ಬಗ್ಗೆ ದಾಖಲೆ ಇರುತ್ತಾ? ನಮ್ಮ ಸರ್ಕಾರದಲ್ಲಿ ಯಾವುದೇ ಕಮಿಷನ್ ವ್ಯವಹಾರ ಇಲ್ಲ, ಅವರದ್ದು 100% ಕಮಿಷನ್ ಸರ್ಕಾರ ಎಂದು ಟಾಂಗ್ ನೀಡಿದರು.

ಮೊದಲೇ ಹೇಳಿದ್ವಿ: ಮೊದಲೇ ನಾವು ಗೋವಾ ಸರ್ಕಾರಕ್ಕೆ ಯಾವುದೇ ಕಾಮಗಾರಿ ನಡೆಸಿಲ್ಲ ನ್ಯಾಯಾಂಗ ನಿಂದನೆ ಆಗಿಲ್ಲ ಎಂದು ಹೇಳಿದ್ದೆವು. ಆದರೆ ಅದು ಈಗ ಅವರಿಗೆ ಗೊತ್ತಾಗಿ ಅವರಾಗಿಯೇ ವಾಪಸ್ ಪಡೆದಿದ್ದಾರೆ ಎಂದು ಮಹದಾಯಿ ವಿಚಾರವಾಗಿ ಗೋವಾ ಸರ್ಕಾರ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಾಪಸ್ ಕುರಿತು ಪ್ರತಿಕ್ರಿಯಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *