ಮೋಡ ಬಿತ್ತನೆಗೆ ಆರಂಭದಲ್ಲೇ ವಿಘ್ನ! ಮೊದಲ ದಿನ ಏನಾಯ್ತು?

Public TV
1 Min Read

ಬೆಂಗಳೂರು: ರಾಜ್ಯದ ಹಲವೆಡೆ ಮಳೆ ಬರುತ್ತಿದ್ದಂತೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಮೋಡಬಿತ್ತನೆ ಕಾರ್ಯ ಆರಂಭಿಸಿದೆ. ರಾಡರ್ ಸಮಸ್ಯೆಯಿಂದ ಮೋಡದ ಕ್ಲಿಯರ್ ಚಿತ್ರ ಸಿಗದಿದ್ದರೂ ಇವತ್ತೇ ಮೋಡ ಬಿತ್ತನೆ ಮಾಡಿದ್ದಾರೆ.

ಮೊದಲಿಗೆ ವಿಶೇಷ ವಿಮಾನ ಜಕ್ಕೂರಿನಿಂದ ಮಾಗಡಿ ಕಡೆ ತೆರಳಿತ್ತು. ಆದರೆ ಅಲ್ಲಿ ಮೋಡ ಇಲ್ಲದಿದ್ದ ಕಾರಣ ಬಿತ್ತನೆ ಮಾಡಲಾಗಲಿಲ್ಲ. ಬಳಿಕ ಬಿಡದಿ, ಆನೇಕಲ್, ರಾಮನಗರ, ನೆಲಮಂಗಲ ಭಾಗದ 60 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಮೋಡ ಬಿತ್ತನೆ ಮಾಡಲಾಯ್ತು.

ಬಳಿಕ ಹೊಸೂರಿನಲ್ಲಿ ಡೆಮೋ ಮಾಡುವಾಗ ಕೂಡಲೇ ಮಳೆ ಸುರಿದಿದೆ ಅಂತ ವಿಮಾನದಲ್ಲೇ ಮೋಡ ಬಿತ್ತನೆ ವೀಕ್ಷಣೆ ಮಾಡಿರುವ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. ಇವತ್ತು ಕಣ್ಣು ಗುರುತಿನ ಮೇಲೆ ಪ್ರಾಯೋಗಿಕ ಬಿತ್ತನೆ ಮಾಡಲಾಗಿದ್ದು, ನಾಳೆಯಿಂದ ರಾಡರ್ ಸಮೀಕ್ಷೆ ಮೇಲೆ ಮೋಡ ಬಿತ್ತನೆ ಮಾಡುವುದಾಗಿ ಸಚಿವರು ಹೇಳಿದ್ದಾರೆ.

ಜಕ್ಕೂರಿನಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ಸಚಿವರಾದ ಎಚ್‍ಕೆ ಪಾಟೀಲ್, ಸೀತಾರಾಂ ಹಾಗೂ ಕೃಷ್ಣಭೈರೇಗೌಡ ಚಾಲನೆ ಕೊಟ್ಟರು. ಆದರೆ ಹಾರಾಟಕ್ಕೆ ಕ್ಲಿಯರೆನ್ಸ್ ಸಿಗದ ಕಾರಣ ಮೋಡ ಬಿತ್ತನೆಯ ವಿಮಾನ ಹಾರಾಟ ಎರಡು ಗಂಟೆ ತಡ ಆಯಿತು.ಈ ವೇಳೆ ಸಚಿವರು ಎರಡು ಗಂಟೆಗಳ ಕಾಲ ವಿಮಾನದಲ್ಲೇ ಲಾಕ್ ಆಗಿದ್ದರು.

ಮಂಗಳವಾರದಿಂದ ಎಚ್‍ಎಎಲ್‍ನಿಂದ ವಿಮಾನ ಹಾರಾಟ ನಡೆಸಲಿದೆ. 60 ದಿನಗಳ ಕಾಲ ನಡೆಯಲಿರುವ ಮೋಡ ಬಿತ್ತನೆಗೆ 35 ಕೋಟಿ ರೂಪಾಯಿ ವೆಚ್ಚವಾಗಲಿದೆ. ಅತ್ತ ಯಾದಗಿರಿಯ ಸುರಪುರದಲ್ಲಿ ಇನ್ನೂ ರಾಡರ್ ಅಳವಡಿಸಿಲ್ಲ, ಟವರ್ ಸ್ಥಾಪಿಸಿಲ್ಲ. ಹೀಗಾಗಿ ನಾಲ್ಕೈದು ದಿನ ತಡವಾಗಲಿದೆ. ಗದಗದಲ್ಲಿ ಇವತ್ತು ನಡೆಯಬೇಕಿದ್ದ ಬಿತ್ತನೆ ಕಾರ್ಯ 24ಕ್ಕೆ ಮುಂದೂಡಿಕೆಯಾಗಿದೆ.

 

https://youtu.be/dBZN0I2Sv3M

Share This Article
Leave a Comment

Leave a Reply

Your email address will not be published. Required fields are marked *