ಕಾರ್ಯಕರ್ತರ ಸಭೆಯಲ್ಲಿ ತಾಳ್ಮೆ ಕಳೆದುಕೊಂಡು ರೇಗಿದ ಸಿಎಂ ಎಚ್‍ಡಿಕೆ

Public TV
1 Min Read

ರಾಮನಗರ: ಬಿಡದಿಯಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ತಾಳ್ಮೆ ಕಳೆದುಕೊಂಡು ಕಾರ್ಯಕರ್ತರ ವಿರುದ್ಧ ರೇಗಾಡಿದ್ದಾರೆ.

ರಾಮನಗರ ಉಪಚುನಾವಣೆಯ ಹಿನ್ನೆಲೆಯಲ್ಲಿ ಬಿಡದಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಸಿಎಂ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದ್ದರು. ಸಭೆಯಲ್ಲಿ ತಾನು ಮಾತನಾಡುತ್ತಿದ್ದಾಗ ಮಧ್ಯದಲ್ಲಿ ಮಾತನಾಡಿದ ಕಾರ್ಯಕರ್ತರಿಗೆ ಮೊದಲು ನನ್ನ ಮಾತನ್ನು ಕೇಳಿ ಎಂದು ಗರಂ ಆಗಿಯೇ ಹೇಳಿದ್ದಾರೆ.

ಈ ವೇಳೆ ಪಕ್ಷದ ಕಾರ್ಯಕರ್ತರಿಗೆ ಬುದ್ಧಿ ಮಾತು ಹೇಳಿದ ಸಿಎಂ ಎಚ್‍ಡಿಕೆ, ಏನೇ ಸಮಸ್ಯೆ ಇದ್ದರು ನನ್ನ ಬಳಿ ಚರ್ಚೆ ಮಾಡಿ. ಏನೇ ತಪ್ಪಾಗಿದ್ದರೂ ನಾನು ತಿದ್ದಿಕೊಳ್ಳುತ್ತೇನೆ. ಗಲಾಟೆಗೆ ಅವಕಾಶ ನೀಡಬೇಡಿ. ಸಣ್ಣದ್ದನ್ನೇ ದೊಡ್ಡದು ಮಾಡಬೇಡಿ. ಮೊದಲು ನನ್ನ ಮಾತುಕೇಳಿ ಎಂದು ಹೇಳಿದ್ದಾರೆ.

ಕಾರ್ಯರ್ಕತ ಸಭೆಯ ವರದಿಗಾಗಿ ಜೆಡಿಎಸ್‍ನಿಂದ ಮಾಧ್ಯಮಗಳಿಗೆ ಆಹ್ವಾನ ಸಿಕ್ಕಿತ್ತು. ಸಭೆಯ ವರದಿ ಮಾಡಲು ಆಗಮಿಸಿದ್ದ ವೇಳೆ ಬೆಳಗ್ಗೆ ಪ್ರವೇಶ ದ್ವಾರದಲ್ಲಿ ಪೊಲೀಸರು ತಡೆದು ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಹೇಳಿದ್ದರು. ಹಾಗಿದ್ದರೂ ಸಭೆಯಲ್ಲಿ ಕುಮಾರಸ್ವಾಮಿ ಮೈಕ್ ಹಿಡಿದು ಮಾತನಾಡಿದ್ದು, ಸಭೆಯಲ್ಲಿ ಚರ್ಚೆಯಾಗುತ್ತಿದ್ದ ವಿಚಾರದ ಧ್ವನಿವರ್ಧಕದಿಂದ ಕೇಳುತಿತ್ತು.

ಕಳೆದ ಚುನಾವಣೆಯಲ್ಲಿ ನಾನು ಒಂದೇ ಒಂದು ದಿನ ಪ್ರಚಾರಕ್ಕೆ ಬಂದಿಲ್ಲ. ಅಂದರೂ ನೀವು ನನ್ನನ್ನ ಗೆಲ್ಲಿಸಿದ್ದೀರಿ. ದೇವೇಗೌಡರ ಪಕ್ಷ ನಿಮ್ಮಿಂದಲೇ ಉಳಿಯಬೇಕು ಎಂದು ಕಾರ್ಯಕರ್ತರಿಗೆ ಸಿಎಂ ಮನವಿ ಮಾಡಿದರು.

ಇದೇ ವೇಳೆ ಸಭೆ ನಡೆಸುತ್ತಿರುವುದು ಕ್ಷೇತ್ರದ ಜನರ ಸಮಸ್ಯೆ ಆಲಿಸುವ ಉದ್ದೇಶದಿಂದ ಮಾತ್ರ ಸಭೆ ನಡೆಸಿದ್ದಾಗಿ ತಿಳಿಸಿದ ಎಚ್‍ಡಿಕೆ, ಮಾಧ್ಯಮಗಳಲ್ಲಿ ಉಪಚುನಾವಣೆ ಬಗ್ಗೆ ಚರ್ಚೆ ಆಗುತ್ತಿದೆ. ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿರನ್ನು ಕಣಕ್ಕೆ ಇಳಿಸುತ್ತಾರೆ ಎಂದು ಚರ್ಚೆಯಾಗುತ್ತಿದೆ. ಆದರೆ ಈ ದಿನ ಚುನಾವಣೆ ವಿಚಾರವಾಗಿ ಸಭೆ ಕರೆದಿಲ್ಲ. ಎರಡೂ ಕ್ಷೇತ್ರಗಳ ಕಾರ್ಯಕರ್ತರ ಸಮಸ್ಯೆ ಆಲಿಸಲು ಕರೆದಿದ್ದಾಗಿ ಹೇಳಿದರು.

ಸಭೆ ನಡೆಯುತ್ತಿದ್ದ ವೇಳೆ ಮಳೆಯಾದ ಕಾರಣ ಕಾರ್ಯಕರ್ತರು ಮಳೆಯಿಂದ ರಕ್ಷಿಸಿಕೊಳ್ಳಲು ಚೇರ್ ಗಳ ಮೊರೆ ಹೋಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *