ಮಾಧ್ಯಮಗಳ ಮೇಲೆ ಮತ್ತೆ ಸಿಎಂ ಮುನಿಸು – ನಿಮ್ಮ ಜೊತೆ ಮಾತನಾಡ್ಬಾರದೆಂದು ತೀರ್ಮಾನಿಸಿದ್ದೇನೆ ಎಂದ ಎಚ್‍ಡಿಕೆ

Public TV
2 Min Read

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಎಚ್.ಡಿ.ಕುಮಾರಸ್ವಾಮಿ ಅವರು ಮಾಧ್ಯಮಗಳ ಮೇಲೆ ಹರಿಹಾಯುತ್ತಿದ್ದು, ಇಂದು ಮತ್ತೆ ಗರಂ ಆಗಿದ್ದಾರೆ. ಮಾಧ್ಯಮಗಳ ಮೇಲೆ ಗರಂ ಆಗೋ ಸಿಎಂ ವರ್ತನೆ ಇದೇ ಮೊದಲಲ್ಲ. ಈ ಹಿಂದೆಯೂ ನಾನು ಯಾರ ಜೊತೆಯೂ ಮಾತನಾಡಲ್ಲ ಎಂದು ಹೇಳಿ ಅವರ ಮಾತನ್ನು ಅವರೇ ಮುರಿದುಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ.

ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೊತೆಗಿನ ಸಭೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಎಂ, ನಿಮ್ಮಲ್ಲಿನ ಚರ್ಚೆ ಹಾಗೂ ಸುದ್ದಿಗಳಿಂದ ನಾನು ನಿಮಗೆ ಬಹಿಷ್ಕಾರ ಹಾಕಿದ್ದೇನೆ. ನಾನು ಮಾಧ್ಯಮಗಳಿಗೆ ಬಹಿಷ್ಕಾರ ಹಾಕಿದ್ದೇನೆ (ಐ ಆಮ್ ಬಾಯ್ಕಾಟಿಂಗ್ ಯುವರ್ ಸೆಲ್ಫ್) ಎಂದು ಹೇಳಿ ಸಿಟ್ಟಿನಿಂದಲೇ ತೆರಳಿದ್ದಾರೆ.

ಅದೇನು ಸ್ಟೋರಿನೋ, ಅದೇನು ಚರ್ಚೆ ಮಾಡುತ್ತೀರೋ ಮಾಡಿಕೊಳ್ಳಿ. ಆ ಮೂಲಕ ಮಜಾ ಮಾಡಿ. ನಾನು ನಿಮ್ಮ ಜೊತೆ ಮಾತನಾಡಬಾರದು ಎಂದು ತೀರ್ಮಾನ ಮಾಡಿದ್ದೇನೆ ಎಂದು ಹೇಳಿದ್ದಾರೆ. ಈ ತೀರ್ಮಾನವನ್ನು ಸ್ವತಃ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಯಾವಾಗ ಬದಲಾಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಕೈ ಉಸ್ತುವಾರಿ ಜೊತೆ ಚರ್ಚೆ: ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ವೇಣುಗೋಪಾಲ್ ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ ಅವರು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ಸಿಎಂ ಜೊತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಆಗಮಿಸಿದ್ದು, ದಿನೇಶ್ ಅವರು ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್‍ಗೆ ಬಿ ಫಾರಂ ನೀಡಿದರು.

ಬಳಿಕ ಮಾತನಾಡಿದ ಚಿಂಚೋಳಿ ಕ್ಷೇತ್ರದ ಕೈ ಅಭ್ಯರ್ಥಿ ಸುಭಾಷ್ ರಾಥೋಡ್, ನನಗೆ ಟಿಕೆಟ್ ಕೊಟ್ಟಿದ್ದು ಸಂತೋಷ ಆಗಿದೆ. ನಮ್ಮ ನಾಯಕರು ಭರವಸೆ ಇಟ್ಟು ಟಿಕೆಟ್ ಕೊಟ್ಟಿದ್ದಾರೆ. ಉಮೇಶ್ ಜಾಧವ್ ಯಾವಾಗಲೂ ದ್ವಂದ್ವ ನೀತಿ ಅನುಸರಿಸುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಉಮೇಶ್ ಜಾಧವ್ ಪುತ್ರ ವ್ಯಾಮೋಹ ಎಂದು ಆರೋಪಿಸಿದರು. ಈಗ ಉಮೇಶ್ ಜಾಧವ್ ಏನ್ ಮಾಡಿದ್ರು ಎಂದು ಪ್ರಶ್ನಿಸಿದರು.

ಬಿಜೆಪಿ ಟಿಕೆಟ್ ಅನ್ನು ತಮ್ಮ ಪುತ್ರನಿಗೆ ಉಮೇಶ್ ಜಾಧವ್ ಕೊಡಿಸಿದರು. ನಿಜವಾದ ಪುತ್ರ ವ್ಯಾಮೋಹ ಉಮೇಶ್ ಜಾಧವ್‍ಗೆ ಇದೆ. ಜನ ಚುನಾವಣೆಯಲ್ಲಿ ಅವರಿಗೆ ತಕ್ಕ ಉತ್ತರ ಕೊಡ್ತಾರೆ ಎಂದು ವಾಗ್ದಾಳಿ ನಡೆಸಿದರು. ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಡಿಸಿಎಂ ಪರಮೇಶ್ವರ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *