ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಕಿವಿ ಮಾತು ಹೇಳಿ ಎಚ್ಚರವಾಗಿರಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ಈ ವೇಳೆ ಜಲಸಂಪನ್ಮೂಲ ಇಲಾಖೆಯನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಈ ಇಲಾಖೆಯಲ್ಲಿ ಕೆಲ ಎಂಜಿನಿಯರ್ ಗಳು ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್ ಮತ್ತು ಹೆಚ್.ಡಿ.ರೇವಣ್ಣರಿಗೆ ಆಪ್ತರಾಗಿದ್ದಾರೆ. ಹಾಗಾಗಿ ಪ್ರತಿಯೊಂದು ನಿರ್ಣಯಗಳನ್ನು ಯೋಚಿಸಿ, ಅಧ್ಯಯನ ಮಾಡಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಂತರರಾಜ್ಯ ನದಿ ವಿವಾದಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಅಧಿಕಾರಿಗಳಿಂದ ಚೆನ್ನಾಗಿ ಬ್ರೀಫಿಂಗ್ ತೆಗೆದುಕೊಂಡು ಅಧ್ಯಯನ ಮಾಡಬೇಕು. ಯಾವುದೇ ಕಾರಣಕ್ಕೂ ವಿವಾದಾತ್ಮಕ ಹೇಳಿಕೆಯನ್ನ ಕೊಡಬಾರದೆಂದು ಸಿಎಂ ತಾಕೀತು ಮಾಡಿದ್ದಾರೆ. ನೀವು ಸ್ವಲ್ಪ ನಿರ್ಲಕ್ಷಿಸಿದ್ರೆ ಯಾವುದೇ ಕ್ಷಣದಲ್ಲಾದ್ರೂ ಡಿ.ಕೆ.ಶಿವಕುಮಾರ್ ಮತ್ತು ಹೆಚ್.ಡಿ.ರೇವಣ್ಣ ತಮ್ಮ ಆಪ್ತ ಅಧಿಕಾರಿಗಳ ಮೂಲಕ ನಿಮ್ಮನ್ನು ವಿವಾದದಗಳಲ್ಲಿ ಸಿಲುಕಿಸುವ ಸಾಧ್ಯತೆಗಳಿರುತ್ತವೆ ಎಂದು ಸಿಎಂ ಬುದ್ಧಿಮಾತು ಹೇಳಿದ್ದಾರೆ ಎನ್ನಲಾಗಿದೆ.