ಬೆಂಗಳೂರು: ರಂಜಾನ್ (Ramzan) ಹಬ್ಬದ ಹಿನ್ನೆಲೆ ನಗರದ ಬೆನ್ಸನ್ ಟೌನ್ನ ಆವರಣದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಭಾಗಿಯಾದರು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಬಾಂಧವರ ಜೊತೆ ಸಿಎಂ ಪ್ರಾರ್ಥನೆ ಸಲ್ಲಿಸಿದರು.
ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ, ನಾವೆಲ್ಲಾ ಶಾಂತಿಯುತವಾಗಿ, ಮಾನವೀಯತೆಯಿಂದ ಬಾಳಬೇಕು. ಭಾರತ ದೇಶ ಅನೇಕ ಧರ್ಮಗಳಿಂದ ಕೂಡಿದೆ. ಯಾವುದೇ ಧರ್ಮವು ಪ್ರೀತಿಯನ್ನು ಬೋಧಿಸಿದೆ, ದ್ವೇಷವನ್ನಲ್ಲ. ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲಾ ಮುಸ್ಲಿಂ ಬಾಂಧವರಿಗೂ ಈದ್ ಮುಬಾರಕ್ ಎಂದರು. ಇದನ್ನೂ ಓದಿ: ಜಲಮಂಡಳಿಯಿಂದ ಯುಗಾದಿ ಗಿಫ್ಟ್ – ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ ಯೋಜನೆ ಜಾರಿ: ಡಿಕೆಶಿ
ಇಂದು ರಂಜಾನ್ ಹಬ್ಬ. ನಾವೆಲ್ಲ ಸೇರಿ ಒಟ್ಟಿಗೆ ಪ್ರಾರ್ಥನೆ ಮಾಡಿದ್ದೇವೆ. ಮನುಕುಲಕ್ಕೆ ಹಾಗೂ ದೇವರಿಗೆ ಪ್ರಾರ್ಥನೆ ಮಾಡಿದ್ದೇವೆ. ನಾವೆಲ್ಲ ಮಾನವರಾಗಿ ಬಾಳೋದು ಅವಶ್ಯ. ನಾವೆಲ್ಲ ಮಾನವೀಯತೆಯಿಂದ, ಪ್ರೀತಿ ವಿಶ್ವಾಸದಿಂದ ಇರಬೇಕು. ಅನೇಕ ಸಂಸ್ಕೃತಿ, ಧರ್ಮ ಇದ್ರೂ ಏಕತೆಯಿಂದ ಇರಬೇಕು ಎಂದು ತಿಳಿಸಿದರು.
ನಿಮಗೆಲ್ಲಾ ರಂಜಾನ್ ಹಬ್ಬದ ಶುಭಾಶಯಗಳು. ಇಂದು ಸಿಎಂ ಸಿದ್ದರಾಮಯ್ಯ ಅವರು ಬಂದಿದ್ದಾರೆ. ಅವರು ನಮ್ಮ ಜೊತೆ ಇದ್ದಾರೆ, ಅವರಿಗೆ ಮನವಿ ಮಾಡುತ್ತೇವೆ. ನಿಮಗೆ ಅವರು ಶುಭಾಶಯ ಹೇಳಲಿ ಎಂದ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿದರು.
ದಾವಣಗೆರೆ ಟಿಕೆಟ್ ವಿಚಾರ ಕಾಂಗ್ರೆಸ್ ಪಕ್ಷ ಏನು ತೀರ್ಮಾನ ಮಾಡುತ್ತದೆ ನನಗೆ ಗೊತ್ತಿಲ್ಲ. ಅದರಲ್ಲಿ ಇರುವ ಮುಸಲ್ಮಾನ ನಾಯಕರು ಎಷ್ಟು ಶಕ್ತಿ ಇದೆ ಅಂತ ಅವರು ತೋರಿಸ್ತಾರೆ ನೋಡೋಣ. ಒಂದಾಗಿ ಕೇಳಿದ್ದಾರೆ, ಅದರ ಮೇಲೆ ಏನು ನಿರ್ಣಯ ಆಗುತ್ತೋ ನೋಡೋಣ. ನಾವು ಸೋಮವಾರ ಸೇರುತ್ತೇವೆ, ಕೊನೆ ದಿನ ಇದೆ. ಬಹುತೇಕ ಒಳ್ಳೆ ತೀರ್ಮಾನ ಆಗಬಹುದು ಎಂದು ಸಿಎಂ ಇಬ್ರಾಹಿಂ ಭರವಸೆ ನುಡಿಗಳನ್ನಾಡಿದರು. ಇದನ್ನೂ ಓದಿ: ಅಲ್ ಫಲಾಹ್ ವಿಶ್ವವಿದ್ಯಾಲಯವನ್ನು ತನ್ನ ಸುಪರ್ದಿಗೆ ಪಡೆದ ಹರಿಯಾಣ ಸರ್ಕಾರ – ಆಡಳಿತಾಧಿಕಾರಿಗಳ ನೇಮಕ
ಇತ್ತ, ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ನಡೆದ ರಂಜಾನ್ ಪ್ರಾರ್ಥನೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಪಾಲ್ಗೊಂಡರು. ಜಮೀರ್ ಪುತ್ರ ಹಾಗೂ ನಟ ಜೈದ್ ಖಾನ್ ಕೂಡ ಉಪಸ್ಥಿತರಿದ್ದರು.




