ಸ್ನೇಹಿತನ ಮಾತು ಕೇಳಿ ಸೈಲಂಟ್ ಆಗ್ತಾರಾ ಡಿಕೆಶಿ?

Public TV
2 Min Read

ಬೆಂಗಳೂರು: ಬೆಳಗಾವಿ ರಾಜಕಾರಣದಿಂದ ಆರಂಭವಾದ ಕಾಂಗ್ರೆಸ್ ಒಳಜಗಳ ಸಮ್ಮಿಶ್ರ ಸರ್ಕಾರದ ಪತನಕ್ಕೆ ಮುನ್ನುಡಿ ಬರೆದಂತೆ ಆಗುತ್ತಿದೆ. ಬೆಳಗಾವಿ ರಾಜಕಾರಣಕ್ಕೆ ಸಚಿವ ಡಿ.ಕೆ.ಶಿವಕುಮಾರ್ ಮಧ್ಯ ಪ್ರವೇಶಿಸಿದ್ದಕ್ಕೆ ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿವಂತೆ ಎಂಬ ಸುದ್ದಿ ಕಾಂಗ್ರೆಸ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆ ಡಿಕೆ ಶಿವಕುಮಾರ್ ಜೊತೆ ಮಾತನಾಡಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿವಿ ಮಾತು ಹೇಳಿದ್ದಾರಂತೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯ ಬಳಿಕ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಒಳ್ಳೆಯ ಸ್ನೇಹಿತರಾಗಿದ್ದಾರೆ. ಸರ್ಕಾರ ರಚಿಸಲು ನೆರವಾದ ನಿಮ್ಮ ಮೇಲೆ ಸರ್ಕಾರ ಕೆಡವಲು ಕಾರಣವಾದ ಆರೋಪ ಬರುವುದು ಬೇಡ. ಸ್ವಲ್ಪ ದಿನ ಬೆಳಗಾವಿ ಹಾಗೂ ಬಳ್ಳಾರಿ ಎರಡು ರಾಜಕಾರಣದಿಂದ ದೂರು ಉಳಿದುಕೊಳ್ಳಿ ಅಂತಾ ಸಿಎಂ ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಡಿಕೆಶಿ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ.

ಬಳ್ಳಾರಿ ಉಸ್ತುವಾರಿಯಿಂದ ನಿಮ್ಮನ್ನು ಬದಲಿಸುವ ಒತ್ತಡವು ಇದೆ. ಸಂಪುಟ ವಿಸ್ತರಣೆ ನಂತರ ಉಸ್ತುವಾರಿ ಬದಲಾವಣೆ ಮಾಡಿದರೆ ಆಯ್ತು. ಆದರೆ ಎರಡು ಜಿಲ್ಲೆಯ ರಾಜಕಾರಣದಲ್ಲಿ ಹೆಚ್ಚು ಭಾಗಿಯಾಗದಂತೆ ಸಿಎಂ ಮನವಿ ಮಾಡಿಕೊಂಡಿದ್ದಾರಂತೆ. ಸಿಎಂ ಸಲಹೆ ಅಂತೆ ಡಿಕೆಶಿ ಸದ್ಯಕ್ಕೆ ಸರ್ಕಾರದ ಹಿತದೃಷ್ಟಿಯಿಂದ ಬೆಳಗಾವಿ ಹಾಗೂ ಬಳ್ಳಾರಿ ರಾಜಕಾರಣದಿಂದ ಅಂತರ ಕಾಯ್ದುಕೊಳ್ಳುಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಕಳೆದ ಮೂರು ದಿನಗಳಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರಂತರವಾಗಿ ಮಾಜಿ ಸಿಎಂ ಯಡಿಯೂರಪ್ಪರಿಗೆ ಕರೆ ಮಾಡುತ್ತಿದ್ದು ರಾಜ್ಯ ರಾಜಕೀಯದ ಬೆಳವಣಿಗೆಯ ಇಂಚಿಂಚೂ ಮಾಹಿತಿಯನ್ನು ಪಡೆಯಿತ್ತಿದ್ದಾರಂತೆ. ಮಾಹಿತಿ ಪಡೆಯುತ್ತಾ ಮುಂದೆ ನಾಯಕರ ನಡೆ ಹೇಗಿರಬೇಕೆಂಬುದರ ಬಗ್ಗೆ ಸಲಹೆ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ಬುಧವಾರದೊಳಗೆ ಶುಭ ಸುದ್ದಿ ನೀಡುತ್ತೇವೆ ಅಂತಾ ಯಡಿಯೂರಪ್ಪ ಭರವಸೆ ನೀಡಿದ್ದಾರಂತೆ. ಆಪರೇಷನ್ ಕಮಲ ಸೇರಿದಂತೆ ಎಲ್ಲ ಚಟುವಟಿಕೆಗಳು ಗುಪ್ತವಾಗಿ ನಡೆಯಲಿ. ಯಾವ ನಾಯಕರು ಆಪರೇಷನ್ ಕಮಲದ ಬಗ್ಗೆ ಬಹಿರಂಗ ಹೇಳಿಕೆ ನೀಡುವುದು ಬೇಡ ಅಂತಾ ಅಮಿತ್ ಶಾ ಸೂಚಿಸಿದ್ದಾರೆ ಎನ್ನಲಾಗಿದೆ.

ಈ ಸರ್ಕಾರ ಸಂಪೂರ್ಣ ಸುಭದ್ರವಾದ ಸರ್ಕಾರವಾಗಿದ್ದು, ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯರವರ ರಕ್ಷಣೆಯೇ ದೊಡ್ಡ ಮಟ್ಟದಲ್ಲಿ ಇದೆ. ಬಹಳ ಜನಕ್ಕೆ ಈ ವಿಷಯ ತಿಳಿಸಿಲ್ಲ. ಸಿದ್ದರಾಮಯ್ಯ ಅವರಿಂದಲೇ ಸಂಪೂರ್ಣವಾದ 5 ವರ್ಷದ ಈ ಅವಧಿ ಪೂರೈಸಲಿದೆ. ಸುಮ್ಮನೆ ಅವರನ್ನು ಕೆಲವೊಂದು ವರ್ಗದಲ್ಲಿ ಅನಾವಶ್ಯಕವಾಗಿ ಅವರ ಹೆಸರನ್ನು ಎಳೆಯುತ್ತಾರೆ. ಸಿದ್ದರಾಮಯ್ಯ ಅವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಹೀಗಾಗಿ ಇವತ್ತು ಸರ್ಕಾರದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ಸಿದ್ದರಾಮಯ್ಯರಿಂದಲೇ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಎಂಬುದೆಲ್ಲಾ ಸುಳ್ಳು ಅಂತ ಹೇಳುವ ಮೂಲಕ ಮಾಜಿ ಸಿಎಂ ಪರ ಎಚ್‍ಡಿಕೆ ಬ್ಯಾಟಿಂಗ್ ಮಾಡಿದ್ದರು.

ನಮ್ಮ ಬಳಿ 104 ಶಾಸಕರಿದ್ದಾರೆ ಅಂತಾ ಹೇಳೋ ಗೋಮುಖ ವ್ಯಾಘ್ರ ಇದ್ದಾರಲ್ಲ ಅವರೇ ಸಮ್ಮಿಶ್ರ ಸರ್ಕಾರದ ವಿಲನ್ ಅಂತಾ ಹೇಳುವ ಮೂಲಕ ಎಸ್ ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ಸಿಎಂ ಟಾಂಗ್ ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *