ತಾರಕಕ್ಕೇರಿದೆ ಯಾದವಿ ಮಠದ ಒಳಜಗಳ – ಸ್ವಾಮೀಜಿ ಓಡಿಸಲು ಒಂದು ಬಣ, ಪರವಾಗಿ ಒಂದು ಟೀಂ

Public TV
1 Min Read

ಚಿತ್ರದುರ್ಗ: ಇದು ಇಡೀ ದೇಶಕ್ಕೆ ಮೀಸಲಾಗಿರುವ ಯಾದವ ಸಮುದಾಯಕ್ಕಿರುವ ಏಕೈಕ ಗುರುಪೀಠ. ಈಗ ಆ ಮಠದ ಪೀಠಾಧಿಪತಿಯನ್ನೇ ಬದಲಿಸುವ ವಿವಾದ ಭಕ್ತರಲ್ಲಿ ಭುಗಿಲೆದ್ದಿದೆ. ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಶ್ರೀಕೃಷ್ಣ ಯಾದವ ಮಹಾಸಂಸ್ಥಾನ ಮಠದ ಶ್ರೀಕೃಷ್ಣ ಯಾದವಶ್ರೀಗಳು ಪೀಠಾಧ್ಯಕ್ಷರು. ಅಖಿಲ ಭಾರತ ಯಾದವ ಸಮುದಾಯದ ಏಕೈಕ ಗುರುಪೀಠವಿದು.

ಈಗ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಸಿ.ಮಹಾಲಿಂಗಪ್ಪ, ಮಾಜಿ ಶಾಸಕ ಎ.ವಿ.ಉಮಾಪತಿ ಹಾಗೂ ನಿವೃತ್ತ ಶಿಕ್ಷಕ ಕೆ.ಜಿ.ಗಿರಿಯಪ್ಪ ಮತ್ತಿತರರು ಸೇರಿ ಪೀಠಾಧ್ಯರನ್ನ ಮಠದಿಂದ ಹೊರಕ್ಕೆ ಕಳುಹಿಸಲು ಸಂಚು ರೂಪಿಸಿದ್ದಾರೆ. ಈಗಾಗಲೇ ಯಾದವ ಸಂಘಕ್ಕೆ ಸೇರಿದ ಕಟ್ಟಡ ಮತ್ತು ಹಾಸ್ಟೆಲ್ ದುರುಪಯೋಗಪಡಿಸಿಕೊಂಡು ಮಠದ ಆಸ್ತಿ ಮೇಲೆ ಕಣ್ಣು ಹಾಕಿದ್ದಾರೆ. ಅಷ್ಟೇ ಅಲ್ಲ ಗುಂಡಾ ಪಡೆ ಜೊತೆ ಬಂದು ಮಠಕ್ಕೆ ನುಗ್ಗಿ ಖಾಲಿ ಪತ್ರದ ಮೇಲೆ ಸ್ವಾಮೀಜಿಗಳ ಸಹಿ ಮಾಡಿಸಿಕೊಂಡಿದ್ದಾರೆ ಅಂತ ಕೃಷ್ಣ ಯಾದವ ಮಠದ ಟ್ರಸ್ಟಿ ನಂದೀಶ್ ಆರೋಪಿಸಿದ್ದಾರೆ.

ಅತ್ತ ಗೊಲ್ಲರ ಸಂಘದ ಅಧ್ಯಕ್ಷ ಹಾಗು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಸಿ.ಮಹಾಲಿಂಗಪ್ಪ, ಕೆ.ಜಿ.ಗಿರಿಯಪ್ಪ ಹೇಳೋದೇ ಬೇರೆ. ಶ್ರೀಗಳು ಭೂಮಿ ಪರಾಭಾರೆ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅದಕ್ಕೆ ಇನ್ನೊಂದು ವಾರದಲ್ಲಿ ಪೀಠ ತ್ಯಾಗ ಮಾಡಿ ಹೋಗುವುದಾಗಿ ಪತ್ರ ಬರೆದುಕೊಟ್ಟಿದ್ದಾರೆ. ನಾವ್ಯಾರೂ ಪ್ರಾಣ ಬೆದರಿಕೆ ಹಾಕಿಲ್ಲವೆಂದು ಯಾದವ ಸಂಘದ ಅಧ್ಯಕ್ಷ ಸಿ.ಮಹಾಲಿಂಗಪ್ಪ ಸ್ಪಷ್ಟಪಡಿಸಿದ್ದಾರೆ.

ಯಾದವಿ ಕಲಹದಿಂದಾಗಿ ಮಠದ ಭಕ್ತರಲ್ಲೇ ಎರಡು ಗುಂಪುಗಳಾಗಿದ್ದು, ಪರ ವಿರೋಧ ವ್ಯಕ್ತವಾಗುತ್ತಿದೆ. ಪ್ರಕರಣ ಕೋಟೆ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದ್ದು, ಮುಂದೇನಾಗುತ್ತೋ ಎಂಬ ಆತಂಕ ಭಕ್ತರಲ್ಲಿ ಮೂಡಿದೆ.

 

Share This Article
Leave a Comment

Leave a Reply

Your email address will not be published. Required fields are marked *