ಬಸವಣ್ಣನನ್ನು ಹಾಡಿ ಹೊಗಳಿದ ಸಿಎಂ ಸಿದ್ದರಾಮಯ್ಯ

Public TV
1 Min Read

ಬಳ್ಳಾರಿ: ಸಮ ಸಮಾಜದ ಬೀಜವನ್ನು ಬಸವಣ್ಣನವರು ಬಿತ್ತಿ ಹೋಗಿದ್ದಾರೆ. ಮುಂದುವರೆದ ರಾಷ್ಟ್ರಗಳಲ್ಲೂ ಸಹ ಸಮ ಸಮಾಜ ನಿರ್ಮಾಣವಾಗಿಲ್ಲ. 12ನೇ ಶತಮಾನದಲ್ಲಿ ಬಸವಣ್ಣ ನಡೆದ ದಾರಿ, ಅವರ ವಿಚಾರಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಹೀಗಾಗಿ ಬಸವ ವ್ರತ ಬಸವ ಪಥ ಆಚರಣೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಶತಮಾನೋತ್ಸವ ಸಮಾರಂಭವನ್ನು ನಗರದ ಕಿತ್ತೂರ ರಾಣಿ ಚೆನ್ನಮ್ಮ ಶಾಲಾ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, 1916ರಲ್ಲಿ ಆರಂಭವಾದ ವೀರಶೈವ ವಿದ್ಯಾವರ್ಧಕ ಸಂಘ ಲಕ್ಷಾಂತರ ಜನರಿಗೆ ಶಿಕ್ಷಣ ಹಾಗೂ ಅನ್ನದಾಸೋಹ ನೀಡಿದ ಹೆಮ್ಮೆ ಹೊಂದಿದೆ. ವಿವಿ ಸಂಘದ ಆಶ್ರಯದಲ್ಲಿ 40 ಕ್ಕೂ ಹೆಚ್ಚು ಶಾಲಾ ಕಾಲೇಜುಗಳು ಮೂಲಕ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ ಎಂದರು.

ಶಿಕ್ಷಣ ಎಲ್ಲರಿಗೂ ಅತ್ಯಗತ್ಯವಾಗಿದೆ. ಸಮಾಜದಲ್ಲಿ ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ಶಿಕ್ಷಣ ಇಲ್ಲದಿದ್ದರೆ ಸಾಮಾಜಿಕ ಆರ್ಥಿಕ ಅಸಮಾನತೆ ಎದುರಾಗುತ್ತೆ. ವೀರಶೈವ ವಿದ್ಯಾವರ್ಧಕ ಸಂಘ 22 ಸಾವಿರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಕ್ರಿಶ್ಚಿಯನ್ ಸಂಸ್ಥೆಗಳು ಮಂಗಳೂರು ಬೆಂಗಳೂರಿಗೆ ಆಗಮಿಸಿದ ಪರಿಣಾಮ ಮಂಗಳೂರು ಬೆಂಗಳೂರು ಜನರು ಶಿಕ್ಷಣದಲ್ಲಿ ಮುಂದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಪದವಿ ತರಗತಿಗಳಲ್ಲಿ ಓದುತ್ತಿರುವ 1.96 ಲಕ್ಷ ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್ ಭಾಗ್ಯ ದೊರೆಯಲಿದೆ ಎಂದರು.

ಸಮಾರಂಭದಲ್ಲಿ ಸಚಿವರಾದ ಸಂತೋಷ್ ಲಾಡ್, ಬಸವರಾಜ್ ರಾಯರೆಡ್ಡಿ, ಡಾ. ಶರಣ ಪ್ರಕಾಶ್ ಪಾಟೀಲ್, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಮುಖಂಡರಾದ ಎನ್ ತಿಪ್ಪಣ್ಣ, ಎಂಎಲ್‍ಸಿ ಕೆಸಿ ಕೊಂಡಯ್ಯ, ಅಲ್ಲಮ ವೀರಭದ್ರಪ್ಪ, ಉಜ್ಜಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಶ್ರೀ, ಕೊಟ್ಟೂರು ಸಂಸ್ಥಾನ ಮಠದ ಶ್ರೀ ಸಂಗನಬಸವ ಮಹಾಸ್ವಾಮಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *