ಸಿಎಂ ಆದೇಶದಂತೆ ನಾವು ರೆಸಾರ್ಟ್‌ನಲ್ಲಿ ಇರುತ್ತೇವೆ: ಶಾಸಕ ಅನ್ನದಾನಿ

Public TV
1 Min Read

– ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೋಬೇಡಿ ಎಂದಿದ್ದಾರೆ ಸಿಎಂ

ಚಿಕ್ಕಬಳ್ಳಾಪುರ: ಸಿಎಂ ನೇತೃತ್ವದಲ್ಲಿ ನಾವು ರೆಸಾರ್ಟ್ ಗೆ ಬಂದಿದ್ದೇವೆ ಹಾಗೂ ಅವರ ಆದೇಶದಂತೆ ನಾವು ಇಲ್ಲಿಯೇ ಇರುತ್ತೇವೆ. ಆದರೆ ಎಷ್ಟು ದಿನ ಇರಬೇಕು ಎಂಬ ಮಾಹಿತಿ ನಮಗೆ ಇಲ್ಲ ಎಂದು ಮಳವಳ್ಳಿ ಶಾಸಕ ಡಾ.ಕೆ. ಅನ್ನದಾನಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅನ್ನದಾನಿ, ಸಿಎಂ ನೇತೃತ್ವದಲ್ಲಿ ನಾವು ರೆಸಾರ್ಟ್ ಗೆ ಬಂದಿದ್ದು, ಅವರ ಆದೇಶದಂತೆ ನಾವು ಇಲ್ಲಿ ಇರುತ್ತೇವೆ. ಇನ್ನೂ ಎಷ್ಟು ದಿನ ಇರಬೇಕು ಎಂಬ ಮಾಹಿತಿ ಇಲ್ಲ. ಸಿಎಂ ಹೇಳಿಕೆಗೆ ನಾವು ಬದ್ಧ ಅವರು ಯಾವಾಗ ಹೊರಡಿ ಎಂದು ಹೇಳುತ್ತಾರೋ ಆಗ ನಾವೆಲ್ಲಾ ಹೊರಡುತ್ತೇವೆ ಎಂದು ಹೇಳಿದ್ದಾರೆ.

ನಮ್ಮನ್ನ ಯಾವುದೇ ಪಕ್ಷದ ಶಾಸಕರು ಸಂಪರ್ಕಿಸಿಲ್ಲ. ಅಲ್ಲದೆ ನಮಗೆ ಯಾರ ಹೆದರಿಕೆಯೂ ಇಲ್ಲ. ನಮ್ಮ ನಾಯಕರ ಹೇಳಿಕೆಯಂತೆ ನಾವು ಇಲ್ಲಿ ಇದ್ದೀವಿ. ರೆಸಾರ್ಟ್ ರಾಜಕಾರಣದ ಈ ರೀತಿಯ ಪರಿಸ್ಥಿತಿ ಹೊಸದೇನಿಲ್ಲ. ಈ ಹಿಂದೆ ಸುಮಾರು ಬಾರಿ ರಾಜಕೀಯದ ಇತಿಹಾಸದಲ್ಲಿ ಈ ರೀತಿ ನಡೆದಿದೆ. ಮಾಧ್ಯಮದವರ ಬಳಿ ಯಾವುದೇ ಮಾಹಿತಿ ಹಂಚಿಕೋ ಬೇಡಿ ಎಂದು ಸಿಎಂ ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈಗಿನ ಪರಿಸ್ಥಿತಿ ಸರಿಯಿಲ್ಲ. ಹಾಗಾಗಿ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದೇವೆ. ಪರಿಸ್ಥಿತಿ ಈ ರೀತಿ ಇರುವುದರಿಂದ ಕೆಲವು ಸಂದರ್ಭದಲ್ಲಿ ಮೊಬೈಲ್‍ನಲ್ಲಿ ಮಾತಾಡುವುದರಿಂದ ಒಳ್ಳೆಯದು ಆಗುತ್ತೆ ಹಾಗೂ ಕೆಟ್ಟದೂ ಆಗುತ್ತೆ. ಮೊಬೈಲ್ ಸ್ವಿಚ್ಛ್ ಮಾಡಿರುವುದಕ್ಕೆ ಯಾರೂ ತಪ್ಪು ತಿಳಿದುಕೊಳ್ಳಬೇಡಿ. ನಮ್ಮ ಕ್ಷೇತ್ರದ ಮತದಾರರು ನಾನು ದೂರವಾಣಿ ಕರೆ ಸ್ವೀಕರಿಸಲಿಲ್ಲ ಎಂದು ಬೇಸರ ಮಾಡಿಕೊಳ್ಳಬೇಡಿ. ರಾಜಕಾರಣದ ಕೆಲವು ವ್ಯತ್ಯಾಸಗಳಿಂದ ಸಣ್ಣಪುಟ್ಟ ಸಮಸ್ಯೆಗಳು ಇರುವುದು ಸಹಜ. ಸರ್ಕಾರಕ್ಕೆ ಏನೂ ಆಗುವುದಿಲ್ಲ, ಎಲ್ಲ ನಿಭಾಯಿಸುತ್ತಿದ್ದಾರೆ ಎಂದರು.

ನಮ್ಮ ತಾಲೂಕಿನಲ್ಲಿ ಸಮಸ್ಯೆಗಳು ಇದೆ. ಆದರೂ ನಾವು ಅಧಿಕಾರಿಗಳ ಸಂಪರ್ಕದಲ್ಲಿ ಇದ್ದೇವೆ. ರೆಸಾರ್ಟ್‍ನಲ್ಲಿಯೇ ಕುಳಿತು ನಾವು ತಾಲೂಕಿನ ಸಮಸ್ಯೆ ಬಗೆಹರಿಸುತ್ತಿದ್ದೇವೆ ಎಂದು ಜೆಡಿಎಸ್ ಶಾಸಕ. ಡಾ.ಕೆ ಅನ್ನದಾನಿ ಹೇಳಿದ್ದಾರೆ. ಈ ವೇಳೆ ಕಾರ್ಯಕರ್ತರು ಶಾಸಕರ ಸಹಿ ಪಡೆಯಲು ರೆಸಾರ್ಟ್‍ಗೆ ಬಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *