ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಚುನಾವಣೆಗೆ ನಿಲ್ತೀವಿ: ಎಚ್‍ಡಿಕೆ

Public TV
2 Min Read

– ಕುಟುಂಬ ರಾಜಕಾರಣ ಎಲ್ಲಿಲ್ಲ ಹೇಳಿ?
– ನಾವ್ಯಾರೂ ಹಿಂಬಾಗಿಲಿನಿಂದ ಬಂದಿಲ್ಲ

ನವದೆಹಲಿ: ಜೆಡಿಎಸ್ ಕಾರ್ಯಕರ್ತರು ಎಷ್ಟು ಜನರನ್ನು ಅಪೇಕ್ಷೆ ಮಾಡುತ್ತಾರೆ ಅಷ್ಟು ಜನ ನಮ್ಮ ಕುಟುಂಬದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳುವ ಮೂಲಕ ಕುಟುಂಬ ರಾಜಕೀಯವನ್ನು ಸಮರ್ಥಿಸಿಕೊಂಡಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಸಿಎಂ, ಕುಟುಂಬ ರಾಜಕಾರಣ ಎಲ್ಲಿಲ್ಲ ಹೇಳಿ? ಕುಟುಂಬ ರಾಜಕೀಯಕ್ಕೆ ನೂರು ಉದಾಹರಣೆ ಕೊಡಬಲ್ಲೆ. ನಾವ್ಯಾರೂ ಹಿಂಬಾಗಿಲಿನಿಂದ ಬಂದಿಲ್ಲ ಎಂದು ಅವರು, ಜನರ ವಿಶ್ವಾಸ ಗಳಿಸಿ ಆಯ್ಕೆಯಾಗಿ ಬಂದಿದ್ದೇವೆ. ಎಂಟು ತಿಂಗಳ ಪರಿಸ್ಥಿತಿಗಿಂತ ಈಗಿನ ಪರಿಸ್ಥಿತಿ ಬದಲಾವಣೆ ಕಂಡಿದೆ ಎಂದು ಹೇಳಿದರು.

ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಸ್ಪರ್ಧಿಸಬಾರದೆಂದು ಹೇಳಿಲ್ಲ. ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಮಾಡವುದು ಅನಾವಶ್ಯಕ. ನಮ್ಮ ಪಕ್ಷದ ವತಿಯಿಂದ ಜನರ ಮುಂದೆ ಹೋಗುತ್ತೇವೆ. ಅಭಿವೃದ್ಧಿ ಕೆಲಸಗಳನ್ಮು ಜನರ ಮುಂದೆ ಇಡುತ್ತೇವೆ. ಜೆಡಿಎಸ್ ಹಾಗೂ ಮಂಡ್ಯಕ್ಕೆ ಇರುವ ಅನುಬಂಧ ದೊಡ್ಡದಿದೆ. ಅಭ್ಯರ್ಥಿಗಳ ಆಯ್ಕೆ, ಚುನಾವಣೆ ಬಗ್ಗೆ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಸೀಟು ಹಂಚಿಕೆ ಬಗ್ಗೆ ಅನುಮಾನ ಬೇಡ. ಹಾಲಿ ಸಂಸದರ ಸೀಟು ಯಾರು ಕೇಳಿದ್ದಾರೆ..? ಇದು ಕೇವಲ ಮಾಧ್ಯಮಗಳ ವರದಿಯಷ್ಟೇ. ಆದರೆ ನಮಗೆ ಹೆಚ್ಚು ಕ್ಷೇತ್ರಗಳಲ್ಲಿ ಗೆಲವು ಸಾಧಿಸುವು ಮುಖ್ಯವಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ದಿನಗಳ ಹಿಂದೆ ಕಲಬುರಗಿಗೆ ಭೇಟಿ ಕೊಟ್ಟಿದ್ದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ಕರ್ನಾಟಕ ರಾಜ್ಯ ಸರ್ಕಾರವು ರೈತ ಮಾಹಿತಿ ಕೊಡುತ್ತಿಲ್ಲ. ಹಣ ತಲುಪಿಸಲು ರಾಜ್ಯ ಸರ್ಕಾರ ನೆರವು ನೀಡುತ್ತಿಲ್ಲ. ಈ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ್ದರು. ಪ್ರಧಾನಿ ಸ್ಥಾನದಲ್ಲಿರುವ ಮೋದಿ ಅವರಿಂದ ಈ ಮಾತು ಬರಬಾರದಿತು ಎಂದು ಅಸಮಾಧಾನ ಹೊರ ಹಾಕಿದರು.

ಕಿಸಾನ್ ಸಮ್ಮಾನ್ ಯೋಜನೆ ಸಂಬಂಧ ರಾಜ್ಯ ಸರ್ಕಾರವು ಈಗಾಗಲೇ 59.48 ಲಕ್ಷ ಫಲಾನುಭವಿಗಳ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದೆ. ನಾವು ಸಾಲಮನ್ನಾ ಯೋಜನೆ ಕಡೆಗೆ ಗಮನ ಹರಿಸಿದ್ದೇವೆ. ಅದಕ್ಕಾಗಿ ಮಾಹಿತಿ ಸಂಗ್ರಹ ಮಾಡಿದ್ದೇವೆ. ನಮ್ಮ ಅಧಿಕಾರಿಗಳು ಎಲ್ಲ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಿದ್ದಾರೆ. ಆದರೆ ಕೇಂದ್ರ ಸರ್ಕಾರವು ಮತ್ತೆ ತಕರಾರು ತೆಗೆದಿದೆ. ಐಎಫ್‍ಎಸ್‍ಸಿ ಮಾಹಿತಿ ನೀಡಿಲ್ಲವೆಂದು 40 ರೈತರ ಮಾಹಿತಿ ತಿರಸ್ಕಾರ ಮಾಡಿದೆ ಎಂದು ಆರೋಪಿಸಿದರು.

ಇದೇ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು, ಕಾಂಗ್ರೆಸ್, ಜೆಡಿಎಸ್ ಮೈತ್ರಿಯಲ್ಲಿ ಮಂಡ್ಯ ಕ್ಷೇತ್ರ ಯಾರಿಗೆ ಸೇರುತ್ತದೆ ಎನ್ನುವ ತೀರ್ಮಾನ ಆಗಬೇಕು. ಸೀಟು ಹಂಚಿಕೆ ಅಧಿಕೃತವಾದ ಬಳಿಕ ಅಭ್ಯರ್ಥಿಗಳ ಹೆಸರು ಫೈನಲ್ ಮಾಡುತ್ತೇವೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆ ಮಾತನಾಡುತ್ತಾರೆ. ಮಾರ್ಚ್ 11 ರಂದು ಸ್ಕ್ರೀನಿಂಗ್ ಕಮೀಟಿ ಸಭೆ ಇದೆ. ಅಂದು ಎಲ್ಲವನ್ನೂ ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *