ಕಾವೇರಿ ರೈತರು ಸೇರಿ 51 ಕ್ರಿಮಿನಲ್ ಕೇಸ್ ವಾಪಸ್- ರಾಘವೇಶ್ವರ ಸ್ವಾಮೀಜಿಗಳ ಸಿಡಿ ಪ್ರಕರಣ ರೀ ಓಪನ್

Public TV
1 Min Read

ಬೆಂಗಳೂರು: ಕಾವೇರಿ, ಎತ್ತಿನಹೊಳೆ, ಕಳಸಾ ಬಂಡೂರಿ ಹೋರಾಟಗಾರರು ಸೇರಿದಂತೆ ಹಲವು ರೈತರ ಮೇಲೆ ದಾಖಲಾಗಿದ್ದ 51 ಕ್ರಿಮಿನಲ್ ಕೇಸ್‍ಗಳನ್ನು ಕೈಬಿಡಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

51 ಕೇಸ್‍ಗಳ ಪೈಕಿ ಮಂಡ್ಯ ಜಿಲ್ಲೆಯ ಕಾವೇರಿ ಹಿತರಕ್ಷಣಾ ಸಮಿತಿ ಹೋರಾಟಗಾರರ ಮೇಲೆಯೇ 35 ಕೇಸ್‍ಗಳಿವೆ. ಕಾವೇರಿ ಹೋರಾಟಗಾರ ಜಿ.ಮಾದೇಗೌಡರ ವಿರುದ್ಧ ದಾಖಲಾಗಿದ್ದ ಕೇಸನ್ನು ಸಹ ಸರ್ಕಾರ ಹಿಂಪಡೆದಿದೆ. ಈ ಮಧ್ಯೆ 2010ರಲ್ಲಿ ರಾಘವೇಶ್ವರ ಸ್ವಾಮೀಜಿಗಳ ಸಿಡಿಯನ್ನು ತಯಾರಿಸಿ ಹಂಚಿಕೆ ಮಾಡಿದ್ದ 12 ಮಂದಿ ವಿರುದ್ಧ 2015ರಲ್ಲಿ ಕೈಬಿಡಲಾಗಿದ್ದ ಪ್ರಕರಣವನ್ನು ರೀ ಓಪನ್ ಮಾಡಲು ಸರ್ಕಾರ ನಿರ್ಧರಿಸಿದೆ.

ಮಾಹಿತಿ:
2010ರಲ್ಲಿ ಗೋಕರ್ಣ ಠಾಣೆಯಲ್ಲಿ ಸ್ವಾಮೀಜಿಯ ನಕಲಿ ಸೆಕ್ಸ್ ಸಿ.ಡಿ ಮಾಡಿದ ಕುರಿತು ಹಾಗೂ ಗೋಕರ್ಣದಲ್ಲಿ ಹಂಚಿಕೆ ಮಾಡಿದ ಆರೋಪದ ಮೇಲೆ 12 ಜನರ ಮೇಲೆ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕುಮಟಾ ಕೋರ್ಟಿನಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಆಗಿತ್ತು. ಆದರೆ 2015ರಲ್ಲಿ ಅಂದಿನ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಆರೋಪಿಗಳ ಮೇಲಿನ ಕೇಸ್ ವಾಪಸ್ ಪಡೆದಿತ್ತು.

ಜನಸೇವೆಗಳನ್ನು ಮನೆ ಮನೆಗೆ ತಲುಪಿಸುವ ಜನಸೇವಕ ಯೋಜನೆಗೆ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಸರ್ಕಾರಿ ಸೇವೆ ಬೇಕಾದರೆ ಜನಸೇವಕ ಕೇಂದ್ರದ ಸಂಖ್ಯೆ 080-44554455ಗೆ ಕರೆ ಮಾಡಿದರೆ 53 ಸೇವೆಗಳು ಲಭ್ಯ ಆಗಲಿವೆ. ಪ್ರಾಯೋಗಿಕವಾಗಿ ಈಗ ಬೆಂಗಳೂರಿನ ರಾಜಾಜಿನಗರ, ಮಹಾದೇವಪುರ, ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಆರಂಭಿಸಲಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಐಟಿಐನಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸಲು ಸಂಪುಟ ಒಪ್ಪಿಗೆ ನೀಡಿದೆ. ಅಷ್ಟೇ ಅಲ್ಲದೆ ಆಕಾಶದೀಪ ಜನಸ್ನೇಹಿ ಸಹಾಯವೇದಿಕೆ, ಕಾರ್ಮಿಕ ಸಹಾಯವಾಣಿಗಳಿಗೆ ಸಹ ಸಂಪುಟ ಒಪ್ಪಿಗೆ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *