ಶಬರಿಮಲೆ ಶಿಷ್ಟಾಚಾರ ಉಲ್ಲಂಘನೆ ಮಾಡೋದು ಸರಿಯಲ್ಲ -ಸಿಎಂ ಎಚ್‍ಡಿಕೆ

Public TV
2 Min Read

– ಪೂರ್ವಿಕರ ಸಂಸ್ಕೃತಿ ಹಾಗೇ ನಡೆದುಕೊಂಡು ಹೋಗಲಿ

 ಮೈಸೂರು: ಸಾವಿರಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಶವರಿಮಲೆ ಶಿಷ್ಟಾಚಾರ ಉಲ್ಲಂಘನೆ ಮಾಡುವುದು ಉತ್ತಮವಲ್ಲ. ಸದ್ಯ ಅಗೋಚರ ಶಕ್ತಿಗಳ ವಿರುದ್ಧ ನಾವು ಸಂಘರ್ಷ ಮಾಡುವ ವಾತಾವರಣ ನಿರ್ಮಾಣ ಮಾಡಿಕೊಂಡಿದ್ದೇವೆ. ಆದರೆ ಇದೀಗ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ವೈಜ್ಞಾನಿಕವಾಗಿ ನಾವು ಬಹಳ ಮುಂದೆ ದಾಪುಗಾಲು ಇಟ್ಟು ಮುಂದೆ ಹೋಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಚಂದ್ರ ಲೋಕದಲ್ಲಿ ವಾಸ ಮಾಡುವ ವ್ಯವಸ್ಥೆ ಮಾಡುವ ಆಶ್ವಾಸನೆಯನ್ನು ವಿಜ್ಞಾನಿಗಳು ನೀಡುತ್ತಿದ್ದಾರೆ. ಆದರೆ ಸಾಕಷ್ಟು ಮುಂದುವರಿದರೂ ಯಾವುದಕ್ಕೂ ಪ್ರಕೃತಿ ವಿಕೋಪಗಳನ್ನು ತಡೆಯಲಾಗುತ್ತಿಲ್ಲ. ನನ್ನ ನಿಲುವು ಎಂಬುದಕ್ಕಿಂತ ನಮ್ಮ ಸಂಸ್ಕೃತಿಯನ್ನು ಪೂರ್ವಿಕರು ಮಾಡುವಾಗ ಅವರದ್ದೇ ಉದ್ದೇಶಗಳು ಇರುತ್ತವೆ. ಇದೀಗ ಆ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಿದೆ ಎಂದು ಸಿಎಂ ಅಭಿಪ್ರಾಯಪಟ್ಟರು.

ಶಬರಿಮಲೆ ಕುರಿತು ನನ್ನ ಮಾತನ್ನು ಸಿಎಂ ಆಗಿ ಹೇಳಿದ್ದಲ್ಲ, ಅದು ವೈಯಕ್ತಿಕ ಅಭಿಪ್ರಾಯವಾಗಿ ವ್ಯಕ್ತಪಡಿಸುತ್ತಿದ್ದು, ಈ ಹಿಂದೆ ಹೇಗೆ ನಡೆದುಕೊಂಡು ಬಂದಿದೆ ಹಾಗೆಯೇ ನಡೆದುಕೊಂಡು ಹೋಗಲಿ. ನಮ್ಮ ಸಂಸ್ಕೃತಿಗಳು ಮುಂದುವರಿಯಲಿ. ಆದರೆ ನಮ್ಮಲ್ಲಿ ಕೆಲ ಮುಂದುವರಿದ ಮಂದಿ ಎಲ್ಲವನ್ನೂ ಮೌಢ್ಯ ಎನ್ನುತ್ತಾರೆ. ಆದರೆ ನಮ್ಮ ಎಲ್ಲಾ ಹಬ್ಬ ಹರಿದಿನ ಊಟ ವ್ಯವಸ್ಥೆ ಸೇರಿದಂತೆ ಎಲ್ಲದಕ್ಕೂ ವೈಜ್ಞಾನಿಕ ಕಾರಣವಿದೆ. ಇಂದು ನಡೆಯುತ್ತಿರುವ ವಿಕೋಪ ತಡೆಯಲು ಆಧುನಿಕ ತಂತ್ರಜ್ಞಾನ ಮತ್ತಷ್ಟು ಮುಂದುವರಿಯಬೇಕಿದೆ. ಇದು ನನ್ನ ಅಭಿಪ್ರಾಯ ಮಾತ್ರ. ಇದನ್ನು ಮತ್ತೊಬ್ಬರ ಮೇಲೆ ಒತ್ತಾಯ ಪೂರ್ವಕವಾಗಿ ಹಾಕುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

ನಮಗೆ ಸಂಬಂಧಿಸಿದಲ್ಲ:
ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಅದು ಸಂಬಂಧಿಸಿಲ್ಲ. ಈ ಹಿಂದಿನ ಸರ್ಕಾರ ಏನು ಪ್ರಕ್ರಿಯೆ ನಡೆಸಿದೆ ಅದು ಅಷ್ಟಕ್ಕೆ ನಿಂತಿದೆ. ನಮ್ಮ ಸರ್ಕಾರದ ರಚನೆಯಾದ ಬಳಿಕ ಯಾವುದೇ ಪ್ರಗತಿ ಪರಿಶೀಲನೆ ನಡೆದಿಲ್ಲ. ಅದ್ದರಿಂದ ಈ ಕುರಿತು ನಾನು ಹೆಚ್ಚು ಮಾತನಾಡಲ್ಲ. ಆದರೆ ಧರ್ಮದ ವಿಚಾರ ಬಂದಾಗ ಧರ್ಮ ಗುರುಗಳೇ ಮಾತುಕತೆ ಮೂಲಕ ಬಗೆಹರಿಸಕೊಳ್ಳಬೇಕು ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *