ಭಾರತ, ಪಾಕ್ ನಡ್ವೆ ಸಂಘರ್ಷ ಆಗಲಿದೆ ಅನ್ನೋದು 2 ವರ್ಷದ ಹಿಂದೆಯೇ ಗೊತ್ತಿತ್ತು- ಸಿಎಂ

Public TV
1 Min Read

– ಎಚ್‍ಡಿಡಿ ಪ್ರಧಾನಿಯಾಗಿದ್ದಾಗ ದಾಳಿ ನಡೆದಿತ್ತಾ?
– ಬಡ ಕುಟುಂಬದ ಸೈನಿಕರ ಜೊತೆ ಚೆಲ್ಲಾಟ

ಚಿಕ್ಕಮಗಳೂರು: ಎರಡು ವರ್ಷದ ಹಿಂದೆಯೇ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ನಡೆಯಲಿದೆ ಎನ್ನುವ ಮಾಹಿತಿ ನನಗೆ ಸಿಕ್ಕಿತ್ತು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಚಿಕ್ಕಮಗಳೂರಿನ ಕೊಪ್ಪದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಪ್ರಧಾನಿ ಮೋದಿ ಅವರ ಬಣ್ಣಬಣ್ಣದ ಮಾತುಗಳಿಗೆ ಮರುಳಾಗಬೇಡಿ. ನನಗೆ ಎರಡು ವರ್ಷದ ಹಿಂದೆಯೇ ನಿವೃತ ಸೈನ್ಯಾಧಿಕಾರಿಯೊಬ್ಬರು ಲೋಕಸಭಾ ಚುನಾವಣೆ ಮುನ್ನ ಭಾರತ-ಪಾಕ್ ನಡುವೆ ಸಂಘರ್ಷ ನಡೆಯುತ್ತದೆ ಎಂದು ತಿಳಿಸಿದ್ದರು. ಸಂಘರ್ಷದ ಏನಾದರೂ ಕಥೆ ಸೃಷ್ಟಿ ಮಾಡಿ ಮೋದಿ ಮತ ಕೇಳುತ್ತಾರೆ ಎಂದು ಅಂದೇ ಅಧಿಕಾರಿ ತಿಳಿಸಿದ್ದರು ಎಂಬುದಾಗಿ ಹೇಳಿದರು.

ಎರಡು ವರ್ಷದ ಹಿಂದೆಯೇ ನನ್ನ ಬಳಿ ಚರ್ಚೆ ಮಾಡಿದ್ದರು. ಇವತ್ತು ಅದೇ ರೀತಿಯಲ್ಲಿ ಆಗಿದೆ. ಅಭಿವೃದ್ಧಿ ಹೆಸರಿನಲ್ಲಿ ಅವರು ನಿಮ್ಮ ಬಳಿ ಮತ ಕೇಳುತ್ತಿಲ್ಲ. ದೇಶವನ್ನು ಸುಭದ್ರವಾಗಿ ನಡೆಸುವ ಪ್ರಧಾನ ಮಂತ್ರಿಬೇಕಂತೆ. ಹಾಗಾದರೆ ಸ್ವತಂತ್ರ ಬಂದ 70 ವರ್ಷಗಳಲ್ಲಿ ಈ ದೇಶವನ್ನು ಆಳಿರುವವರೆಲ್ಲಾ ಅಭದ್ರತೆಯಲ್ಲಿ ಆಡಳಿತ ನಡೆಸಿದ್ದಾರಾ? ನಾನು ನಿಮ್ಮನ್ನು ಕೈ ಜೋಡಿಸಿ ಮನವಿ ಮಾಡುತ್ತೇನೆ ದಯವಿಟ್ಟು ಅವರನ್ನು ನಂಬಬೇಡಿ ಎಂದು ಮನವಿ ಮಾಡಿದರು.

ನೀವೇ ಬೆಳೆಸಿದಂತಹ ಕನ್ನಡಿಗನಾಗಿ ದೇಶದಲ್ಲಿ ಪ್ರಧಾನ ಮಂತ್ರಿಯಾಗಿ 10 ತಿಂಗಳು ಕೆಲಸ ಮಾಡಿದ್ದಾರೆ. ಆಗ ಎಲ್ಲಾದರೂ ಬಾಂಬ್ ದಾಳಿ, ಅಮಾಯಕರ ಬಲಿ ನಡೆದಿತ್ತಾ? ಯೋಧರನ್ನು ಗುಂಡಿಕ್ಕಿ ಕೊಲ್ಲುವ ಘಟನೆ ಆಗ ನಡೆದಿತ್ತಾ? ಆದರೆ ಈಗ ಅವರ ಉಳಿವಿಗೆ ದೇಶದ ಬಡ ಕುಟುಂಬದ ಸೈನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ನಿಮ್ಮನ್ನು ದಾರಿ ತಪ್ಪಿಸುವ ಇಂತಹ ಪ್ರಧಾನ ಮಂತ್ರಿ ಬೇಕಾ? ದೇಶದಲ್ಲಿ ಶಾಂತಿ, ನೆಮ್ಮದಿ ಕಾಪಾಡುವಂತಹ ಪ್ರಧಾನಿ ಬೇಕಾ? ನೀವೇ ಯೋಚನೆ ಮಾಡಿ ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಇವರಿಗೆ ಅಭಿವೃದ್ಧಿ ಬೇಕಿಲ್ಲ. ಬದಲಿಗೆ ಧರ್ಮದ ರಾಜಕಾರಣ ಬೇಕಾಗಿದೆ. ನಮ್ಮ ಕುಟುಂಬದವರು ಶೃಂಗೇರಿಯ ಪರಮ ಭಕ್ತರು. ಧರ್ಮದ ರಕ್ಷಣೆಯಲ್ಲಿ ನಾವು ಅವರಿಗಿಂತ ಮುಂದಿದ್ದೇವೆ. ನಾವು ಯಾವ ಧರ್ಮದಲ್ಲಿ ಹುಟ್ಟಬೇಕು ಎಂದು ಕೇಳಿಕೊಂಡು ಹುಟ್ಟೋದಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *