ಬೆಂಗಳೂರು: ಸಾಲಮನ್ನಾ ಮಾಡದಿದ್ದರೆ ಸೋಮವಾರದಿಂದ ಪ್ರತಿಭಟನೆ ಮಾಡಲು ಮುಂದಾಗಿದ್ದ ಬಿಜೆಪಿಯ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಯಡಿಯೂರಪ್ಪಗೆ ಬೇರೆ ಕೆಲಸವಿಲ್ಲ. ಮನೆ ಒಡೆಯುವುದೇ ಅವರ ಕೆಲಸ. ಒಬ್ಬರಿಗೊಬ್ಬರಿಗೆ ಎತ್ತಿಕಟ್ಟುವುದೇ ಅವರ ಕೆಲಸ. ನಾವೊಬ್ಬರೇ ದೇಶ ಉದ್ಧಾರ ಮಾಡೋರು ಅಂತ ಯಡಿಯೂರಪ್ಪ ಅಂದು ಕೊಂಡಿದ್ದಾರೆ. ಯಡಿಯೂರಪ್ಪ ಮಾತಿಗೆ ನಾನು ಬೆಲೆ ಕೊಡೋದಿಲ್ಲ. ಇಂತಹ ವಿಚಾರಗಳಿಗೆ ನಾಡಿನ ಜನತೆ ಬೆಂಬಲ ಕೊಡಬೇಡಿ ಎಂದು ಸಿಎಂ ಮನವಿ ಮಾಡಿಕೊಂಡರು.
ನನ್ನ ಸ್ವಾರ್ಥಕ್ಕಾಗಿ ನಾನು ಸಿಎಂ ಆಗಿಲ್ಲ. ಜನರಿಗಾಗಿ ಸಿಎಂ ಆಗಿದ್ದೇನೆ. ಕೊಟ್ಟ ಎಲ್ಲಾ ಭರವಸೆಯನ್ನ ಈಡೇರಿಸುತ್ತೇನೆ. ರೈತರ ಸಾಲಮನ್ನಾ ಕೂಡ ಮಾಡುತ್ತೇನೆ. ನಮ್ಮದು ಸಮ್ಮಿಶ್ರ ಸರ್ಕಾರ ಹೀಗಾಗಿ ಕಾಂಗ್ರೆಸ್ ಜೊತೆಗೂ ಕುಳಿತು ಮಾತನಾಡಿ ಸಾಲಮನ್ನಾ ಮಾಡುತ್ತೇನೆ. ಆದ್ದರಿಂದ ರಾಜ್ಯದ ಯಾವ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಿಮ್ಮ ಸಮಸ್ಯೆಯನ್ನು ನಾನು ಪರಿಹಾರ ಮಾಡುತ್ತೀನಿ. ಸಾಲಮನ್ನಾ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯೋದಿಲ್ಲ ಅಂತ ಸ್ಪಷ್ಟಪಡಿಸಿದ್ರು.