ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆದ್ರಾ ಸಿಎಂ?

Public TV
1 Min Read

ಬೆಂಗಳೂರು: ವಿಶ್ವಾಸಮತಯಾಚನೆಗೆ ಸಮಯ ನಿಗದಿ ಮಾಡಲು ಸ್ಪೀಕರ್ ಅವರಿಗೆ ಮನವಿ ಮಾಡುವ ಮೂಲಕ ಮುಖ್ಯಮಂತ್ರಿಗಳು ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆದ್ರಾ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿದೆ.

ಸದ್ಯ ಸಿಎಂ ಅವರು ವಿಶ್ವಾಸ ಮತಯಾಚನೆ ಸಮಯ ನಿಗದಿ ಮಾಡಲು ಕೇಳಿರುವುದರಿಂದ ಎಲ್ಲಾ ಶಾಸಕರಿಗೂ ಆಯಾ ಪಕ್ಷಗಳು ವಿಪ್ ಜಾರಿ ಮಾಡಿವೆ. ಸದ್ಯ ವಿಶ್ವಾಸ ಮತಯಾಚನೆಗೆ ಸಿಎಂ ಅವರಿಗೆ 14 ದಿನಗಳ ಕಾಲವಕಾಶ ಲಭಿಸಲಿದೆ. ಈ ಸಂದರ್ಭದಲ್ಲಿ ಇತರೇ ಅತೃಪ್ತ ಶಾಸಕರು ರಾಜೀನಾಮೆಗೆ ಮುಂದಾಗುವುದಿಲ್ಲ. ಪರಿಣಾಮ ಮೈತ್ರಿ ಸರ್ಕಾರದಲ್ಲಿ ಅತೃಪ್ತರ ಶಾಸಕರ ಸಂಖ್ಯೆ ಹೆಚ್ಚಲು ಬ್ರೇಕ್ ಬೀಳಲಿದೆ.

ಮತ್ತೊಂದೆಡೆ ಈಗಾಗಲೇ ಕಾಂಗ್ರೆಸ್ ಹಿರಿಯ ನಾಯಕರಾದ ರೋಷನ್ ಬೇಗ್ ಮತ್ತು ರಾಮಲಿಂಗಾರೆಡ್ಡಿ ಅವರ ವಿಶ್ವಾಸವನ್ನು ಸಿಎಂ ಗಳಿಸಿದ್ದಾರೆ ಎನ್ನಲಾಗಿದ್ದು, ಇದು ಸಿಎಂ ಅವರ ವಿಶ್ವಾಸಕ್ಕೆ ಕಾರಣ ಎನ್ನಲಾಗಿದೆ. ಹಿರಿಯ ಶಾಸಕರೊಂದಿಗೆ ರಾಜೀನಾಮೆ ನೀಡಿರುವ ನಾಲ್ಕು ಶಾಸಕರ ಮನವೊಲಿಸುವ ಸಾಧ್ಯತೆಯೂ ಇದೆ. ಸಿಎಂ ಅವರೇ ವಿಶ್ವಾಸಮತ ಯಾಚಿಸಲು ಕೇಳಿರುವ ಕಾರಣ ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದ್ದ ಕೆಲ ಶಾಸಕರು ಸೈಲೆಂಟ್ ಆಗುವ ಸಾಧ್ಯತೆಯಿದೆ.

ಅಲ್ಪಮತಕ್ಕೆ ಕುಸಿದಿರುವ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಬಿಜೆಪಿ ಮುಂದಾಗಿತ್ತು. ಆದರೆ ಈಗ ಸಿಎಂ ವಿಶ್ವಾಸಮತ ಯಾಚನೆ ಕೇಳಿರುವ ಕಾರಣ ಬಿಜೆಪಿಯ ಈ ಅವಕಾಶವೂ ಕೈತಪ್ಪಿ ಹೋಗಿದೆ.

ಇದರ ಜೊತೆಯಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರದವರೆಗೆ ಯಥಾಸ್ಥಿತಿಯಲ್ಲಿರುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಆದೇಶ ನೀಡಿದ ಕಾರಣ ಅತೃಪ್ತರ ಮನ ಒಲಿಕೆಗ ಸಮಯ ಸಿಕ್ಕಿದೆ. ಇಂದು ಸಿಎಂ ವಿಶ್ವಾಸ ಮತಯಾಚನೆಗೆ ಕೋರುತ್ತಾರೆ ಎನ್ನುವ ವಿಚಾರ ಕಾಂಗ್ರೆಸ್ ನಾಯಕರಿಗೆ ಸಹ ತಿಳಿದಿರಲಿಲ್ಲ. ಎಚ್‍ಡಿಡಿ ಸಲಹೆಯ ಹಿನ್ನೆಲೆಯಲ್ಲಿ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *