ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಸ್ಥಿರ ಭೀತಿ ನಡುವೆ ದೇವರ ಮೊರೆ ಹೋಗಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಇಂದು ಬೆಳಗ್ಗೆ ಬಂದಿದ್ದ ಫೋನ್ ಕಾಲ್ ನಿಂದ ಟೆನ್ಷನ್ ಒಳಗಾಗಿದ್ದರು ಎನ್ನಲಾಗಿದೆ.
ಬೆಳಗ್ಗೆ 8 ಗಂಟೆಗೆ ವೇಳೆಗೆ ಬಂದ ಫೋನ್ ಕಾಲ್ ಅವರ ಟೆನ್ಷನ್ ಜಾಸ್ತಿ ಮಾಡಿತ್ತು. ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಸಿಎಂ ಕುಮಾರಸ್ವಾಮಿ ಅವರಿಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಫೋನ್ ಮಾಡಿ ವಿಶೇಷ ಮಾಹಿತಿ ನೀಡಿದ್ದರು. ಗುಪ್ತಚರ ಇಲಾಖೆ ಅಧಿಕಾರಿಗಳು ಕಾಂಗ್ರೆಸಿನಲ್ಲಿ ಬಂಡಾಯ ಎದ್ದಿರುವ ಕೆಲ ಶಾಸಕರು ಮುಂಬೈಗೆ ತೆರಳಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿಯನ್ನು ಈ ವೇಳೆ ನೀಡಿದ್ದರು ಎನ್ನಲಾಗಿದೆ.
ಕಾಂಗ್ರೆಸ್ಸಿನ ಪ್ರಮುಖ ನಾಯಕರ ನೇತೃತ್ವದಲ್ಲಿ ಕೆಲ ಶಾಸಕರು ಆಪರೇಷನ್ ಕಮಲ ಒಳಗಾಗುವ ಸಾಧ್ಯತೆ ಇದ್ದು, ವಿಶೇಷ ವಿಮಾನ ಮೂಲಕ ಹೊರ ರಾಜ್ಯಕ್ಕೆ ಹೋಗಲು ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಸಿಎಂ ಅವರಿಗೆ ಲಭಿಸಿದೆ ಎನ್ನಲಾಗಿದೆ. ಇದಕ್ಕಾಗಿ ವಿಶೇಷ ವಿಮಾನ ಬುಕ್ ಮಾಡಲು ಸಿದ್ಧತೆ ಕೂಡ ನಡೆದಿದ್ದು, ಸುಮಾರು 10 ರಿಂದ 15 ಶಾಸಕರು ಮುಂಬೈಗೆ ಹೋಗಲು ಸಿದ್ಧರಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎನ್ನಲಾಗಿದೆ.
ಸದ್ಯ ಗುಪ್ತ ಇಲಾಖೆ ಅಧಿಕಾರಿಗಳು ನೀಡಿದ್ದಾರೆ ಎನ್ನಲಾಗಿರುವ ಮಾಹಿತಿ ಆಪರೇಷನ್ ಕಮಲದ ಮೊದಲ ಭಾಗ ಎಂಬ ಶಂಕೆಗೆ ಕಾರಣವಾಗಿದೆ. ಇತ್ತ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಶಾಸಕರಿಗೆ ಸೋಮವಾರದ ಸಭೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಜೆಡಿಎಸ್ ಶಾಸಕರ ಸಭೆಯನ್ನೂ ಕರೆಯಲಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು, ಶನಿವಾರ ಆದ್ದರಿಂದ ಶಾಸಕರ ಭೇಟಿಗೆ ಕರೆಯಲಾಗಿದೆ. ಆದರೆ ಇದು ಕೇವಲ ಔಪಚಾರಿಕ ಸಭೆ ಅಷ್ಟೇ ಯಾವುದೇ ಮಹತ್ವದ ಸಭೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದರು. ವಿಶೇಷವಾಗಿ ಮುಂಬೈಗೆ ತೆರಳಲು ಸಿದ್ಧತೆ ನಡೆಸುವ ಶಾಸಕರು ಆಗಮಿಸುತ್ತಾರೆ ಎಂದು ತಿಳಿಸಿದ್ದರು.
ರಾಜ್ಯ ರಾಜಕೀಯ ಉಂಟಾಗುತ್ತಿರುವ ಬೆಳಗವಣಿಗೆ ನಡುವೆ ಹಾಸನದಲ್ಲಿ ನಡೆಯಲಿರುವ ಜೆಡಿಎಸ್ ಶಾಸಕರ ಸಭೆ ಮಹತ್ ಎನ್ನಲಾಗಿದ್ದು, ರಾಜ್ಯ ರಾಜಕಾರಣದ ಕುರಿತು ಶಾಸಕರ ಬಗ್ಗೆ ಮಾಹಿತಿ ನೀಡಿ ಅವರ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸಭೆಯ ಭಾಗವಾಗಿದೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಪಕ್ಷದ ಶಾಸಕರ ಸಭೆ ನಡೆಸಿದ್ದರು. ಅಲ್ಲದೇ ಮುಂದಿನ ದಿನಗಳಲ್ಲಿ ತಾವು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗುವಂತೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv