ಬೆಂಗಳೂರು: ಜಾರಕಿಹೊಳಿ ಸಹೋದರರ ಅಸಮಾಧಾನವನ್ನು ಶಮನಗೊಳಿಸುವಲ್ಲಿ ಸಿಎಂ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. ಆದರೆ ಸಿಎಂ ಸಂಧಾನ ಸಕ್ಸಸ್ ಆಗಿದ್ದು ಸದ್ಯಕ್ಕೆ ಮಾತ್ರ, ಮುಂದೆ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಇದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಮಂಗಳವಾರ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಮಾತುಕತೆಯಲ್ಲಿ ಜಾರಕಿಹೊಳಿ ಸಹೋದರರು ಸದ್ಯಕ್ಕೆ ತಟಸ್ಥರಾಗಿದ್ದಾರೆ. ಅಲ್ಲದೇ ರಮೇಶ್ ಜಾರಕಿಹೊಳಿಯವರು ಸಹ ರಾಜೀನಾಮೆ ನೀಡುವ ವಿಚಾರವನ್ನು ಮುಂದೂಡಿದ್ದಾರೆ. ಆದರೆ ಈ ಎಲ್ಲಾ ಬೆಳವಣಿಗೆಗೆ ಮೂಲ ಕಾರಣ ರಾಜಸ್ಥಾನ ಹಾಗೂ ಮಧ್ಯಪ್ರದೇಶ ಚುನಾವಣೆಗಳ ಎಫೆಕ್ಟ್ ಎಂದು ಹೇಳಲಾಗುತ್ತಿದೆ.
ಹೌದು, ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳ ಚುನಾವಣೆ ಘೋಷಣೆ ಬಳಿಕ ರಾಜೀನಾಮೆ ನೀಡಿದರೆ ಉತ್ತಮ ಎಂಬ ಆಲೋಚನೆಗೆ ಜಾರಕಿಹೊಳಿ ಸಹೋದರರು ಬಂದಿದ್ದಾರೆ. ಒಂದು ವೇಳೆ ಈಗ ಏನಾದರೂ ರಾಜೀನಾಮೆ ಕೊಟ್ಟರೆ ಎರಡೂ ರಾಜ್ಯಗಳ ಜತೆಯಲ್ಲೇ ಚುನಾವಣೆಗೆ ಹೋಗಬೇಕು. ಇವುಗಳ ಜೊತೆ ಚುನಾವಣೆಗೆ ಹೋದರೆ ನಮ್ಮ ಗೆಲುವು ಕಷ್ಟ ಆಗುತ್ತದೆ ಎನ್ನುವ ನಿರ್ಧಾರದಿಂದಾಗಿ ರಾಜೀನಾಮೆಯ ವಿಚಾರಕ್ಕೆ ಸದ್ಯಕ್ಕೆ ತಡೆ ಹಾಕಿದ್ದಾರೆ ಎನ್ನಲಾಗಿದೆ.
ಒಂದು ತಿಂಗಳು ಬಿಟ್ಟು ರಾಜೀನಾಮೆ ನೀಡಿದರೆ, ನಮಗೆ ಗೆಲ್ಲೋದಕ್ಕೆ ಸುಲಭ ಆಗುತ್ತದೆ. ಅಲ್ಲದೇ ಲೋಕಸಭಾ ಚುನಾವಣೆಯ ಜೊತೆಯಲ್ಲೇ ನಮ್ಮ ಕ್ಷೇತ್ರಗಳ ಉಪಚುನಾವಣೆಗಳು ನಡೆದರೆ ನಮಗೆ ಅನುಕೂಲವಾಗುತ್ತೆ. ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ನಾವು ಸುಲಭವಾಗಿ ಗೆಲ್ಲಬಹುದು ಅಂತ ಅಸಮಾಧಾನಿತ ಶಾಸಕರ ಮುಂದೆ ಪ್ರಸ್ತಾಪಿಸಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಸಿಎಂ ಕುಮಾರಸ್ವಾಮಿ ಎಷ್ಟೇ ಹರಸಾಹಸ ಪಟ್ಟು ಸಂಧಾನ ಮಾಡಿದರೂ, ಸದ್ಯಕ್ಕೆ ಮಾತ್ರ ಸಮ್ಮಿಶ್ರ ಸರ್ಕಾರ ಸೇಫ್ ಆಗಿದೆ. ಆದರೆ ಜಾರಕಿಹೊಳಿ ಸಹೋದರರ ಮುಂದಿನ ನಡೆ ಮೇಲೆ ರಾಜ್ಯದ ರಾಜಕಾರಣ ಏನಾಗುತ್ತದೆ ಎನ್ನುವುದು ಕೂತುಹಲ ಕೆರೆಳಿಸಿದೆ. ಈಗಾಗಲೇ ಹೈಕಮಾಂಡ್ ಅಂಗಳ ತಲುಪಿರುವ ಸಹೋದರರ ಸಂಕಟ, ಏನಾಗಬಹುದು ಎಂಬುದು ಇಂದು ಸಂಜೆಯೊಳಗೆ ತಿಳಿಯಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv