ಐಟಿ ಸ್ಪಷ್ಟನೆ ಕೊಟ್ಟ ವಿಚಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಿಎಂ ಗರಂ

Public TV
2 Min Read

ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿಗೆ ಸೇರುವಂತೆ ನಾವು ಒತ್ತಡ ಹಾಕಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ಕೇಳಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜನೆಗೊಂಡಿರುವ ಆರನೇ ಚೀನಾ- ಇಂಡಿಯಾ ಫೋರಂ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳು ಕರ್ನಾಟಕ ಗೋವಾ ಪ್ರಾಂತ್ಯದ ಐಟಿ ಇಲಾಖೆ ಮಹಾನಿರ್ದೇಶಕಕರು ಪ್ರಕಟಿಸಿದ ಮಾಧ್ಯಮ ಹೇಳಿಕೆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿತು.

ಈ ವೇಳೆ ಸಿಎಂ ಯಾರು ಸ್ಪಷ್ಟನೆ ಕೊಟ್ಟಿರೋದು? ನಾನು ಎಲ್ಲದಕ್ಕೂ ಪ್ರತಿಕ್ರಿಯೆ ನೀಡಲು ಆಗುತ್ತಾ? ಏನ್ರೀ ಕೇಳ್ತಿರಾ ಎಂದು ಪ್ರಶ್ನಿಸಿ ಮಾಧ್ಯಮಗಳ ಮುಂದೆಯೇ ಗರಂ ಆದರು.

ಐಟಿ ದಾಳಿ ಬಿಜೆಪಿ ಪ್ರೇರಿತ. ಇಂಧನ ಸಚಿವ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿಗೆ ಸೆಳೆಯಲು ದಾಳಿ ನಡೆದಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಆದಾಯ ತೆರಿಗೆ ಇಲಾಖೆ ಗುರುವಾರ ಸಂಜೆ ಮಾಧ್ಯಮ ಪ್ರಕಟಣೆ ಪ್ರಕಟಿಸಿ ಆರೋಪವನ್ನು ಅಲ್ಲಗೆಳೆದಿತ್ತು.

ಕರ್ನಾಟಕ ಗೋವಾ ಪ್ರಾಂತ್ಯದ ಐಟಿ ಇಲಾಖೆ ಮಹಾನಿರ್ದೇಶಕರು ಮಾಧ್ಯಮ ಪ್ರಕಟಣೆ ಹೊರಡಿಸಿ ಸಿಎಂ ಆರೋಪವನ್ನು ಅಲ್ಲಗಳೆದಿದ್ದರು. ಐಟಿ ಅಧಿಕಾರಿಗಳಿಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಐಟಿ ಇಲಾಖೆ ವೃತ್ತಪರತೆ ಹೊಂದಿದ್ದು, ಮುಖ್ಯಮಂತ್ರಿ ಆರೋಪ ಸರಿಯಲ್ಲ ಎಂದು ಸ್ಪಷ್ಟ ಪಡಿಸಿದ್ದರು.

ಮಾಧ್ಯಮ ಪ್ರಕಟಣೆಯಲ್ಲಿ ಏನಿತ್ತು?
ನಮ್ಮ ಐಟಿ ದಾಳಿಯನ್ನ ಕೆಲವು ರಾಜಕೀಯ ಮುಖಂಡರು ಕೆಲ ಆರೋಪಗಳನ್ನ ಮಾಡುತ್ತಿದ್ದಾರೆ. ಐಟಿ ದಾಳಿ, ಐಟಿ ಇಲಾಖೆ ರಾಜಕೀಯ ಪ್ರೇರಿತ ಅಂತಾ ಆರೋಪಗಳನ್ನ ಮಾಡಿದ್ದಾರೆ. ಆದರಲ್ಲೂ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿ, ಐಟಿ ಅಧಿಕಾರಿಗಳು ದಾಳಿ ವೇಳೆ ಸಚಿವರನ್ನ ಬಿಜೆಪಿಗೆ ಸೇರುವಂತೆ ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ ಅಂತಾ ಹೇಳಿಕೆ ನೀಡಿದ್ದಾರೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನ ನಾವು ಪ್ರಬಲವಾಗಿ ತಳ್ಳಿಹಾಕುತ್ತಿದ್ದೇವೆ. ಐಟಿ ಇಲಾಖೆ ವೃತ್ತಿಪರ, ರಾಜಕೀಯೇತರ ಇಲಾಖೆ. ದಾಳಿಯ ಸಂದರ್ಭದಲ್ಲಿ ನೂರಾರು ಕೋಟಿ ಅಘೋಷಿತ ಆಸ್ತಿ, ಚಿನ್ನಾಭರಣಗಳು ಪತ್ತೆಯಾಗಿವೆ. ಇದನ್ನ ದಾಳಿಯ ಸಂದರ್ಭದಲ್ಲಿ ಅವರು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿಯಿಂದ ನಿಮಗೆ ಆಹ್ವಾನ ಬಂದಿತ್ತಾ: ಡಿಕೆಶಿ ತಿಳಿಸಿದ್ದು ಹೀಗೆ

ಇದನ್ನೂ ಓದಿ: Exclusive: ಡಿಕೆ ಶಿವಕುಮಾರ್ ಮಗಳು ಐಶ್ವರ್ಯಗೆ ಐಟಿ ಕೇಳಿದ ಪ್ರಶ್ನೆಗಳು ಏನು?

ಇದನ್ನೂ ಓದಿ: Exclusive: ಡಿಕೆ ಶಿವಕುಮಾರ್ ಪತ್ನಿ ಉಷಾಗೆ ಐಟಿ ಕೇಳಿದ ಪ್ರಶ್ನೆಗಳು ಏನು?

 

Share This Article
Leave a Comment

Leave a Reply

Your email address will not be published. Required fields are marked *