ಮತ್ತೆ ಮೇಷ್ಟ್ರಾದ ಸಿಎಂ- ಮೇಯರ್, ಶಾಸಕರಿಗೆ ಪ್ರಜಾಪ್ರಭುತ್ವದ ಪಾಠ

Public TV
1 Min Read

ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಪಾಠ ಮಾಡೋಕೆ ಶುರುಮಾಡಿದ್ದಾರೆ. ವಿಧಾನಸಭೆ ಕಲಾಪ ಇರಲಿ, ಸಾರ್ವಜನಿಕ ಸಭೆ ಇರಲಿ ಎಲ್ಲಾ ಕಡೆಯೂ ಇದ್ದಕ್ಕಿಂದಂತೆ ಮೇಷ್ಟ್ರಾಗಿ ಬಿಡುತ್ತಾರೆ. ಇವತ್ತು ಕೂಡ ಮೈಸೂರಿನಲ್ಲಿ ಮೇಷ್ಟ್ರಾಗಿದ್ದರು.

ಮೈಸೂರಿನ ತಮ್ಮ ನಿವಾಸದಲ್ಲಿ ಮೈಸೂರು ಪಾಲಿಕೆ ಮೇಯರ್ ಹಾಗೂ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಅವರು ರಾಜಾತ್ವ-ಪ್ರಜಾಪ್ರಭುತ್ವದ ಕುರಿತು ಪಾಠ ಮಾಡಿದರು. ಮೈಸೂರಿನ ದೇವರಾಜ ಮಾರ್ಕೆಟ್ ದುರಸ್ಥಿ ಕುರಿತು ಮನವಿ ಮಾಡಿದ್ದಕ್ಕೆ ಪಾಠ ಶುರು ಮಾಡಿದ್ರು.

ರಾಜರು ಎಂದರೆ ಅವರು ದೇವರಲ್ಲ. ಅವರು ಸಹ ಅಂದಿನ ದಿನದಲ್ಲಿ ಸರ್ಕಾರ ನಡೆಸುತ್ತಿದ್ದರು. ಆ ಸರ್ಕಾರಗಳು ವಂಶಪಾರಂಪರ್ಯವಾಗಿದ್ದವು. ಈಗ ಪ್ರಜಾಪ್ರಭುತ್ವದ ಸರ್ಕಾರ ಇದ್ದು ಇಲ್ಲಿ ಜನರಿಂದ ಆಯ್ಕೆ ಆಗುತ್ತಾರೆ ಅಷ್ಟೆ. ಮಹಾರಾಜರು ಜನರಿಗೆ ಹಣವನ್ನ ತಮ್ಮ ಮನೆಯಿಂದ ತಂದುಕೊಡುತ್ತಿರಲಿಲ್ಲ. ಅಂದು ಸಹ ಜನರ ದುಡ್ಡನ್ನೆ ಜನರಿಗೆ ನೀಡುತ್ತಿದ್ದರು. ಮಹಾರಾಜರು ಅದನ್ನು ಕೊಡದೆ ಅವರೇ ಇಟ್ಟುಕೊಳ್ಳೋಕ್ಕೆ ಆಗುತ್ತಿತ್ತಾ? ಎಂದು ಮೇಯರ್ ರವಿಕುಮಾರ್ ಅವರಿಗೆ ಸಿಎಂ ಪ್ರಶ್ನೆ ಹಾಕಿದರು.

ಈ ಮಧ್ಯೆ ಪಾಲಿಕೆ ಸದಸ್ಯರೊಬ್ಬರು ಈಗ ನೀವೇ ನಮ್ಮ ಮಹಾರಾಜರು ಎಂದಿದ್ದಕ್ಕೆ ಇಲ್ಲ, ನಾನು ಮಹಾರಾಜನಲ್ಲ. ಅಂದು ಮಹಾರಾಜರನ್ನು ಗೌರವದಿಂದ ನೋಡುತ್ತಿದ್ದರು. ಈಗ ನಾವು ರಸ್ತೆಯಲ್ಲಿ ಹೋಗುತ್ತಿದ್ದರೂ ಜನರು ಬೈಯುತ್ತಾರೆ. ಆಗ ದಸರಾ ಮೆರವಣಿಗೆಯಲ್ಲಿ ಮಹಾರಾಜರು ಬಂದಾಗ ಎಲ್ಲರೂ ಎದ್ದು ಕೈ ಮಗಿಯುತ್ತಿದ್ದರು. ಈಗ ಅದೆಲ್ಲ ಆಗುತ್ತಾ? ನಾವು ಜನರ ಪ್ರತಿನಿಧಿಗಳಷ್ಟೇ ಎಂದು ತಮ್ಮ ಮನೆಗೆ ಬಂದು ಜನಪ್ರತಿನಿಧಿಗಳಿಗೆ ರಾಜತ್ವ, ಪ್ರಜಾಪ್ರಭುತ್ವದ ಪಾಠ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *