ಉಡುಪಿಯಲ್ಲಿ ನಿಯಮಬದ್ಧ ಕ್ರಿಸ್‌ಮಸ್‌ – ಬಿಷಪ್ ನಿರ್ಧಾರಕ್ಕೆ ಎಲ್ಲೆಡೆಯಿಂದ ಶ್ಲಾಘನೆ

Public TV
2 Min Read

ಉಡುಪಿ: ಕೋವಿಡ್ ಮೂರನೆ ಅಲೆ, ಹೊಸ ರೂಪಾಂತರಿ ಓಮಿಕ್ರಾನ್‌ ಭೀತಿಯ ನಡುವೆ ಉಡುಪಿ ಧರ್ಮಪ್ರಾಂತ್ಯದಲ್ಲಿ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಸರಳವಾಗಿ ಕ್ರಿಸ್‌ಮಸ್‌ ಆಚರಿಸಲಾಯಿತು.

ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬಾರದು ಎಂದು ತನ್ನ ಅಧೀನದಲ್ಲಿರುವ ಚರ್ಚ್‌ಗಳಿಗೆ ಆದೇಶ ಹೊರಡಿಸಿದ್ದರು. ಚರ್ಚ್ ಹಾಲ್‌ನಲ್ಲಿ ಯೇಸು ಕ್ರಿಸ್ತರ ಜನ್ಮದಿನದಂದು ಬಲಿಪೂಜೆಗಳನ್ನು ಮಾತ್ರ ಮಾಡಬೇಕು ಎಂದು ನಿರ್ಣಯ ಕೈಗೊಂಡಿದ್ದರು. ತನ್ನ ಅಧೀನದಲ್ಲಿ ಬರುವ ಏಳು ತಾಲ್ಲೂಕುಗಳ ಚರ್ಚ್‌ಗಳಲ್ಲಿ ಈ ನಿಯಮವನ್ನು ಪಾಲಿಸಲಾಯಿತು. ಇದನ್ನೂ ಓದಿ: ಕ್ರಿಸ್‌ಮಸ್‌ ವಿಶೇಷ – ಸಮುದ್ರ ತೀರದ ಮರಳಿನಲ್ಲಿ 5,400 ಗುಲಾಬಿ ಹೂಗಳಿಂದ ಅರಳಿದ ಸಂತಾ ಕ್ಲಾಸ್‌ ಕಲಾಕೃತಿ

ಈ ಬಾರಿ ಕೊರೊನಾ ಆತಂಕ ಹಿನ್ನೆಲೆಯಲ್ಲಿ ಪ್ರತಿ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಬಲಿಪೂಜೆಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಗಿತ್ತು. ಸಾಮೂಹಿಕ ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಚರ್ಚ್ ಆವರಣ ಹಾಗೂ ಚರ್ಚ್ ಸಭಾಂಗಣದ ಹೊರಗೆ ಯಾವುದೇ ವ್ಯವಸ್ಥೆಗಳನ್ನು ಮಾಡಲಾಗಿಲ್ಲ. ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ನೇತೃತ್ವದಲ್ಲಿ ವಿಶೇಷ ಬಲಿ ಪೂಜಾ ಕಾರ್ಯಕ್ರಮ ನೆರವೇರಿತು. ನೂರಾರು ಭಕ್ತರು ಧಾರ್ಮಿಕ ಸಭೆಯಲ್ಲಿ ಭಾಗಿಯಾದರು.

ಕ್ರಿಸ್‌ಮಸ್‌ ಸಂದರ್ಭದಲ್ಲಿ ಕ್ರೈಸ್ತ ಧರ್ಮೀಯರು ಚರ್ಚ್ ಮತ್ತು ಮನೆಗಳಲ್ಲಿ ಕ್ರಿಬ್ ತಯಾರು ಮಾಡುತ್ತಾರೆ. ಭಗವಾನ್ ಯೇಸು ಸ್ವಾಮಿ ಗೋದಲಿಯಲ್ಲಿ ಹುಟ್ಟಿದ್ದಾನೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಅಂದಿನ ದಿನವನ್ನು ಮನೆಗಳಲ್ಲಿ ಗೋದಲಿ ತಯಾರಿಸಿ ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಲಾಗುತ್ತದೆ. ಉಡುಪಿ ಧರ್ಮ ಪ್ರಾಂತ್ಯದಲ್ಲಿ ಯೇಸು ಕ್ರಿಸ್ತರು ಹುಟ್ಟಿದ ಘಟನೆಯನ್ನು ಮರುಸೃಷ್ಟಿ ಮಾಡಲಾಯಿತು. ಇದನ್ನೂ ಓದಿ: ಯೇಸು ಕ್ರಿಸ್ತರ ಉದಾತ್ತ ಸಂದೇಶಗಳನ್ನು ಸ್ಮರಿಸೋಣ: ಮೋದಿ ಕ್ರಿಸ್‌ಮಸ್‌ ಶುಭಾಶಯ

ಪ್ರತಿವರ್ಷ ಎಲ್ಲಾ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ ವಿವಿಧ ವಿನೋದಾವಳಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳು ನಡೆಯುತ್ತವೆ. ಈ ಬಾರಿ ಯಾವುದಕ್ಕೂ ಕೂಡ ಇಲ್ಲ ಅವಕಾಶ ನೀಡಿಲ್ಲ. ಕೊರೊನಾ ಸೋಂಕನ್ನು ಸಂಪೂರ್ಣ ಹತೋಟಿಗೆ ತರುವ ಉದ್ದೇಶ ಹಾಗೂ ಸಮಾಜಕ್ಕೆ ಮಾದರಿಯಾಗಬೇಕೆಂಬ ಹಿನ್ನೆಲೆಯಲ್ಲಿ ಉಡುಪಿ ಬಿಷಪ್ ಈ ನಿಯಮ ರೂಪಿಸಿದ್ದಾರೆ.

ಸರ್ಕಾರ ನಿಯಮ ರೂಪಿಸುವ ಮೊದಲೇ ಉಡುಪಿ ಬಿಷಪ್ ಒಂದು ನಿರ್ಧಾರಕ್ಕೆ ಬಂದಿದ್ದರು. ಅದನ್ನು ಉಡುಪಿ ಧರ್ಮಪ್ರಾಂತ್ಯದ ಎಲ್ಲರೂ ಪಾಲಿಸಿದ್ದಾರೆ. ಯಾವುದೇ ಚರ್ಚ್‌ಗಳಿಗೆ ಯಾರೂ ಆಸ್ಪದ ಕೊಡಲಿಲ್ಲ ಎಂದು ಉಡುಪಿಯ ಜಸ್ಟಿನ್ ಎರಲ್ ಡಿಸಿಲ್ವ ʻಪಬ್ಲಿಕ್ ಟಿವಿʼಗೆ ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *