ಸಿಎಂ ಖುರ್ಚಿಯ ಡೆಡ್ ಲೈನ್ ಸೋಮವಾರನಾ? ಮಂಗಳವಾರನಾ?

Public TV
1 Min Read

ಬೆಂಗಳೂರು: ಸಿಎಂಗೆ ರಾಜ್ಯಪಾಲರು ವಿಧಿಸಿದ್ದ ಎರಡು ಡೆಡ್ ಲೈನ್‍ಗಳನ್ನು ದಾಟಿದ್ದು, ಸೋಮವಾರ ಸರ್ಕಾರ ಪತನವಾಗುತ್ತಾ? ಸೇಫ್ ಆಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

ರಾಜ್ಯಪಾಲರು ನೀಡಿದ ಎರಡು ಡೆಡ್‍ಲೈನ್ ಗಳಿಗೆ ರಾಜ್ಯ ಸರ್ಕಾರ ಡೋಂಟ್‍ಕೇರ್ ಎದ್ದಿದ್ದು ಈಗ ಸ್ಪೀಕರ್ ಅವರೇ ಸೋಮವಾರ ಎಲ್ಲದ್ದಕ್ಕೂ ಇತಿಶ್ರೀ ಹಾಡಲಾಗುವುದು ಎಂದು ಹೇಳಿದ್ದಾರೆ. ಆದರೆ ಸೋಮವಾರವೂ ವಿಶ್ವಾಸಮತಯಾಚನೆ ಮಾಡುವುದು ಅನುಮಾನ ಎನ್ನುವ ಮಾತು ಕೇಳಿ ಬಂದಿದೆ.

ಕಳೆದ ಬುಧವಾರ ವಿಶ್ವಾಸ ಮತ ಯಾಚನೆ ಮಾಡಿರುವ ಮುಖ್ಯಮಂತ್ರಿಗಳು ಇನ್ನು ಚರ್ಚೆ ನಡೆಸುತ್ತಿದ್ದಾರೆ. ಈ ಮಧ್ಯೆ ಕಲಾಪಕ್ಕೆ ಗೈರಾಗಿರುವ ಶಾಸಕರಿಗೆ ವಿಪ್ ಅನ್ವಯವಾಗುತ್ತೋ ಇಲ್ಲವೋ ಎನ್ನುವ ಗೊಂದಲ ಪರಿಹಾರಕ್ಕೆ ಎರಡು ಪಕ್ಷ ಸುಪ್ರೀಂ ಕೋರ್ಟ್ ಕದ ತಟ್ಟಿದೆ. ಈ ಅರ್ಜಿಯನ್ನು ಪುರಸ್ಕರಿಸಿ ವಿಚಾರಣೆಗೆ ಮಾನ್ಯ ಮಾಡಿದ್ದಲ್ಲಿ ಕೋರ್ಟ್ ಆದೇಶ ಬರುವವರೆಗೂ ವಿಶ್ವಾಸ ಮತಯಾಚನೆ ನಡೆಯುವುದು ಅನುಮಾನ.

ಮೈತ್ರಿ ಪಕ್ಷಗಳ ನಾಯಕರು ಹೇಳಿಕೊಂಡಂತೆ ಸೋಮವಾರವೇ ವಿಶ್ವಾಸಮತ ಸಾಬೀತು ಮಾಡಲು ಹೋದರೆ ದೋಸ್ತಿಗಳಿಗೆ ಸಂಖ್ಯಾಬಲದ ಕೊರತೆ ಇದೆ. ಒಂದು ವೇಳೆ ವೋಟ್ ನಡೆದರೆ ಸರ್ಕಾರ ಪತನವಾಗಲಿದೆ.

ಸೋಮವಾರವು ಚರ್ಚೆ ಮುಂದುವರಿದು ಸುಪ್ರೀಂ ಆದೇಶದ ನಂತರ ಮತಯಾಚನೆ ಮಾಡಲಾಗುವುದು ಎಂದು ಹೇಳಿದರೆ ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸುವ ನಿರ್ಧಾರ ತೆಗೆದುಕೊಂಡರೆ ಸಿಎಂ ಮಂಗಳವಾರ ಮಾಜಿ ಆಗಬಹುದು. ಆದರೆ ವಿಪ್ ಪ್ರಕರಣ ಸುಪ್ರೀಂ ಅಂಗಳದಲ್ಲಿ ಇರುವ ಕಾರಣ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬರುವುದು ಅಷ್ಟು ಸುಲಬ ಅಲ್ಲ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *