ಮಂಡ್ಯ: ಪ್ರೀತಿಸಲಿಲ್ಲ ಹಾಗೂ ಮದುವೆಯಾಗಲು ಒಪ್ಪುತ್ತಿಲ್ಲ ಅಂತಾ ಸಿನಿಮೀಯ ರೀತಿ ಯುವಕನೊಬ್ಬ ತನ್ನ ಸಂಬಂಧಿ ಯುವತಿಯನ್ನು ಅಪಹರಿಸಲು ಯತ್ನಿಸಿ, ವಿಫಲನಾದ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಸುನೀಲ್ (26) ಅಪಹರಣಕ್ಕೆ ಯತ್ನಿಸಿದ್ದ ಯುವಕ. ಯುವತಿಯು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಆಕೆಗೆ ಕಳೆದ ಆರು ತಿಂಗಳಿನಿಂದ ಪ್ರೀತಿಸುವಂತೆ ಹಾಗೂ ಮದುವೆ ಆಗುವಂತೆ ಸುನೀಲ್ ಕಿರುಕುಳ ನೀಡುತ್ತಿದ್ದ. ಈ ಕುರಿತು ಯುವತಿ ಕುಟುಂಬದವರಿಗೆ ತಿಳಿಸಿದ್ದಳು. ಅವರು ಕೂಡಾ ಆಕೆಯ ತಂಟೆಗೆ ಬರದಂತೆ ಎಚ್ಚರಿಗೆ ನೀಡಿದ್ದರು.
ಕುಟುಂಬಸ್ಥರ ಎಚ್ಚರಿಕೆಗೂ ಜಗ್ಗದ ಸುನೀಲ್ ಇಂದು ಕೆಲವು ಸ್ನೇಹಿತರೊಂದಿಗೆ ಕಾರಿನಲ್ಲಿ ಬಂದು ಯುವತಿ ತಾಯಿ ಮತ್ತು ಸಹೋದರನ ಮೇಲೆ ಹಲ್ಲೆ ನಡೆಸಿ ಅಪಹರಣಕ್ಕೆ ಯತ್ನಿಸಿದ್ದನು. ಸ್ಥಳದಲ್ಲಿಯೇ ಇದ್ದ ಕೆಲ ಗ್ರಾಮಸ್ಥರು ಯುವತಿಯನ್ನು ರಕ್ಷಿಸುತ್ತಿದ್ದಂತೆ ಯುವಕ ಕಾರು ಹತ್ತಿ ಪರಾರಿಯಾಗಿದ್ದನು.
ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಯುವತಿ ಕುಟುಂಬಸ್ಥರು, ಯುವಕನಿಂದ ಪುನಃ ತೊಂದರೆಯಾಗದಂತೆ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಆರೋಪಿ ಸುನೀಲ್ನನ್ನು ಪೊಲೀಸರು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv