ನಾಗರಿಕತ್ವ ಮಸೂದೆಗೆ ರಾಷ್ಟ್ರಪತಿ ಸಹಿ, ದೇಶಾದ್ಯಂತ ಜಾರಿ

Public TV
2 Min Read

– ಬಿಜೆಪಿ ಶಾಸಕರ ಮನೆ, ಸರ್ಕಾರಿ ಕಚೇರಿಗಳಿಗೆ ಬೆಂಕಿ
– ಅನಿರ್ದಿಷ್ಟಾವಧಿ ಕರ್ಫ್ಯೂ, ಇಂಟರ್‌ನೆಟ್ ಸ್ಥಗಿತ

ನವದೆಹಲಿ: ಈಶಾನ್ಯ ಭಾರತದಲ್ಲಿ ದಂಗೆಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಈ ಮೂಲಕ ಮಸೂದೆಯು ಕಾಯ್ದೆ ರೂಪ ಪಡೆದುಕೊಂಡಿದ್ದು, ಮಧ್ಯರಾತ್ರಿಯಿಂದಲೇ ವಿವಾದಿತ ಕಾನೂನು ದೇಶಾದ್ಯಂತ ಜಾರಿ ಆಗಿದೆ.

ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ 2014ರೊಳಗೆ ವಲಸೆ ಬಂದಿರುವ ಹಿಂದೂ, ಕ್ರಿಶ್ಚಿಯನ್, ಬೌದ್ಧ, ಜೈನ ಮತ್ತು ಪಾರ್ಸಿ ಮತಸ್ಥರಿಗೆ ಭಾರತದ ಪೌರತ್ವವನ್ನು ನೀಡಲಾಗುತ್ತದೆ. ಭಾರೀ ಚರ್ಚೆಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಮಸೂದೆ ಬುಧವಾರ ರಾಜ್ಯಸಭೆಯಲ್ಲಿ ಅಂಗೀಕಾರವಾಗಿತ್ತು. ರಾಜ್ಯ ಸಭೆಯಲ್ಲಿ ಮಸೂದೆಯ ಪರವಾಗಿ 125 ಮತ್ತು ವಿರೋಧವಾಗಿ 105 ಮತಗಳು ಬಿದಿದ್ದವು. ಇತ್ತ ಲೋಕಸಭೆಯಲ್ಲಿ ಸೋಮವಾರ ಪೌರತ್ವ ತಿದ್ದುಪಡಿ ಮಸೂದೆ 311 ಮತಗಳಿಂದ ಪಾಸ್ ಆಗಿತ್ತು. ಇದನ್ನೂ ಓದಿ: ರಾಜ್ಯಸಭೆಯಲ್ಲಿಯೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ

ಇತ್ತ ಪೌರತ್ವ ಕಾನೂನಿನ ವಿರುದ್ಧ ಅಸ್ಸಾಂನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಗೋಲಿಬಾರ್ ಗೆ ಇಬ್ಬರು ಪ್ರಾಣಬಿಟ್ಟಿದ್ದು, ಆಕ್ರೋಶದ ಬೆಂಕಿ ನೆರೆ ಮೇಘಾಲಯ ರಾಜ್ಯಕ್ಕೂ ವ್ಯಾಪಿಸಿದೆ. ಚಬುವಾದಲ್ಲಿ ಅಸ್ಸಾಂ ಬಿಜೆಪಿ ಶಾಸಕ ಬಿನೋದ್ ಹಜಾರಿಕಾ ಮನೆಗೆ ಪ್ರತಿಭಟನಕಾರರು ಬೆಂಕಿ ಹಾಕಿದ್ದಾರೆ. 10 ಜಿಲ್ಲೆಗಳಲ್ಲಿ ಮೊಬೈಲ್ ಮತ್ತು ಬ್ರಾಡ್‍ಬ್ಯಾಂಡ್ ಇಂಟರ್‌ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದ್ದು, ರಾಜಧಾನಿ ಗುವಾಹಟಿ ಮತ್ತು ದಿಬ್ರುಗಢದಲ್ಲಿ ಕರ್ಫ್ಯೂ ಮುಂದಿವರಿಸಲಾಗಿದೆ. ಇದನ್ನೂ ಓದಿ: ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಪಾಸ್ – ಪರ 311, ವಿರುದ್ಧ 80 ಮತ

ತಿನ್ಸುಕಿಯಾ ಜಿಲ್ಲೆಯಲ್ಲಿ ಇವತ್ತು ಸಂಜೆ ಐದು ಗಂಟೆವರೆಗೂ ಕರ್ಫ್ಯೂ ವಿಧಿಸಲಾಗಿದ್ದು, ಗ್ರಾಮ ಪಂಚಾಯತಿ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ. ಮೇಘಾಲಯದಲ್ಲಿ ಅಂಗಡಿಗಳು, ವಾಹನಗಳು ಬೆಂಕಿಗಾಹುತಿಯಾಗಿದೆ. ತ್ರಿಪುರಾ ಸಿಎಂ ಬಿಪ್ಲಬ್‍ದೇಬ್ ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆಯ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಪೌರತ್ವ ಕಾನೂನು ವಿರುದ್ಧ ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಇತ್ತ ದೆಹಲಿಯಲ್ಲಿರುವ ಇಂಡಿಯಾ ಗೇಟ್ ಎದುರು ರಾತ್ರಿ ಭಾರೀ ಪ್ರತಿಭಟನೆ ನಡೆದಿದೆ. ಇದನ್ನೂ ಓದಿ: ಪೌರತ್ವ ತಿದ್ದುಪಡಿ ಮಸೂದೆಯ ಪ್ರತಿ ಹರಿದು ಹಾಕಿದ ಓವೈಸಿ

Share This Article
Leave a Comment

Leave a Reply

Your email address will not be published. Required fields are marked *